ಕಾಂಗ್ರೆಸ್ ಮುಖಂಡನ ಕೊಲೆಗೆ ಬಿಗ್ ಟ್ವಿಸ್ಟ್! ನಿಗೂಢ ಸಾವನ್ನ ಬೇಧಿಸಿದ ಖಾಕಿ ಪಡೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 26, 2024 | 6:02 PM

ಆತ ಊರಿಗೆ ಬೇಕಾಗಿದ್ದ ವ್ಯಕ್ತಿ, ಕಾಂಗ್ರೆಸ್ ಮುಖಂಡ ಕೂಡ ಹೌದು. ಆದ್ರೆ, ಏಕಾಏಕಿ ಆತ ನಿಗೂಢವಾಗಿ ಸಾವನ್ನಪ್ಪಿದ್ದ. ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ದೂರು ದಾಖಲಾಗಿತ್ತು. ಇಡೀ‌ ಗ್ರಾಮವೇ ಇದು ಸಹಜ ಸಾವಲ್ಲ. ಭಯಾನಕ ಕೊಲೆಯೇ ಎಂದು ಹೇಳಿತ್ತು. ಆದ್ರೆ, ಈ ಕೊಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಕಾಂಗ್ರೆಸ್ ಮುಖಂಡನ ಕೊಲೆಗೆ ಬಿಗ್ ಟ್ವಿಸ್ಟ್! ನಿಗೂಢ ಸಾವನ್ನ ಬೇಧಿಸಿದ ಖಾಕಿ ಪಡೆ
ಕಾಂಗ್ರೆಸ್ ಮುಖಂಡ ಶರಣಪ್ಪ ಕೊಲೆಗೆ ಬಿಗ್​ ಟ್ವಿಸ್ಟ್​
Follow us on

ಗದಗ, ಮೇ.26: ಮುಂಡರಗಿ(Mundaragi) ತಾಲೂಕಿನ ಡಂಬಳ ಗ್ರಾಮದ ಬಳಿ ‌ಮಾರ್ಚ್ 12 ರಂದು ಶರಣಪ್ಪ (Sharanappa) ಸಂದಿಗೌಡರ್ ಎಂಬ 40 ವರ್ಷದ ವ್ಯಕ್ತಿ ನಿಗೂಢ ಸಾವನ್ನಪ್ಪಿದ್ದ. ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಬಳಿಕ ಭೀಕರ ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಕುಟುಂಬಸ್ಥರು ದೂರು ನೀಡಿದ್ದರು. ಆದ್ರೆ, ಈ ಸಾವಿಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು, ಸಾವಿನ ಹಿಂದಿನ ದಿನವಷ್ಟೇ, ಆತ ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದು ಸ್ವಗ್ರಾಮಕ್ಕೆ ವಾಪಾಸ್ ಬರುತ್ತಿದ್ದ. ಈ ವೇಳೆ ಮೃತ ಶರಣಪ್ಪನನ್ನ, ಅದ್ಯಾರೋ ಬೆನ್ನಟ್ಟಿ, ಹಲ್ಲೆ ಮಾಡಿದ್ದಾರೆ.

ಕೊಲೆ ಕಥೆ ಸೃಷ್ಟಿಸಿ ಆತ್ಮಹತ್ಯೆ

ಜೊತೆಗೆ ಡೋಣಿ ಗ್ರಾಮದ ಹೊರವಲಯದಲ್ಲಿ,ಗುಡ್ಡದ ಬಳಿ ಕರೆದುಕೊಂಡು ಬಂದು,‌ ಕಣ್ಣಿಗೆ ಖಾರದ ಪುಡಿ ಎರಚಿ, ‌ಹೆಲ್ಮೆಟ್ ನಿಂದ ಹಲ್ಲೆ ಮಾಡಿ, ಹಗ್ಗದಿಂದ ಕೈ,‌ಕಾಲು ಕಟ್ಟಿ, ಮರಕ್ಕೆ ನೇಣು ಬಿಗಿದು ಹಾಕಿ, ಆರೋಪಿಗಳು ಪರಾರಿಯಾಗಿದ್ದಾರೆ‌ ಎನ್ನುವ ಸುದ್ದಿ ಎಲ್ಲರ ಬಾಯಲ್ಲೂ ಸರಸರನೇ ಹರಿದಾಡಿತ್ತು. ಸ್ಥಳಕ್ಕೆ ಬಂದ ಖಾಕಿಪಡೆ ಸಹ ಇದು ಪಕ್ಕಾ ಇದೇ ರೀತಿ ಕೊಲೆಯಾಗಿರಬಹುದು‌‌ ಎಂದು ಅಂದುಕೊಂಡಿದ್ದರು. ಆದರೆ, ಶರಣಪ್ಪ ಸಂದಿಗೌಡರ್ ಸತ್ತಿದ್ದು, ಯಾರೋ ಮಾಡಿದ‌ ಕೊಲೆಯಿಂದ ಅಲ್ಲ, ಬದಲಾಗಿ ಕೊಲೆ ಕಥೆ ಸೃಷ್ಟಿ ಮಾಡಿ,‌ ಸ್ವತಃ ತಾನೇ ಸೆಲ್ಫ್ ಸೂಸೈಡ್ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ:ಗದಗ: ಕಾಂಗ್ರೆಸ್ ಕಾರ್ಯಕರ್ತನನ್ನು ಅಟ್ಟಾಡಿಸಿ ಕೊಲೆಗೈದು ಮರಕ್ಕೆ ನೇತುಹಾಕಿದ ದುಷ್ಕರ್ಮಿಗಳು

ಶರಣಪ್ಪ ಮತ್ತು ಆತನ ಪತ್ನಿ ನಡುವೆ ಮೊದಲಿನಿಂದಲೂ ವೈವಾಹಿಕ ಜೀವನ ಅಷ್ಟಕಷ್ಟೇ ಇತ್ತು. ಹೀಗಾಗಿ ಶರಣಪ್ಪನಿಂದ ಪತ್ನಿ ದೂರವೇ ಉಳಿದಿದ್ದಳು. ಇದರಿಂದ ಪತ್ನಿ ಮೇಲೆ ಶರಣಪ್ಪನಿಗೆ ಕೆಂಡದಂಥ ವೈಮನಸ್ಸು ಹುಟ್ಟಿಕೊಂಡಿತ್ತು. ಹೀಗಾಗಿ ಶರಣಪ್ಪ ತಾನು ಸಾವಿಗೆ ಶರಣಾಗುವ ಮುನ್ನ ತನ್ನನ್ನ ಪತ್ನಿಯೇ ಕೊಲೆ ಮಾಡಿಸಿದ್ದಾಳೆ ಎನ್ನುವ ರೀತಿ ಪ್ಲಾನ್ ಸೃಷ್ಟಿ ಮಾಡಿದ್ದ. ತನ್ನ ಸೆಲ್ಫ್ ಸೂಸೈಡನ್ನ ಕೊಲೆಯಾಗಿ ಕನ್ವರ್ಟ್ ಮಾಡುವುದು ಹೇಗೆಂದು ಹಲವು ದಿನಗಳ ಮುಂಚೆಯೇ‌ ಪ್ಲಾನ್ ಮಾಡಿಕೊಂಡಿದ್ದನಂತೆ.‌

ಇದನ್ನ ಬೇಧಿಸಲು ಹೊರಟ ಖಾಕಿ ಪಡೆಗೆ ಶರಣಪ್ಪನ ಕಣ್ಣಿಗೆ ಬೀಳದ‌ ಖಾರದ ಪುಡಿ, ಒಡೆಯದೇ ಇರೋ‌ ಹೆಲ್ಮೆಟ್, ಕೊಂಚವೂ ಗಾಯವಾಗದ ದೇಹ, ತನ್ನ ಕುಟುಂಬಸ್ಥರಿಗೆ ಮಾಡಿದ ಸುಳ್ಳು ದೂರವಾಣಿ ಕರೆಗಳು, ಸುಳ್ಳು ಕೊಲೆಯ ಕಟ್ಟು ಕಥೆಯನ್ನ ಬಿಚ್ಚಿಟ್ಟಿದ್ದವು. ಇದೆಲ್ಲವನ್ನೂ ಬೇಧಿಸಿದ ಖಾಕಿ, ವೈದ್ಯಕೀಯ ವರದಿ ಮತ್ತು FSL ವರದಿ ಆಧರಿಸಿ, ಶರಣಪ್ಪನ ಸಾವು ಕೊಲೆ ಅಲ್ಲ, ಇದು ಸೆಲ್ಫ್ ಸೂಸೈಡ್ ಎನ್ನುವುದನ್ನ ಖಾತ್ರಿಪಡಿಸಿದೆ.

ಶರಣಪ್ಪ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೂ, ಪಕ್ಷಾತೀತವಾಗಿ‌ ಸಹಾಯ ಮಾಡುವ ವ್ಯಕ್ತಿಯಾಗಿದ್ದನಂತೆ. ರಾಜಕೀಯ ಕಾರಣಕ್ಕೆ ಜಗಳ ತೆಗೆಯುವ ಅಸ್ಸಾಮಿಯಂತೂ‌ ಅಲ್ಲವೇ‌ ಅಲ್ಲ‌. ಆಗಾಗ ಪತ್ನಿ ಜೊತೆ ಕಲಹವಿದ್ದ ಕಾರಣ, ಶರಣಪ್ಪನ ಸಾವಿನ ಹಿಂದೆ ಪತ್ನಿಯ ಕೈವಾಡವಿದೆ‌ ಎಂದು ಸಾವು ನಡೆದ ದಿ‌ನವೇ ಗ್ರಾಮಸ್ಥರು ತೀರ್ಮಾನಿಸಿಬಿಟ್ಟಿದ್ದರು. ಅಲ್ಲದೇ ತನ್ನ ಕುಟುಂಬಸ್ಥರಲ್ಲಿಯೂ ಪತ್ನಿಯಿಂದ ಕೊಲೆ ಸಂಚು ನಡೆದಿದೆ ಎನ್ನುವ ರೀತಿ ಶರಣಪ್ಪ ಕಥೆ ಸೃಷ್ಟಿ ಮಾಡಿದ್ದ. ಆದರೆ, ಅದೆಲ್ಲವೂ ಇದೀಗ ಉಲ್ಟಾ ಹೊಡೆದಿದೆ. ಹಾವಿನ ದ್ವೇಷ ಹನ್ನೆರೆಡು ವರುಷವೆಂದು ಹೇಳ್ತಾರೆ. ಆದರೆ, ಶರಣಪ್ಪ ತನ್ನ ಸಾವಿನಲ್ಲಿಯೂ ಪತ್ನಿ‌ ಮೇಲೆ ದ್ವೇಷ ಸಾಧಿಸುವ ಪ್ರಯತ್ನ ವಿಫಲವಾಗಿದೆ.‌

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Sun, 26 May 24