ಒಕ್ಕಲಿಗರ ಪ್ರಬಲ ವಿರೋಧಕ್ಕೆ ಮಣಿದ ಸರ್ಕಾರ? ಜಾತಿ ಗಣತಿ ವರದಿ ಸಲ್ಲಿಕೆಯಾದ ನಂತರ ಪರಿಶೀಲಿಸಿ ನಿರ್ಧರಿಸುತ್ತೇವೆ ಎಂದ ಸಿದ್ದರಾಮಯ್ಯ

| Updated By: ಗಣಪತಿ ಶರ್ಮ

Updated on: Nov 03, 2023 | 6:28 PM

ಜಾತಿ ಗಣತಿಗೆ ಒಕ್ಕಲಿಗರಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ. ಇದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನೂ ಇಕ್ಕಟ್ಟಿಗೆ ಸಿಲುಕಿಸಿತ್ತು. ಮತ್ತೊಂದೆಡೆ, ಪ್ರತಿಪಕ್ಷ ಬಿಜೆಪಿಯೂ ಜಾತಿ ಗಣತಿ ವಿಚಾರವನ್ನು ಪ್ರಬಲ ಅಸ್ತ್ರವನ್ನಾಗಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಜಾತಿ ಗಣತಿ ವಿಚಾರವಾಗಿ ಸಿದ್ದರಾಮಯ್ಯ ಅವರು ನಿಲುವು ಸಡಿಲಿಸುವ ಸುಳಿವು ನೀಡಿದ್ದಾರೆ.

ಒಕ್ಕಲಿಗರ ಪ್ರಬಲ ವಿರೋಧಕ್ಕೆ ಮಣಿದ ಸರ್ಕಾರ? ಜಾತಿ ಗಣತಿ ವರದಿ ಸಲ್ಲಿಕೆಯಾದ ನಂತರ ಪರಿಶೀಲಿಸಿ ನಿರ್ಧರಿಸುತ್ತೇವೆ ಎಂದ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us on

ಗದಗ, ನವೆಂಬರ್ 3: ಜಾತಿ ಗಣತಿಯನ್ನು (Caste Census) ಜಾರಿಗೆ ತಂದೇ ತರುತ್ತೇವೆ ಎಂದು ಇತ್ತೀಚಿನ ವರೆಗೂ ಹೇಳುತ್ತಲೇ ಬಂದಿದ್ದ ಕರ್ನಾಟಕ ಕಾಂಗ್ರೆಸ್​​ ಸರ್ಕಾರ (Congress Government) ಇದೀಗ ಒಕ್ಕಲಿಗರಿಂದ ಪ್ರಬಲ ವಿರೋಧ ಎದುರಾದ ಬೆನ್ನಲ್ಲೇ ನಿಲುವು ಸಡಿಲಿಸಿದಂತೆ ಕಾಣುತ್ತಿದೆ. ಗದಗದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಜಾತಿಗಣತಿ ವರದಿ ಇನ್ನೂ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಜಾತಿಗಣತಿ ವರದಿ ಸಲ್ಲಿಸಿದರೆ, ಆನಂತರ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದರೊಂದಿಗೆ, ಜಾತಿ ಗಣತಿ ವಿಚಾರದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರ ನಿಲುವು ಸಡಿಲಿಸಿದ ಬಗ್ಗೆ ಸುಳಿವು ನೀಡಿದಂತಾಗಿದೆ ಎಂದೇ ಹೇಳಲಾಗುತ್ತಿದೆ.

ಜಾತಿ ಗಣತಿಗೆ ಒಕ್ಕಲಿಗರಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ. ಇದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನೂ ಇಕ್ಕಟ್ಟಿಗೆ ಸಿಲುಕಿಸಿತ್ತು. ಮತ್ತೊಂದೆಡೆ, ಪ್ರತಿಪಕ್ಷ ಬಿಜೆಪಿಯೂ ಜಾತಿ ಗಣತಿ ವಿಚಾರವನ್ನು ಪ್ರಬಲ ಅಸ್ತ್ರವನ್ನಾಗಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಕಾಂತರಾಜ್ ಸಮಿತಿ ವರದಿಯನ್ನು ಸುಡಬೇಕು ಎಂದು ಬಿಜೆಪಿ ನಾಯಕ ಕೆಎಸ್​ ಈಶ್ವರಪ್ಪ ವಾಗ್ದಾಳಿ ನಡೆಸಿದ್ದರು. ಅತ್ತ ಬಿಜೆಪಿಯ ಹಿಂದುಳಿದ ವರ್ಗಗಳ ನಾಯಕರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್, ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಸೆಳೆಯಲು ತಂತ್ರಗಾರಿಕೆ ಹೂಡಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಜಾತಿ ಗಣತಿ ವಿಚಾರವಾಗಿ ಸಿದ್ದರಾಮಯ್ಯ ಅವರು ನಿಲುವು ಸಡಿಲಿಸುವ ಸುಳಿವು ನೀಡಿದ್ದಾರೆ.

ಕಾಂತರಾಜು ಸಮಿತಿ ವರದಿ ವಿಚಾರವಾಗಿ ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತಶ್ರೀ ನೇತೃತ್ವದಲ್ಲಿ ಗುರುವಾರ ಸಭೆ ನಡೆಸಲಾಗಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ಅಶ್ವತ್ಥ್ ನಾರಾಯಣ್, ಶರತ್ ಬಚ್ಚೇಗೌಡ, ಎಂ.ಕೃಷ್ಣಪ್ಪ, ಎಸ್​​ಟಿ ಸೋಮಶೇಖರ್, ಆರಗ ಜ್ಞಾನೇಂದ್ರ ಹಾಗೂ ಒಕ್ಕಲಿಗ ಸಂಘದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಬಳಿಕ ಮಾತನಾಡಿದ್ದ ನಿರ್ಮಲಾನಂದನಾಥ ಸ್ವಾಮೀಜಿ, ಕಾಂತರಾಜು ವರದಿ ಅವೈಜ್ಞಾನಿಕ ಮತ್ತು ಲೋಪದೋಷದಿಂದ ಕೂಡಿದೆ. ಸರ್ಕಾರ ಇದನ್ನು ಪ್ರಕಟಮಾಡುವ ಮುನ್ನ ನಮ್ಮ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ: ಕಾಂತರಾಜ್ ವರದಿಯನ್ನು ಬೆಂಕಿಗೆ ಹಾಕಿ ಸುಡಬೇಕು; ಕೆಎಸ್​ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ನಂತರ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಸಂಸದ ಡಿಕೆ ಸುರೇಶ್, ನಿರ್ಮಲಾನಂದನಾಥ ಶ್ರೀಗಳು ಸಮಾಜದ ಅಭಿಪ್ರಾಯ ತಿಳಿಸಿದ್ದಾರೆ. ಇದರಲ್ಲಿ ರಾಜಕೀಯ ಉದ್ದೇಶ ಏನಿಲ್ಲ. ಕಾಂತರಾಜ್ ಸಮಿತಿ ವರದಿ ಬಗ್ಗೆ ಚರ್ಚೆ ನಡೆಯುತ್ತಿದೆ. ವರದಿ ಸರ್ಕಾರದ ಮುಂದೆ ಬಂದಿಲ್ಲ. ಸರ್ಕಾರ ಇನ್ನೂ ಸಮ್ಮತಿಸಿಲ್ಲ. ಸಮಾಜದ‌ ಆಗುಹೋಗುಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಸಮಾಜದ ಅಭಿಪ್ರಾಯವನ್ನ ಹೇಳಿದ್ದಾರೆ ತಪ್ಪೇನಿಲ್ಲ. ಈಗ ಸುಮ್ಮನೆ ಊಹಾಪೋಹ ಹರಡುತ್ತಿದ್ದೇವಷ್ಟೆ. ಕಾಂತರಾಜ್ ಸಮಿತಿ ವರದಿ ರಾಜಕೀಯ ವಸ್ತುವಲ್ಲ ಎಂದು ಹೇಳಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ