ನಾಳೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ: ಅರ್ಜಿ ಎಲ್ಲಿ,ಹೇಗೆ ಹಾಕಬೇಕು? ಮಾಹಿತಿ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್

| Updated By: ರಮೇಶ್ ಬಿ. ಜವಳಗೇರಾ

Updated on: Jul 18, 2023 | 1:44 PM

ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಯಲ್ಲಿ ಒಂದಾದ ಮನೆ ಒಡತಿಗೆ 2000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.

ನಾಳೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ: ಅರ್ಜಿ ಎಲ್ಲಿ,ಹೇಗೆ ಹಾಕಬೇಕು? ಮಾಹಿತಿ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮಿ ಹೆಬ್ಬಾಳ್ಕರ್
Follow us on

ಬೆಂಗಳೂರು, (ಜುಲೈ 18): ವಿಧಾನಸಭೆ ಚುನಾವಣೆ (Karnataka Assembly Elections 2023) ಸಂದರ್ಭದಲ್ಲಿ ನೀಡಿದ್ದ ಮನೆ ಯಜಮಾನಿಗೆ 2000 ರೂ. ಹಣ ನೀಡುವ ಭರವಸೆಯನ್ನು ಈಡೇರಿಸಲು ಕಾಂಗ್ರೆಸ್ (Congress) ಮುಹೂರ್ತ ನಿಗದಿಪಡಿಸಿದೆ. ನಾಳೆ ಅಂದರೆ ಜುಲೈ 19ರಂದು ಸಂಜೆ 5ಕ್ಕೆ ಗೃಹಲಕ್ಷ್ಮೀ ಯೋಜನೆಗೆ(Gruha Lakshmi scheme )ಅಧಿಕೃತವಾಗಿ ಚಾಲನೆ ಸಿಗಲಿದೆ. ಈ ಬಗ್ಗೆ ಟಿವಿ9ಗೆ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar), ಗೃಹಲಕ್ಷ್ಮೀ ಯೋಜನೆಗೆ ನಾಳೆ (ಜುಲೈ 19) ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಅವರು ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Gruha Lakshmi scheme: ಕೊನೆಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್

ನಮ್ಮ ಇಲಾಖೆಯು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಧಿಕಾರಿಗಳು, ಸಿಬ್ಬಂದಿಗೆ ತಳ ಹಂತದಿಂದ ತರಬೇತಿ ಕೊಟ್ಟಿದ್ದೇವೆ. ನಾಡಕಚೇರಿ, ಗ್ರಾಮ ಒನ್, ಬೆಂಗಳೂರು ಒನ್ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಮನೆ ಯಜಮಾನಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಪತಿಯ ಆಧಾರ್ ​​ಕಾರ್ಡ್ ಕೂಡ ಬೇಕಾಗುತ್ತೆ. ಆಧಾರ್​ ಜತೆಗೆ ಮೊಬೈಲ್ ಕೊಂಡೊಯ್ದರೆ ಸಾಕು, ಬೇರೇನೂ ಬೇಡ ಎಂದರು.

ಬೇರೆ ಖಾತೆಗೆ ಹಣ ಹಾಕಿ ಎನ್ನುವವರು ಪಾಸ್​​ಬುಕ್ ಜೆರಾಕ್ಸ್ ಕೊಡಬೇಕು. ಯೋಜನೆಯ ಉಚಿತ ಲಾಭ ಪಡೆದುಕೊಳ್ಳಲು ಸಹಾಯವಾಣಿ 8147500500 ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು SMS ಮಾಡಿ. ಕೂಡಲೇ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ಹೋಗುತ್ತೆ. ಯಾವುದೇ ಮಧ್ಯವರ್ತಿಗಳ ಮೊರೆ ಹೋಗುವ ಅಗತ್ಯವಿಲ್ಲ. ಗೊಂದಲವಿದ್ದರೆ 1902 ನಂಬರ್​ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಎಂದು ಮಾಹಿತಿ ನೀಡಿದರು.

ಗೃಹಲಕ್ಷ್ಮೀ ಯೋಜನೆ ಬಗ್ಗೆ ಯಾವುದೇ ರೀತಿಯ ಗೊಂದಲವಿಲ್ಲ. ಮನೆ ಯಜಮಾನಿ ಯಾರೆಂದು ಕುಟುಂಬದವರೇ ನಿರ್ಧರಿಸುತ್ತಾರೆ. ಗೃಹಲಕ್ಷ್ಮೀ ಯೋಜನೆಯಿಂದ 1.28 ಕೋಟಿ ಕುಟುಂಬಕ್ಕೆ ಲಾಭವಾಗಿತ್ತೆ. ಈ ಯೋಜನೆಗೆ ಬಜೆಟ್​​ನಲ್ಲಿ 17,500 ಕೋಟಿ ರೂ. ಹಾಕಿದ್ದೇವೆ. ಆಗಸ್ಟ್​ನಲ್ಲಿ ಫಲಾನುಭವಿಗಳ ಬ್ಯಾಂಕ್​​ ಖಾತೆಗೆ ಹಣ ಹಾಕುತ್ತೇವೆ ಎಂದು ತಿಳಿಸಿದರು.

ಮುಂದಿನ ವರ್ಷಕ್ಕೆ ಇದು 30 ಸಾವಿರ ಕೋಟಿಯನ್ನ ದಾಟುತ್ತೆ. 1 ಕೋಟಿ 11 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಮೊಬೈಲ್ ಸಂಖ್ಯೆ ಆಧಾರ್ ಹಾಗೂ ಬ್ಯಾಂಕ್ ಗೆ ಲಿಂಕ್ ಆಗಿದೆ. ಒಂದು ದಿನ ಒಂದು ಕೇಂದ್ರದಲ್ಲಿ 60 ಜನ ಅರ್ಜಿಯನ್ನ ಹಾಕಬಹುದು. ಗೊಂದಲ ಆಗಬಾರದು ಅಂತ 60 ಮಂದಿಗೆ ಮಾತ್ರ ಸೀಮಿತಗೊಳಿಸಿದ್ದೇವೆ. ಸುಮಾರು 11 ಸಾವಿರ ಸೇವಾ ಕೇಂದ್ರಗಳು ರಾಜ್ಯದಲ್ಲಿದ್ದು, ಒಂದು ದಿನಕ್ಕೆ 60 ಅಂದರೆ ಒಟ್ಟಾರೆ 6.5 ಲಕ್ಷ ಜನರು ಈ ಸೇವೆಯನ್ನ ಪಡೆದುಕೊಳ್ಳುತ್ತಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು.

Published On - 1:42 pm, Tue, 18 July 23