ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ: ಕಾರಣ ಇಲ್ಲಿದೆ

ಗದಗ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಮೇಲಾಧಿಕಾರಿಗಳ ಕಿರುಕುಳ ಹಾಗೂ ವೇತನ ತಡೆಹಿಡಿದಿರುವುದಕ್ಕೆ ಬೇಸತ್ತು ರಾಷ್ಟ್ರಪತಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಮಾನಸಿಕ ಹಿಂಸೆ ಮತ್ತು ಆರ್ಥಿಕ ಸಂಕಷ್ಟದಿಂದ ಜೀವನ ನಿರ್ವಹಣೆ ಕಷ್ಟವಾಗಿರುವ ಕಾರಣ, ತಮಗೆ ಈ ದುಃಸ್ಥಿತಿಯಿಂದ ಮುಕ್ತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ: ಕಾರಣ ಇಲ್ಲಿದೆ
ದಯಾಮರಣ ಕೋರಿ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ
Edited By:

Updated on: Jan 20, 2026 | 3:39 PM

ಗದಗ, ಜನವರಿ 20: ನೌಕರರ ಮೇಲೆ ಅಧಿಕಾರಿಗಳ ಕಿರುಕುಳವು ಇತ್ತೀಚಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಕೆಲ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನೌಕರರ ಮೇಲೆ ಅನಗತ್ಯ ಒತ್ತಡ, ಮಾನಸಿಕ ಹಿಂಸೆ, ಬೆದರಿಕೆ ಹಾಗೂ ಅವಮಾನಕರ ವರ್ತನೆ ತೋರುವ ಘಟನೆಗಳು ಹೆಚ್ಚುತ್ತಿವೆ. ಈ ನಡುವೆ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಗ್ರಾಮ ಲೆಕ್ಕಾಧಿಕಾರಿಯೋರ್ವ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಲೆಕ್ಕಾಧಿಕಾರಿ ಯೋಗೇಶ್ ಕುರಹಟ್ಟಿ ಅಧಿಕಾರಿಗಳ ಮೇಲೆ ವಿನಾ ಕಾರಣ ಕಿರುಕುಳ ಆರೋಪ ಮಾಡಿದ್ದು, ತನ್ನ ವೇತನವನ್ನೂ ತಡೆಹಿಡಿಯಲಾಗಿದೆ ಎಂದು ದೂರಿದ್ದಾರೆ. ಜೀವನೋಪಾಯ ನಿರ್ವಹಣೆ ಕಷ್ಟವಾದ ಕಾರಣ ತನಗೆ ದಯಾಮರಣ ನೀಡಿ ಎಂದು ಪತ್ರ ಮುಖೇನ ಆಗ್ರಹಿಸಿದ್ದಾರೆ. ಕಂದಾಯ ಇಲಾಖೆಯ ತಾಲೂಕಾಡಳಿತ ವ್ಯವಸ್ಥೆ ಹಾಗೂ ಮೇಲಧಿಕಾರಿಗಳು ಇಲಾಖೆ ಕೆಲಸ ಸಮರ್ಪಕವಾಗಿ ನಿರ್ವಹಿಸಿದರೂ ಕಿರುಕುಳ ನೀಡುತ್ತಿದ್ದಾರೆ. ವಿನಾಕಾರಣ ಮೇಲಿಂದ ಮೇಲೆ ನೋಟಿಸ್ ನೀಡಿರೋದಲ್ಲದೆ, ಕಳೆದ 2 ತಿಂಗಳಿಂದ ವೇತನ ತಡೆಹಿಡಿಯಲಾಗಿದೆ. ಅನಾರೋಗ್ಯ ಪೀಡಿತ ತಾಯಿ ಇದ್ದಾರೆ, ಜೊತೆಗೆ ತಾನು ಅನಾರೋಗ್ಯ ಪೀಡಿತನಾಗಿರೋದ್ರಿಂದ ಜೀವನ ಕಷ್ಟವಾಗಿದೆ ಎಂಬುದು ಯೋಗೇಶ್​​ ಅಳಲು.

ಇದನ್ನೂ ಓದಿ: ಜಾಗಿಂಗ್ ಹೋಗುತ್ತಿದ್ದ ಮಹಿಳೆಯ ಖಾಸಗಿ ಭಾಗದ ಬಗ್ಗೆ ಅಸಭ್ಯವಾಗಿ ಮಾತನಾಡಿದ ಬಾಲಕರು

ರಾಷ್ಟ್ರಪತಿಗೆ ಬರೆದ ಪತ್ರದಲ್ಲೇನಿದೆ?

ಪೂರ್ಣ ಶ್ರಮದಿಂದ ಕೆಲಸ ಮಾಡಿದರೂ ಸರಿಯಾಗಿ ಸಂಬಳ ದೊರಕುತ್ತಿಲ್ಲ. ತನಗೆ ವೃದ್ಧ ತಾಯಿ ಇದ್ದು, ಅವರನ್ನು ಪೋಷಿಸುವ ಜವಾಬ್ದಾರಿಯೂ ನನ್ನ ಮೇಲಿದೆ. ಸರ್ಕಾರದ ಕೆಲಸದಲ್ಲಿದ್ದರೂ, ನನಗೆ ಸರಿಯಾಗಿ ಸಂಬಳ ದೊರಕದೆ ಬಹಳ ಕಷ್ಟ ಅನುಭವಿಸುತ್ತಿದ್ದೇನೆ. ಈ ಪರಿಸ್ಥಿತಿಯಿಂದ ಜೀವನ ಸಾಗಿಸುವುದು ಅತೀವ ಕಠಿಣವಾಗಿದ್ದು, ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಸಂಕಟ ಅನುಭವಿಸುತ್ತಿದ್ದೇನೆ. ಆದ್ದರಿಂದ ದಯವಿಟ್ಟು ನನಗೆ ದಯಾಮರಣ ನೀಡುವ ಮೂಲಕ ಈ ದುಃಸ್ಥಿತಿಯಿಂದ ಮುಕ್ತಿಗೊಳಿಸಬೇಕೆಂದು ಪ್ರಾರ್ಥಿಸೋದಾಗಿ ಯೋಗೇಶ್ ಪ್ರತದಲ್ಲಿ ಉಲ್ಲೇಖಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.