ಗದಗ: ಜಿಲ್ಲೆಯಲ್ಲೇ ಅತಿ ಹೆಚ್ಚು ಮಕ್ಕಳಿರುವ ಆದರಹಳ್ಳಿ ಸರ್ಕಾರಿ ಶಾಲೆಯಲ್ಲಿ ನೀರಿಗಾಗಿ ಪರದಾಟ

| Updated By: Rakesh Nayak Manchi

Updated on: Aug 21, 2023 | 8:11 PM

ಮಕ್ಕಳ ಸಂಖ್ಯೆ ಇಲ್ಲಾ ಅಂತ ಸರ್ಕಾರ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಪ್ಲಾನ್ ಮಾಡಲಾಗುತ್ತಿದೆ. ಆದರೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರೂ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುತ್ತಿದ್ದಾರೆ.

ಗದಗ: ಜಿಲ್ಲೆಯಲ್ಲೇ ಅತಿ ಹೆಚ್ಚು ಮಕ್ಕಳಿರುವ ಆದರಹಳ್ಳಿ ಸರ್ಕಾರಿ ಶಾಲೆಯಲ್ಲಿ ನೀರಿಗಾಗಿ ಪರದಾಟ
ಆದರಹಳ್ಳಿ ಸರ್ಕಾರಿ ಶಾಲೆಯಲ್ಲಿ ನೀರಿನ ಸಮಸ್ಯೆ
Follow us on

ಗದಗ, ಆಗಸ್ಟ್ 21: ಜಿಲ್ಲೆಯಲ್ಲೇ (Gadag) ಅತೀ ಹೆಚ್ಚು ಮಕ್ಕಳು ಇರುವ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ನೀರಿಗಾಗಿ ಪರದಾಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಬಾಟಲ್​ಗಳಲ್ಲು ಕುಡಿಯುವ ನೀರನ್ನು ತುಂಬಿಸಿಕೊಂಡು ತರುತ್ತಿದ್ದಾರೆ. ಇತ್ತ ಶಾಲೆಯ ಅಡುಗೆ ಸಿಬ್ಬಂದಿ, ಕೊಡಗಳಲ್ಲಿ ನೀರು ತುಂಬಿಸಿ ತಳ್ಳುವ ಗಾಡಿಯಲ್ಲಿ ತರುವ ಸ್ಥಿತಿ ನಿರ್ಮಾನವಾಗಿದೆ.

ಸರ್ಕಾರಿ ಶಾಲೆಯಲ್ಲಿ ಮಕ್ಕಳು ಇಲ್ಲ ಅಂತ ರಾಜ್ಯ ಹಲವಡೆ ಸರ್ಕಾರ ಶಾಲೆಗಳು ಮುಚ್ಚಲು ಪ್ಲಾನ್ ಮಾಡುತ್ತಿದ್ದಾರೆ. ಆದರೆ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 600ಕ್ಕೂ ಅಧಿಕ ಮಕ್ಕಳು ಇದ್ದಾರೆ. ಗದಗ ಜಿಲ್ಲೆಯಲ್ಲೇ ಅತೀ ಹೆಚ್ಚು ಮಕ್ಕಳು ಇರುವ ಶಾಲೆಯೂ ಇದಾಗಿದೆ. ಆದರೆ, ಶಿಕ್ಷಣ ಇಲಾಖೆ ಭರ್ಪೂರ ಮಕ್ಕಳು ಇರುವ ಈ ಶಾಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ.

ಕನಿಷ್ಠ ಕುಡಿಯುವ ನೀರು ಕೊಡುವಷ್ಟು ಗದಗ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಕರುಣೆ ತೋರಿಲ್ಲ. ಇದು ಒಂದೆರಡು ದಿನದ ಸಮಸ್ಯೆಯಲ್ಲ. ಶಾಲೆ ಆರಂಭವಾದಾಗಿನಿಂದಲೇ ಈ ಸಮಸ್ಯೆ ಇದೆ. ನೀರಿನ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ವಿದ್ಯಾರ್ಥಿನಿಯರು ಕಿಡಿಕಾರಿದ್ದಾರೆ.

ಮನೆಯಿಂದ ನೀರು ತರುತ್ತಿರುವ ವಿದ್ಯಾರ್ಥಿಗಳು

ಕುಡಿಯುವ ನೀರನ್ನು ನಿತ್ಯ ಮಕ್ಕಳು ತಮ್ಮ ಮನೆಯಿಂದಲೇ ತಿರುತ್ತಿದ್ದಾರೆ. ಆ ನೀರು ಖಾಲಿಯಾಗಿ ಬಾಯಾರಿಕೆ ಆದರೆ ಮತ್ತೆ ಮನೆಗೇ ಹೋಗಬೇಕು. ಇದರಿಂದ ಮಕ್ಕಳ ಪಾಠದ ಸಮಯ ಹಾಳಾಗುತ್ತಿದೆ. ಹೀಗಾಗಿ ಮಕ್ಕಳ ಶಿಕ್ಷಣಕ್ಕೆ ನೀರಿನ ಸಮಸ್ಯೆ ಅಡ್ಡಿಯಾಗಿದ್ದು, ಬಡ ಮಕ್ಕಳು ಸರಿಯಾಗಿ ಕಲಿಯುವುದಾದರೂ ಹೇಗೆ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.

ಇನ್ನು, ಶಾಲೆಯ ಪಾಕ ಶಾಲೆಯ ಬಗ್ಗೆ ಹೇಳುವುದಾದರೆ, 600 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಊಟ ಸಿದ್ಧಪಡಿಸಲು ನಿತ್ಯ ನೀರು ತುಂಬಿಸಿ ತಳ್ಳುವ ಗಾಡಿಯ ಮೂಲಕ ತರಬೇಕು. ಇಷ್ಟೊಂದು ಮಕ್ಕಳಿಗೆ ಅಡುಗೆ ಮಾಡಲು ಇಲ್ಲಿನ ಅಡುಗೆ ಸಹಾಯಕರು ಕೂಡಾ ಪರದಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹಾವೇರಿ ಶಾಲೆಗಳಲ್ಲಿ ರೇಷನ್ ಪೂರೈಕೆಯಾಗದೆ ಸ್ಥಗಿತಗೊಂಡ ಬಿಸಿಯೂಟ ಯೋಜನೆ

ಶಾಲೆಯಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿನಿಯರು, ಶಿಕ್ಷಕಿಯರಿಗೆ ಶೌಚಾಲಯಕ್ಕೆ ಹೋಗಲೂ ಸಮಸ್ಯೆ. ಒಂದಷ್ಟು ವಿದ್ಯಾರ್ಥಿನಿಯರು ತಮ್ಮ ಮನೆಗಳಿಗೆ ಹೋಗಿ ಶೌಚಾ ಮಾಡಿ ಬರುತ್ತಿದ್ದಾರೆ. ಇನ್ನು ನಿತ್ಯ ಬಳಕೆಗೆ ನೀರು ತರಲು ವಿದ್ಯಾರ್ಥಿಗಳು ಪಾಠದ ಸಮಯವನ್ನು ಬಳಕೆ ಮಾಡುತ್ತಿದ್ದಾರೆ.

ನೀರಿನ ಸಮಸ್ಯೆ ಬಗ್ಗೆ ಡಿಡಿಪಿಐ ಅವರನ್ನು ಕೇಳಿದರೆ, ನನ್ನ ಗಮನಕ್ಕೆ ಈಗ ಬಂದಿದೆ. ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಶಾಲೆಯಲ್ಲಿ ಇತ್ತೀಚಿನ ಎರಡು ನೀರಿನ ಟ್ಯಾಂಕ್ ಅಳವಡಿಸಿದ್ದಾರೆ. ಆದ್ರೆ, ಆ ಟ್ಯಾಂಕ್ ಗಳಿಗೆ ಹನಿ ನೀರು ಬಿಟ್ಟಿಲ್ಲ. ಗ್ರಾಮ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಮಕ್ಕಳು ಸಂಕಷ್ಟ ಎದುರಿಸುತ್ತಿದ್ದಾರೆ‌.

ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಮಕ್ಕಳ ಸಂಖ್ಯೆ ಇರುವ ಶಾಲೆಯತ್ತ ಗಮನಹರಿಸಬೇಕಿದೆ. ಕೂಡಲೇ ಸಮರ್ಪಕವಾಗಿ ನೀರಿನ ವ್ಯವಸ್ಥೆ ಮಾಡಬೇಕಿದೆ. ಇನಾದರೂ ಅಧಿಕಾರಿಗಳು ಮೌಲ ಸೌಕರ್ಯ ಪೈಕಿ ಒಂದಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Mon, 21 August 23