ಗದಗ: ಸರ್ಕಾರಿ ಶಾಲೆಯ ಮೈದಾನದಲ್ಲಿ ತೆಲೆ ಎತ್ತಿದ ಅಕ್ರಮ ಮನೆಗಳು; ನಮ್ಮ ಶಾಲೆ ಉಳಿಸಿ ಎಂದು ವಿದ್ಯಾರ್ಥಿಗಳ ಆಕ್ರೋಶ!

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 26, 2023 | 9:50 PM

ಮಕ್ಕಳ ಶಿಕ್ಷಣಕ್ಕಾಗಿ ಇಡೀ ಊರಿನ‌ ಜನರು ಸೇರಿ ಹಣ ಸಂಗ್ರಹ ಮಾಡಿ ಶಾಲೆಗೆ ಜಾಗ ದಾನ‌ ಮಾಡಿದ್ದಾರೆ. ಆದ್ರೆ, ಇದೇ ಗ್ರಾಮದವರು ಇದೀಗ ಸರ್ಕಾರಿ ಶಾಲೆ ಜಾಗವನ್ನೇ ನುಂಗಿ ಭರ್ಜರಿ ಮನೆ ನಿರ್ಮಾಣ ಮಾಡಿದ್ದಾರೆ. ಇಷ್ಟೆಲ್ಲಾ ಅದ್ರೂ ಶಿಕ್ಷಣ ಇಲಾಖೆ ಗಪ್ ಚುಪ್ ಆಗಿದೆ. ಹೀಗಾಗಿ ದಾನ ನೀಡಿದ ಗ್ರಾಮದ ಜನ್ರು ಶಿಕ್ಷಣ ಇಲಾಖೆ ವಿರುದ್ಧ ರೊಚ್ಚಿಗೆದ್ದಿದ್ದು, ಶಾಲೆ ಉಳಿಸಿ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ: ಸರ್ಕಾರಿ ಶಾಲೆಯ ಮೈದಾನದಲ್ಲಿ ತೆಲೆ ಎತ್ತಿದ ಅಕ್ರಮ ಮನೆಗಳು; ನಮ್ಮ ಶಾಲೆ ಉಳಿಸಿ ಎಂದು ವಿದ್ಯಾರ್ಥಿಗಳ ಆಕ್ರೋಶ!
ಗದಗ ಜಿಲ್ಲೆಯ ಸರ್ಕಾರಿ ಶಾಲೆ
Follow us on

ಗದಗ, ಆ.26: ಜಿಲ್ಲೆಯ ಲಕ್ಷ್ಮೇಶ್ವರ (Lakshmeshwara) ತಾಲೂಕಿನ ಆದರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Government School) 650 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ಇಲ್ಲಿ ಸರಿಯಾದ ಕೊಠಡಿಗಳ ಸೌಕರ್ಯ ಕೂಡ ಇಲ್ಲ. ಅಷ್ಟೇ ಅಲ್ಲ ಇದೀಗ ಸರ್ಕಾರಿ ಶಾಲೆಯನ್ನು ಉಳಿಸಬೇಕಾದ ಗ್ರಾಮದ ಕೆಲವು ಜನರು ಶಾಲೆಯ ಜಾಗವನ್ನೇ ಒತ್ತುವರಿ ಮಾಡಿಕೊಂಡು, ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಮಕ್ಕಳಿಗೆ ಸಮರ್ಪಕವಾಗಿ ಆಟವಾಡಲು ಮೈದಾನ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅತಿಕ್ರಮಣವಾಗಿ ಕಟ್ಟಿದ ಮನೆ, ನಿರ್ಮಾಣ ಹಂತದ ಮನೆಗಳು, ತಿಪ್ಪೆ ಗುಂಡಿಗಳನ್ನು ತೆರವು ಮಾಡಬೇಕೆಂದು ವಿದ್ಯಾರ್ಥಿಗಳು ಒತ್ತಾಯ ಮಾಡಿದ್ದಾರೆ.

ಗ್ರಾಮದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಎಂದು ಇಡೀ ಗ್ರಾಮದ ಜನರು ಹಣ ಸಂಗ್ರಹ ಮಾಡಿ ಶಾಲೆಗೆ ಜಾಗ ದಾನ ಮಾಡಿದ್ದಾರೆ. ಆದ್ರೆ, ದಾನ ಮಾಡಿದ ಜಾಗವನ್ನು ಉಳಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ಕೇರ್ ಮಾಡಿಲ್ಲ. ಹೌದು, ಸರ್ಕಾರಿ ಶಾಲೆಯ ಜಾಗವನ್ನು ತೆರವು ಮಾಡುವಂತೆ ಹತ್ತಾರ ಭಾರಿ ಮನೆ ಸಲ್ಲಿಸಿದರು. ಹಿರಿಯ ಅಧಿಕಾರಿಗಳು ಮಾತ್ರ ಇತ್ತ ನೋಡಿಲ್ಲ. ಒಂದೂವರೆ ಎಕರೆ ಜಾಗದ ಮೈದಾನದಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ:ಗದಗದಲ್ಲಿ ಎಗ್ಗಿಲ್ಲದೇ ಸಾಗಿದೆ ಅಕ್ರಮ ಮಣ್ಣು ದಂಧೆ; ಅಕ್ರಮ ಗೊತ್ತಿದ್ರೂ ಕ್ಯಾರೆ ಎನ್ನದ ಗಣಿ ಇಲಾಖೆ, ಜಿಲ್ಲಾಡಳಿತ

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದ ಗ್ರಾಮಸ್ಥರು

ಈ ಜಾಗವನ್ನು ತೆರವು ಮಾಡಬೇಕೆಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸ್ಥಳೀಯರು ಮನವಿ ಮಾಡಿದ್ದರು. ಆದರೆ, ಈವರಿಗೂ ತೆರವು ಕಾರ್ಯ ಮಾತ್ರ ಆಗಿಲ್ಲ. ಹೀಗಾಗಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಸರ್ಕಾರಿ ಅತಿಕ್ರಮಣ ಮಾಡಿದ ಜಾಗವನ್ನು ತೆರವು ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಗದಗ ಡಿಡಿಪಿಐ ಎಮ್ ಎ ರಡ್ಡೇರ್ ‘ನಮ್ಮ ಬಳಿ ಈಗಾಗಲೇ ಈ ಸಮಸ್ಯೆಯ ಬಗ್ಗೆ ದೂರುಗಳು ಬಂದಿದ್ದು, ಅದನ್ನು ಪರಿಶೀಲನೆ ಮಾಡಿ ಸರ್ವೇ ಇಲಾಖೆಗೆ ‘ನಮ್ಮ ಸರ್ಕಾರಿ ಶಾಲೆಯ ಜಾಗವನ್ನು ಸರ್ವೇ ಮಾಡಿ ಒದಗಿಸುವಂತೆ ಕೇಳಿಕೊಂಡಿದ್ದೇವೆ. ಆದರೆ, ನಮಗೆ ಇನ್ನು ವರೆಗೂ ಉತ್ತರ ಬಂದಿಲ್ಲ. ಈ ಕುರಿತಾಗಿ ಮತ್ತೊಮ್ಮೆ ಪರಿಶೀಲಿಸುತ್ತೇವೆ ಎಂದರು.

ಗ್ರಾಮಸ್ಥರೇ ಸೇರಿ ಖರೀದಿ ಮಾಡಿ, ಸರ್ಕಾರಿ ಶಾಲೆಗೆ ಜಾಗ ನೀಡಿದ್ದರು

ಇನ್ನು ಗ್ರಾಮಸ್ಥರೇ ಸೇರಿಕೊಂಡು ಒಂದುವರೆ ಎಕರೆ ಜಮೀನನ್ನು ಈ ಹಿಂದೆ ಖರೀದಿ ಮಾಡಿ, ಸರ್ಕಾರಿ ಶಾಲೆಗೆ ಬಿಟ್ಟು ಕೊಟ್ಟಿದ್ರು. ಆದ್ರೆ, ಕೆಲವು ಜನರು ಶಾಲೆಯ ಮೈದಾನವನ್ನೆ ಒತ್ತುವರಿ ಮಾಡಿಕೊಂಡು, ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಈವರಿಂದ ಬಹಳ ಕಿರಿಕಿರಿ ಆಗುತ್ತಿದೆ. ಹಾಗೇ ಮೈದಾನ ಇಲ್ಲದೆ ಆಟಕ್ಕೂ ಕೊಕ್ಕೆಬಿದ್ದಿದೆ. ಇನ್ನಾದರೂ ಶಿಕ್ಷಣ ಸಚಿವರು ಹಾಗೂ ಸರ್ಕಾರ ಎಚ್ಚತ್ತುಕೊಂಡು ಅತಿಕ್ರಮಣ ತೆರವು ಮಾಡಿ ಮಕ್ಕಳ ಆಟ, ಪಾಠಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ