ಸಿಡಿ ಆರೋಪಿ ಶ್ರವಣ್​ ಸಹೋದರ ನಾಪತ್ತೆ ಪ್ರಕರಣ: ಹೇಬಿಯಸ್​ ಕಾರ್ಪಸ್​ ಅರ್ಜಿ ಸುಖಾಂತ್ಯ

ಅಕ್ರಮ ಬಂಧನದಲ್ಲಿ ಇಲ್ಲವೆಂದು ಅರ್ಜಿದಾರರೇ ಹೇಳಿರುವ ಕಾರಣ ಹೇಬಿಯಸ್​ ಕಾರ್ಪಸ್​ ಪ್ರಕರಣ ಸುಖಾಂತ್ಯಗೊಂಡಿದೆ.

ಸಿಡಿ ಆರೋಪಿ ಶ್ರವಣ್​ ಸಹೋದರ ನಾಪತ್ತೆ ಪ್ರಕರಣ: ಹೇಬಿಯಸ್​ ಕಾರ್ಪಸ್​ ಅರ್ಜಿ ಸುಖಾಂತ್ಯ
ಕರ್ನಾಟಕ ಹೈಕೋರ್ಟ್​
Updated By: ಸಾಧು ಶ್ರೀನಾಥ್​

Updated on: Mar 20, 2021 | 11:38 AM

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಶ್ರವಣ್​ ಸೋದರ ಚೇತನ್​
ನಾಪತ್ತೆಗೆ ಸಂಬಂಧಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ವಿಚಾರಣೆ ಮಾಡಿ, ಇತ್ಯರ್ಥ ಪಡಿಸಿದೆ. ಶ್ರವಣ್ ತಂದೆ ಸೂರ್ಯಕುಮಾರ್ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ವಿಚಾರಣೆ ಮಾಡಿದ್ದು, ಅರ್ಜಿದಾರ ಸೂರ್ಯಕುಮಾರ್ ಉಪಸ್ಥಿತಿಯಲ್ಲಿ ಪ್ರಕರಣ ಇತ್ಯರ್ಥಗೊಂಡಿದೆ.

ಈ ವೇಳೆ, ನಾಪತ್ತೆಯಾಗಿರುವ ಚೇತನ್​ ಸಂಬಂಧಿಯೊಂದಿಗೆ ತಿರುಪತಿಗೆ ತೆರಳಿದ್ದಾನೆ, ಆತ ನನ್ನ ಸಂಪರ್ಕದಲ್ಲಿದ್ದಾನೆ ಎಂದು ಸೂರ್ಯಕುಮಾರ್​ ಹೇಳಿಕೆ ನೀಡಿದ್ದಾರೆ. ಅದಕ್ಕೂ ಮುನ್ನ ಚೇತನ್​ನನ್ನು ನಿನ್ನೆ 1.30ರ ಸುಮಾರಿಗೆ ವಕೀಲರು ಸಂಪರ್ಕಿಸಿದ್ದಾರೆ, ಅವರ ಸೂಚನೆ ಮೇರೆಗೆ ಮೊಬೈಲ್​ ಸ್ವಿಚ್​ ಆಫ್​ ಆಗಿದೆ ಎಂದು ಸರ್ಕಾರಿ ವಕೀಲರು ಆರೋಪ ಮಾಡಿದ್ದಾರೆ. ಆದರೂ, ಅಕ್ರಮ ಬಂಧನದಲ್ಲಿ ಇಲ್ಲವೆಂದು ಅರ್ಜಿದಾರರೇ ಹೇಳಿರುವ ಕಾರಣ ಹೇಬಿಯಸ್​ ಕಾರ್ಪಸ್​ ಪ್ರಕರಣ ಸುಖಾಂತ್ಯಗೊಂಡಿದೆ.

ಈ ಮಧ್ಯೆ, ಸರ್ಕಾರಿ ವಕೀಲರ ಆರೋಪಕ್ಕೆ ಹಿರಿಯ ವಕೀಲ ಎ.ಎಸ್​.ಪೊನ್ನಣ್ಣ ಆಕ್ಷೇಪ ವ್ಯಕ್ತಪಡಿಸಿದ್ದು, ಪೊಲೀಸರಿಂದ ಕಾನೂನುಬಾಹಿರವಾಗಿ ಮೊಬೈಲ್ ಕದ್ದಾಲಿಕೆ ಆಗಿದೆ ಎಂಬ ಆರೋಪವೂ ಕೇಳಿಬಂದಿತು.

ಮಾರ್ಚ್​ 16ರಿಂದ ನನ್ನ ಪುತ್ರ ಚೇತನ್ ನಾಪತ್ತೆಯಾಗಿದ್ದಾನೆ. ಚೇತನ್​ನನ್ನು ಪೊಲೀಸರು ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ. ಕಬ್ಬನ್​ ಪಾರ್ಕ್​ ಠಾಣೆಗೆ ಹೋಗಿದ್ದ ಚೇತನ್​ ಮಾರ್ಚ್​ 16ರಿಂದ ಮರಳಿ ಬಂದಿಲ್ಲವೆಂದು ಆತನ ತಂದೆ ಸೂರ್ಯಕುಮಾರ್ ಕೋರ್ಟ್​ ಮೊರೆ ಹೋಗಿದ್ದರು.

ನಿನ್ನೆ ಏನಾಗಿತ್ತು.. ಇಲ್ಲಿದೆ ವರದಿ:
ಜಾರಕಿಹೊಳಿ ಸಿಡಿ ಪ್ರಕರಣ: ಎಸ್​ಐಟಿ ಪೊಲೀಸರಿಗೆ ಬಿಸಿ ಮುಟ್ಟಿಸಿದ ಕೋರ್ಟ್, ಯುವಕನನ್ನು ಶನಿವಾರ ಹಾಜರು ಪಡಿಸುವಂತೆ ಆದೇಶ