ಗದಗ: ಶಿರಹಟ್ಟಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಮಸ್ಯೆ ಒಂದಾ ಎರಡಾ?

ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿರೋ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಮಸ್ಯೆಗಳ ಆಗರವೇ ಇದೆ. ಕನಿಷ್ಠ ನೀರಿನ ವ್ಯವಸ್ಥೆ ಇಲ್ಲದೇ ನಿತ್ಯ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳು ಪರದಾಡುತ್ತಾರೆ. ಕಾಲೇಜ್ ಕಟ್ಟಡಕ್ಕೆ ಕಂಪೌಂಡ ಇಲ್ಲದಕ್ಕೆ ರಾತ್ರಿವೇಳೆ ಕಾಲೇಜ್ ಆವರಣ ಕಿಡಿಗೇಡಿಗಳ ಅನೈತಿಕ ಚಟುವಟಿಕೆ ತಾಣವಾಗಿದೆ. ಹೀಗಾಗಿ ಬೆಳಗ್ಗೆ ಕಾಲೇಜ್ ಆವರಣಕ್ಕೆ ವಿದ್ಯಾರ್ಥಿಗಳು ಕಾಲಿಟ್ಟರೆ ಸಾಕು ಎಣ್ಣೆ ಬಾಟಲ್​​ಗಳ ದರ್ಶನವಾಗುತ್ತಿದೆ.

ಗದಗ: ಶಿರಹಟ್ಟಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಮಸ್ಯೆ ಒಂದಾ ಎರಡಾ?
ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಇಲ್ಲ ಮೂಲಭೂತ ಸೌಕರ್ಯ
Edited By: Rakesh Nayak Manchi

Updated on: Sep 10, 2023 | 9:34 PM

ಗದಗ, ಸೆ.10: ಜಿಲ್ಲೆಯ (Gadag) ಶಿರಹಟ್ಟಿ ಪಟ್ಟಣದಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಮಸ್ಯೆಗಳು ಒಂದಾ ಎರಡಾ? ಸರ್ಕಾರಿ ಕಾಲೇಜ್ ಅಂದರೆ ಅಲ್ಲಿ ಉಪನ್ಯಾಸಕರು ಇರಲ್ಲ. ವಿದ್ಯಾರ್ಥಿಗಳು ಇರಲ್ಲ ಅನ್ನೋ ಭಾವನೆ ಸಹಜ. ಆದರೆ, ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಉಪನ್ಯಾಸಕರ ತಂಡವೂ ಚೆನ್ನಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಕೂಡ ಅಷ್ಟೇ ಉತ್ಸಾಹದಿಂದ ಪಾಠ ಕಲಿಯಲು ಆಗಮಿಸ್ತಾರೆ.

ಇಲ್ಲಿ ಆರ್ಟ್ಸ್, ಕಾಮರ್ಸ್, ವಿಜ್ಞಾನ ವಿಭಾಗದಲ್ಲಿ ಸುಮಾರು 400 ವಿದ್ಯಾರ್ಥಿಗಳು ಇದ್ದಾರೆ. ಆದರೆ, ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸರಿಗೆ ಕಾಡೋದು ಮೂಲ ಸೌಕರ್ಯ ಕೊರತೆ. ಕನಿಷ್ಠ ನೀರಿನ ವ್ಯವಸ್ಥೆ ಇಲ್ಲದೇ ನಿತ್ಯ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳು ಪರದಾಡುತ್ತಾರೆ. ಮನೆಯಿಂದ ತಂದ ಒಂದು ಬಾಟಲ್ ಮಧ್ಯಹ್ನ ಖಾಲಿ ಆದರೆ ಮತ್ತೆ ನೀರು ಬೇಕು ಅಂದರೆ ಒಂದು ಕಿಲೋ ಮೀಟರ್ ದೂರು ಶಿರಹಟ್ಟಿ ಪಟ್ಟಣಕ್ಕೆ ಹೋಗಬೇಕು.

ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆಂಚ್​ ವ್ಯವಸ್ಥೆ ಇಲ್ಲ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಲ್ಯಾಬ್ ಸೌಕರ್ಯ ಇಲ್ಲ. ಹೀಗಾಗಿ ಮೂಲಭೂತ ಸೌಕರ್ಯ ಇಲ್ಲದೇ ವಿದ್ಯಾರ್ಥಿಗಳು ನಿತ್ಯ ಗೋಳಾಡುತ್ತಿದ್ದಾರೆ. ಮೊದಲೇ ಶಿರಹಟ್ಟಿ ತಾಲೂಕು ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇಲ್ಲಿನ ಮಕ್ಕಳಿಗೆ ಶಿಕ್ಷಣ ಅನ್ನೋದು ಅಪರೂಪ.

ಆದರೂ, ಶಿರಹಟ್ಟಿ ತಾಲೂಕಿನ ಹತ್ತಾರು ಗ್ರಾಮಗಳ ಮಕ್ಕಳಿಗೆ ಇದೊಂದೆ ಸರ್ಕಾರಿ ಪಿಯು ಕಾಲೇಜ್. ಹೀಗಾಗಿ ಸರ್ಕಾರ ನಮ್ಮ ಸರ್ಕಾರಿ ಕಾಲೇಜ್​ಗೆ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಅನಕೂಲ ಮಾಡಿಕೊಡಬೇಕು ಅಂತ ವಿದ್ಯಾರ್ಥಿನಿಯರಾದ ಅಮೃತಾ, ರಾಧಿಕಾ ಹಾಗೂ ವಿದ್ಯಾರ್ಥಿ ರಮೇಶ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದ ನಿಯಮ ಗಾಳಿಗೆ ತೂರಿ ಲಕ್ಷ ಲಕ್ಷ ಲೂಟಿ, ಗದಗ-ಬೆಟಗೇರಿ ನಗರಸಭೆ ಬ್ರಹ್ಮಾಂಡ ಭ್ರಷ್ಟಾಚಾರ ಗೊತ್ತಿದ್ರೂ ಜಿಲ್ಲಾಡಳಿತ ಗಪ್ ಚುಪ್!

ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಹಾಗೂ ಶಿಕ್ಷಣ ಸಚಿವರು ಹಿಂದುಳಿದ ತಾಲೂಕು ಶಿಹರಟ್ಟಿ ಪಟ್ಟಣದ ಈ ಸರ್ಕಾರಿ ಪಿಯು ಕಾಲೇಜಿನತ್ತ ಕಣ್ಣು ತೆರೆಯಬೇಕು ಅಂತ ವಿದ್ಯಾರ್ಥಿಗಳು, ಪಾಲಕರು ಒತ್ತಾಯಿಸಿದ್ದಾರೆ.

ಕಾಲೇಜ್ ಕಟ್ಟಡಕ್ಕೆ ಕಂಪೌಂಡ ಇಲ್ಲದಕ್ಕೆ ರಾತ್ರಿವೇಳೆ ಕಾಲೇಜು ಆವರಣ ಕಿಡಿಗೇಡಿಗಳ ಅನೈತಿಕ ಚಟುವಟಿಕೆ ತಾಣವಾಗಿದೆ. ಹೀಗಾಗಿ ಬೆಳಗ್ಗೆ ಕಾಲೇಜ್ ಆವರಣಕ್ಕೆ ವಿದ್ಯಾರ್ಥಿಗಳು ಕಾಲಿಟ್ಟರೆ ಸಾಕು ಮದ್ಯದ ಬಾಟಲ್​ಗಳ ದರ್ಶನವಾಗುತ್ತಿದೆ. ಇದು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ನಮ್ಮ ಕಾಲೇಜಿಗೆ ಮೊದಲು ಕಾಂಪೌಡ್ ನಿರ್ಮಾಣ ಮಾಡಿ, ಆಮೇಲೆ ಕೊಠಡಿಗಳು, ಪ್ರಯೋಗಾಲಯ ಸೇರಿ ಹಲವು ಸಮಸ್ಯೆಗಳನ್ನು ಕೂಡಲೇ ನಿವಾರಿಸಬೇಕು ಅಂತ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಖಾಯಂ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರ ತಂಡ ಚೆನ್ನಾಗಿದೆ. ಆದರೆ, ಮೂಲಭೂತ ಸೌಕರ್ಯ ಇಲ್ಲದ ಕಾರಣ ಇಲ್ಲಿನ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸರ್ಕಾರ ಉಪಯೋಗಕ್ಕೆ ಬಾರದ ಉಚಿತ ಯೋಜನೆ ನೀಡುವ ಬದಲು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿದೆ. ಹೀಗಾಗಿ ಈ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಅನ್ನೋ ಕೂಗು ಕೇಳಿ ಬಂದಿದೆ. ಇನ್ನಾದರೂ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಈ ಸರ್ಕಾರಿ ಕಾಲೇಜಿಗೆ ಮೂಲಭೂತ ಸೌಕರ್ಯ ಒದಗಿಸಲಿ ಎಂಬುದು ಆಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Follow Us