ಮುಡಾ ಹಗರಣ: ಹೈಕೋರ್ಟ್​ನಲ್ಲಿ ವಿರುದ್ಧ ತೀರ್ಪು ಬಂದರೆ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು?

ಮುಡಾ ಹಗರಣದ ಪ್ರಾಸಿಕ್ಯೂಷನ್ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್​​ನಲ್ಲಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಆಗಸ್ಟ್ 19, ಆಗಸ್ಟ್ 29 ಮತ್ತು ಆಗಸ್ಟ್ 31ರಂದು ಸುದೀರ್ಘ ವಾದ ಪ್ರತಿವಾದ ನಡೆದಿತ್ತು. ಇವತ್ತು ಕೂಡಾ ಅರ್ಜಿ ವಿಚಾರಣೆ ನಡೆಯಲಿದ್ದು, ಕೆಲವೇ ಕ್ಷಣದಲ್ಲಿ ವಾದ-ಪ್ರತಿವಾದ ಆರಂಭವಾಗಲಿದೆ. ಒಂದು ವೇಳೆ ಸಿಎಂ ವಿರುದ್ಧ ತೀರ್ಪು ಬಂದರೆ ಅವರ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ಮಾಹಿತಿ.

ಮುಡಾ ಹಗರಣ: ಹೈಕೋರ್ಟ್​ನಲ್ಲಿ ವಿರುದ್ಧ ತೀರ್ಪು ಬಂದರೆ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು?
ಸಿದ್ದರಾಮಯ್ಯImage Credit source: PTI
Follow us
| Updated By: ಗಣಪತಿ ಶರ್ಮ

Updated on: Sep 02, 2024 | 12:59 PM

ಬೆಂಗಳೂರು, ಸೆಪ್ಟೆಂಬರ್ 2: ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್​​ಗೆ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಇಂದೂ ಸಹ ನಡೆಯಲಿದೆ. ಈಗಾಗಲೇ 2-3 ದಿನ ವಿಚಾರಣೆ ನಡೆದಿದ್ದು, ಸುದೀರ್ಘ ವಾದ, ಪ್ರತಿವಾದವನ್ನು ನ್ಯಾಯಪೀಠ ಆಲಿಸಿದೆ.

ಒಂದು ವೇಳೆ ಸಿಎಂ ಪರ ತೀರ್ಪು ಬಂದರೆ, ಬೀಸುವ ದೊಣ್ಣೆಯಿಂದ ಅವರು ಮತ್ತಷ್ಟು ದಿನ ಪಾರಾಗಬಹುದು. ಪ್ರಾಸಿಕ್ಯೂಷನ್‌ನಿಂದ ಕುಗ್ಗಿರುವ ಸಿದ್ದರಾಮಯ್ಯಗೆ ಆನೆ ಬಲ ಬಂದಂತಾಗಲಿದೆ. ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರಕ್ಕೂ ನೈತಿಕ ಶಕ್ತಿ ಸಿಗಲಿದೆ. ಶಾಸಕರು, ಸಚಿವರು ಮತ್ತು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಅಲ್ಲದೇ ರಾಜಕೀಯವಾಗಿ ಸಿಎಂ ಮತ್ತಷ್ಟು ಬಲಿಷ್ಠವಾಗಬಹುದು. ಸಿಎಂ ಮತ್ತು ಸರ್ಕಾರದ ವಿರುದ್ದ ಹೋರಾಟ ನಡೆಸ್ತಿರೋ ಬಿಜೆಪಿಗೆ ಕಾನೂನು ಮೂಲಕವೇ ತಿರುಗೇಟು ಕೊಟ್ಟಂತಾಗುತ್ತದೆ.

ಆದರೆ, ಸಿದ್ದರಾಮಯ್ಯ ವಿರುದ್ಧವಾಗಿ ಹೈಕೋರ್ಟ್ ಆದೇಶ ಬಂದರೆ ಅವರಿಗೆ ಸಂಕಷ್ಟ ಎದುರಾಗಬಹುದು. ಹೀಗಿದ್ದಾಗ ಅವರ ಮುಂದೆ ಹಲವು ಆಯ್ಕೆಗಳಿವೆ.

ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳು

ರಾಜ್ಯಪಾಲರ ಪ್ರಾಸಿಕ್ಯೂಷನ್ ಪರ ಹೈಕೋರ್ಟ್ ಆದೇಶ ನೀಡಿದರೆ ತನಿಖೆಗೆ ಅವಕಾಶ ಸಿಕ್ಕಂತಾಗುತ್ತದೆ. ಆಗ ತಕ್ಷಣವೇ ಸಿಎಂ ವಿರುದ್ಧ ಎಫ್​ಐಆರ್ ದಾಖಲಾಗುವ ಸಾಧ್ಯತೆ ಇದೆ. ಈ ವೇಳೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು ಅಥವಾ ರಾಜೀನಾಮೆ ನೀಡದೇ ಕಾನೂನು ಹೋರಾಟ ಮುಂದುವರಿಸಬಹುದು.

ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಅವಕಾಶ ಸಿದ್ದರಾಮಯ್ಯಗೆ ಇರುತ್ತದೆ. ಈ ಮೂಲಕ ರಾಜ್ಯಪಾಲರ ವಿರುದ್ಧ ಕಾನೂನು ಸಂಘರ್ಷ ಮುಂದುವರಿಯಲಿದೆ. ಜೊತೆಗೆ ರಾಜ್ಯಾದ್ಯಂತ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ ನೀಡಬಹುದು. ರಾಷ್ಟ್ರ ಮಟ್ಟದಲ್ಲೂ ಕಾಂಗ್ರೆಸ್ ಈ ವಿಚಾರ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ, ರಾಜ್ಯಪಾಲರ ವಿರುದ್ಧ ರಾಜಕೀಯ ಹೋರಾಟ ಆರಂಭಿಸಬಹುದು.

ಹೀಗಾಗಿ, ಸಂಜೆವರೆಗೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವ ಸಿಎಂ ನಂತರ ಮೈಸೂರಿನತ್ತ ತೆರಳಲಿದ್ದಾರೆ. ಮಂಗಳವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿರುವ ಅವರು, ಚಾಮುಂಡೇಶ್ವರಿಯ ದರ್ಶನ ಪಡೆಯಲಿದ್ದಾರೆ.

ಈ ಮಧ್ಯೆ, ಸಿಎಂಗೆ ಕೋರ್ಟ್‌ನಲ್ಲಿ ಹಿನ್ನಡೆಯಾಗಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ಸ್ವಇಚ್ಛೆಯಿಂದ ಕೆಲಸ ಮಾಡುತ್ತಿಲ್ಲ. ಬಿಜೆಪಿಯವರು ಹೇಳಿದಂತೆ ಮಾಡ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಸಚಿವ ಜಮೀರ್ ಅಹ್ಮದ್ ಸಹ ಸಿಎಂ ಪರ ಬ್ಯಾಟ್ ಬೀಸಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್: ಇಂದು ವಿಚಾರಣೆ ಮುಂದುವರಿಕೆ, ಹೈಕೋರ್ಟ್‌ನತ್ತ ಎಲ್ಲರ ಚಿತ್ತ

ಮುಡಾ ಕೇಸ್‌ನಲ್ಲಿ ಸಿಎಂ ಪಾತ್ರವಿಲ್ಲ, ಹೈಕೋರ್ಟ್‌ನಲ್ಲಿ ಗೆಲುವು ಸಿಕ್ಕೆ ಸಿಗುತ್ತೆಂಬ ವಿಶ್ವಾಸದಲ್ಲಿ ಸಚಿವರಿದ್ದಾರೆ. ಆದರೆ, ಹೈಕೋರ್ಟ್‌ನಲ್ಲಿ ಏನಾಗುತ್ತದೆ? ಇಂದೇ ವಿಚಾರಣೆ ಮುಗಿದು ಆದೇಶ ಹೊರಬೀಳುತ್ತದೆಯೇ? ಆದೇಶ ಕಾಯ್ದಿರಿಸಬಹುದಾ? ಈ ಎಲ್ಲ ಪ್ರಶ್ನೆಗೂ ಸಂಜೆ 5 ಗಂಟೆಯೊಳಗೆ ಉತ್ತರ ಸಿಗುವ ನಿರೀಕ್ಷೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ