Government Employees Strike: ಪಟ್ಟು ಬಿಡದ ಸರ್ಕಾರಿ ನೌಕರರು; ಸಂಧಾನ ಮಾತುಕತೆ ವಿಫಲ, ಮುಷ್ಕರ ಅಚಲ

ಮುಷ್ಕರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರಿ ನೌಕರರು ಘೋಷಿಸಿದ್ದಾರೆ. ಇದರೊಂದಿಗೆ ಸರ್ಕಾರಿ ನೌಕರರ ಜತೆ ಮುಖ್ಯ ಕಾರ್ಯದರ್ಶಿ ನಡೆಸಿದ ಸಂಧಾನ ಮಾತುಕತೆ ಮುರಿದುಬಿದ್ದಿದೆ.

Government Employees Strike: ಪಟ್ಟು ಬಿಡದ ಸರ್ಕಾರಿ ನೌಕರರು; ಸಂಧಾನ ಮಾತುಕತೆ ವಿಫಲ, ಮುಷ್ಕರ ಅಚಲ
ವಿಧಾನಸೌಧ
Follow us
|

Updated on:Feb 28, 2023 | 3:49 PM

ಬೆಂಗಳೂರು: ಮುಷ್ಕರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರಿ ನೌಕರರು ಮಂಗಳವಾರ ಘೋಷಿಸಿದ್ದಾರೆ. ಇದರೊಂದಿಗೆ ಸರ್ಕಾರಿ ನೌಕರರ ಜತೆ ಮುಖ್ಯ ಕಾರ್ಯದರ್ಶಿ ನಡೆಸಿದ ಸಂಧಾನ ಮಾತುಕತೆ ಮುರಿದುಬಿದ್ದಿದೆ. 7ನೇ ವೇತನ ಆಯೋಗ ವರದಿ (7th Pay Commission) ಜಾರಿಗೆ ಆಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿರುವ ಸರ್ಕಾರಿ ನೌಕರರ (government employees ) ಜತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ವಿಧಾನಸೌಧದ ಮುಖ್ಯ ಕಾರ್ದರ್ಶಿಗಳ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್​ ಷಡಕ್ಷರಿ, ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಭೆಯ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ ಸಿಎಸ್​ ಷಡಕ್ಷರಿ, ಮುಷ್ಕರದಿಂದ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ, ಸರ್ಕಾರ ಯಾವಾಗ ಸಭೆಗೆ ಕರೆದರೂ ಭಾಗವಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಪ್ರತಿಭಟನೆ ಹಿಂಪಡೆಯುವಂತೆ ನೌಕರ ಮುಖಂಡರ ಬಳಿ ಸಭೆಯಲ್ಲಿ ವಂದಿತಾ ಶರ್ಮಾ ಮನವಿ ಮಾಡಿದ್ದಾರೆ. ನಿಮ್ಮ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಹಾಗಾಗಿ ಪ್ರತಿಭಟನೆ ಮಾಡಬೇಡಿ ಎಂದು ಮುಖ್ಯ ಕಾರ್ಯದರ್ಶಿಗಳು ಮನವೊಲಿಕೆ ಮಾಡಿದ್ದಾರೆ. ಆದರೆ ಇದು ಪ್ರಯೋಜನ ನೀಡಿಲ್ಲ.

ಸಿಎಸ್​ ಷಡಕ್ಷರಿ ಹೇಳಿದ್ದೇನು?

ಮುಖ್ಯ ಕಾರ್ಯದರ್ಶಿಗಳ ಜತೆ ನಡೆದ ಸಭೆಯಲ್ಲಿ ನಾಳೆ ನಡೆಸಲಿರುವ ಹೋರಾಟದ ಬಗ್ಗೆ ಚರ್ಚೆಯಾಗಿದೆ. ಈ ಬಗ್ಗೆ 21ರಂದೇ ನಿರ್ಧಾರ ತೆಗೆದುಕೊಂಡಿದ್ದೆವು. ಬೇಡಿಕೆಗಳ ಪರವಾಗಿ ಸರ್ಕಾರದ ಆದೇಶ ಬಂದರೆ ಮಾತ್ರ ಪ್ರತಿಭಟನೆ ವಾಪಸ್ ಪಡೆಯುತ್ತೇವೆ ಎಂಬುದಾಗಿ ಹೇಳಿದ್ದೆವು. ಸಮಯಾವಕಾಶ ನೀಡಿ ಅಂತ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಳಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಹೇಳಿದ್ದೇವೆ‌. ಐದು ರಾಜ್ಯಗಳ ಮಾದರಿಯಂತೆ ಎನ್​ಪಿಎಸ್ ರದ್ದು ಮಾಡಿ, ಒಪಿಎಸ್​ ಜಾರಿ ಮಾಡಿ ಎಂದು ಮನವಿ ಮಾಡಿದ್ದೆವು. ಅದರ ಬಗ್ಗೆ ಮುಖ್ಯಮಂತ್ರಿಗಳು ಮಾತೇ ಆಡುತ್ತಿಲ್ಲ. ಹೀಗಾಗಿ ನಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಸಿಎಸ್​ ಷಡಕ್ಷರಿ ಸಭೆಯ ಬಳಿಕ ಹೇಳಿದರು.

ಇದನ್ನೂ ಓದಿ: Govt Employees Strike: ನಾಳೆಯಿಂದ ಎಲ್ಲಾ ಸರ್ಕಾರಿ ಸೇವೆಗಳು ಏಕಕಾಲದಲ್ಲಿ ಬಂದ್: ರಾಜ್ಯ ಸರ್ಕಾರಿ ನೌಕರರ ಸಂಘ ಅಧಿಕೃತ ಘೋಷಣೆ

ಇದಕ್ಕೂ ಮುನ್ನ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಹೇಳಿದ್ದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮಾತನಾಡಿದ್ದ ಅವರು, ವೇತನ ಪರಿಷ್ಕರಣೆ ವಿಚಾರವಾಗಿ ಸಂಜೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಕೂಡಲೇ ಮಧ್ಯಂತರ ವರದಿ ನೀಡುವಂತೆ ಈಗಾಗಲೇ ಸೂಚಿಸಿದ್ದೇನೆ. ಮಧ್ಯಂತರ ವರದಿ ತರಿಸಿಕೊಂಡು ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಅವರು ಹೇಳಿದ್ದರು. ಆದರೆ, ಇದ್ಯಾವುದಕ್ಕೂ ನೌಕರರು ಸೊಪ್ಪುಹಾಕುವ ಲಕ್ಷಣ ಕಾಣಿಸುತ್ತಿಲ್ಲ.

ರಾಜ್ಯಾದ್ಯಂತ ಸುಮಾರು 10 ಲಕ್ಷ ಸರ್ಕಾರಿ ನೌಕರರು ಮಾರ್ಚ್​ 1ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಬಿಬಿಎಂಪಿ, ಬಿಡಿಎ ಸೇರಿದಂತೆ ಅನೇಕ ಇಲಾಖೆಗಳ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:28 pm, Tue, 28 February 23