ಮಳೆ, ಗಾಳಿಗೆ ನೆಲಕಚ್ಚಿದ ಗೋವಿನಜೋಳ! ಬೆಳೆ ನೋಡಿ ಕಣ್ಣೀರು ಹಾಕಿದ ರೈತರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 06, 2024 | 5:04 PM

ಆ ಭಾಗದ ಅನ್ನದಾತರು ಕಳೆದ ಎರಡು ವರ್ಷ ಬರಗಾಲದಿಂದ ಕಂಗಾಲಾಗಿದ್ದರು. ಈ ಬಾರಿ ಉತ್ತಮ ಮಳೆಯಾಗಿತ್ತು. ಅನ್ನದಾತರು ಸಾಲ ಸೂಲ ಮಾಡಿ ಭರ್ಜರಿಯಾಗಿ ಗೋವಿನಜೋಳ ಬೆಳೆದಿದ್ದರು. ಇನ್ನೇನು ಫಸಲು ಕೈ ಸೇರಬೇಕು ಎನ್ನುವಷ್ಟರಲ್ಲಿ, ಮಳೆ ಹಾಗೂ ಗಾಳಿಯಿಂದ ಗೋವಿನಜೋಳ ನೆಲಕಚ್ಚಿದೆ. ಹೀಗಾಗಿ ದಿಕ್ಕು ಕಾಣದೆ ರೈತರು ಕಣ್ಣೀರು ಹಾಕುತ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಮಳೆ, ಗಾಳಿಗೆ ನೆಲಕಚ್ಚಿದ ಗೋವಿನಜೋಳ! ಬೆಳೆ ನೋಡಿ ಕಣ್ಣೀರು ಹಾಕಿದ ರೈತರು
ಮಳೆ, ಗಾಳಿಗೆ ನೆಲಕಚ್ಚಿದ ಗೋವಿನಜೋಳ! ಬೆಳೆ ನೋಡಿ ಕಣ್ಣೀರು ಹಾಕಿದ ರೈತರು
Follow us on

ಗದಗ, ಅ.06: ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ರೈತರ ಬದುಕು ಮಳೆ ಹಾಗೂ ಗಾಳಿಯಿಂದ ಮೂರಾಬಟ್ಟೆ ಆಗಿದೆ.‌ ಕಳೆದ ಎರಡು ದಿನಗಳಿಂದ ಮಳೆ, ಗಾಳಿಯ ಆರ್ಭಟ ಜೋರಾಗಿದ್ದು, 20 ಕ್ಕೂ ಹೆಚ್ಚು ರೈತರು, ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಗೋವಿನಜೋಳ ನೆಲಕಚ್ವಿದೆ. ಇನ್ನೇನು ಒಂದುವರೆ ತಿಂಗಳಲ್ಲಿ ಫಸಲು ಕೈ ಸೇರಬೇಕಾಗಿತ್ತು. ಆದ್ರೆ, ಸಾಲ ಸೂಲ ಮಾಡಿ ಬೆಳೆದ ಬೆಳೆ ಮಳೆಗೆ ಸರ್ವನಾಶವಾಗಿದೆ. ಇಷ್ಟೊಂದು ಹಾನಿಯಾದರೂ ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿಲ್ಲ.‌ ಕೂಡಲೇ ಹಾನಿಯಾದ ಪ್ರದೇಶಗಳ ಸರ್ವೆ ಮಾಡಿ, ರೈತರಿಗೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ.

ಇನ್ನು ಲಕ್ಕುಂಡಿ ಗ್ರಾಮದ ಷಣ್ಮುಖ ಎನ್ನುವ ರೈತ ಕುಟುಂಬ ಮನೆಯಲ್ಲಿನ ಚಿನ್ನವನ್ನು ಅಡವಿಟ್ಟು, ಹಾಗೂ ಸ್ವಸಹಾಯ ಗುಂಪಿನಲ್ಲಿ ಸಾಲ ಸೂಲ ಮಾಡಿ, ಎಂಟು ಎಕರೆ ಜಮೀನಿನಲ್ಲಿ ಸಮೃದ್ಧವಾಗಿ ಗೋವಿನಜೋಳ ಬೆಳೆದಿದ್ದರು. ಇನ್ನೇನು ಒಂದುವರೆ ತಿಂಗಳಲ್ಲಿ ಗೋವಿನಜೋಳ ಕಟಾವಿಗೆ ಬರುತ್ತಿತ್ತು. ಆದ್ರೆ, ಮಳೆ‌ ಹಾಗೂ ಗಾಳಿಯಿಂದ ಸಂಪೂರ್ಣವಾಗಿ ನೆಲಕಚ್ಚಿದೆ. ಸ್ವಂತ ಮಕ್ಕಳ‌ ಹಾಗೇ ಇಡೀ ಕುಟುಂಬ ಸದಸ್ಯರು ಹಗಲಿರುಳು ಕಷ್ಟಪಟ್ಟು ಬೆಳೆದಿದ್ದ ಬೆಳೆ ನಾಶವಾಗಿದೆ. ಎಂಟು ಎಕರೆ ಗೋವಿನಜೋಳ ಫಸಲು ಕೈ ಸೇರಿದ್ರೆ, 8 ರಿಂದ 10 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಸಾಲ ಸೂಲ ಮರು ಪಾವತಿಸಿ, ಮನೆ ಕಟ್ಟಿಸಿ ಮಕ್ಕಳ ಮದುವೆ ಮಾಡುವ ಪ್ಲಾನ್ ಮಾಡಿದ್ದ ರೈತ ಕುಟುಂಬ ಕಣ್ಣೀರು ಹಾಕುತ್ತಿದೆ.

ಇದನ್ನೂ ಓದಿ:ಬರಗಾಲದಿಂದ ಕಂಗೆಟ್ಟ ರೈತರಿಗೆ ಕಾಡು ಹಂದಿ ಹಾವಳಿ: ಗೋವಿನಜೋಳ ನಾಶ, ಅರಣ್ಯ ಇಲಾಖೆಗೆ ಮನವಿ

ಮಳೆ ಹಾಗೂ ಗಾಳಿಯಿಂದ ರೈತರ ಕುಟುಂಬದ ಆಸೆ, ಕನಸು ನುಚ್ಚು ನೂರಾಗಿದೆ. ಹೀಗಾಗಿ ಸರ್ಕಾರ ನಮಗೆ ಸೂಕ್ತವಾದ ಪರಿಹಾರ ನೀಡ್ಬೇಕು ಎಂದು ರೈತ ಮಹಿಳೆ ಒತ್ತಾಯ ಮಾಡಿದ್ದಾಳೆ. ಕಳೆದ ಎರಡು ವರ್ಷ ಬರಗಾಲದಿಂದ ರೈತರ ಬದುಕು ಮೂರಾಬಟ್ಟೆಯಾಗಿತ್ತು. ಈ ಬಾರಿ ಆದರೂ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದರು. ಆದ್ರೆ, ಮಳೆ, ಗಾಳಿ ರೈತರ ಬದುಕನ್ನು ಹಾಳು ಮಾಡಿದೆ. ಈಗಕಾದರೂ ರೈತರ ಬೆಳೆಗೆ ಸೂಕ್ತವಾದ ಪರಿಹಾರ ನೀಡುತ್ತಾ ಸರ್ಕಾರ ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ