Hassan News: ಇ-ಸ್ವತ್ತು ಮಾಡಿಕೊಡಲು 25 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಅಧಿಕಾರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 05, 2023 | 3:07 PM

ಇತ್ತೀಚೆಗೆ ಲೋಕಾಯುಕ್ತ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದೆ. ಅದರಂತೆ ಇದೀಗ ಹಾಸನ ನಗರಸಭೆ ವಾರ್ಡ್ ಅಧಿಕಾರಿ ದುಬ್ಬೇಗೌಡ ಎಂಬಾತ ಇ-ಸ್ವತ್ತು ಮಾಡಿಕೊಡಲು 25 ಸಾವಿರ ಲಂಚ ಕೇಳಿದ್ದು, ಅದನ್ನು ಪಡೆಯುವಾಗ ರೆಡ್​ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

Hassan News: ಇ-ಸ್ವತ್ತು ಮಾಡಿಕೊಡಲು 25 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಅಧಿಕಾರಿ
ಆರೋಪಿ ಅಧಿಕಾರಿ
Follow us on

ಹಾಸನ: ಇತ್ತೀಚೆಗೆ ಲೋಕಾಯುಕ್ತ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದೆ. ಕಳೆದ ಜೂ.28 ರಂದು ಕರ್ನಾಟಕದ 62 ಕಡೆಗಳಲ್ಲಿ ಲೋಕಾಯುಕ್ತ ದಾಳಿ(Lokayukta Raid) ಮಾಡಿ ಕೋಟ್ಯಾಂತರ ರೂಪಾಯಿ ಚಿನ್ನಾಭರಣ, ನಗದು, ಅಕ್ರಮ ಆಸ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಅದರಂತೆ ಇದೀಗ ಹಾಸನ(Hassan) ನಗರಸಭೆ ವಾರ್ಡ್ ಅಧಿಕಾರಿ ದುಬ್ಬೇಗೌಡ ಎಂಬಾತ ಇ-ಸ್ವತ್ತು ಮಾಡಿಕೊಡಲು 25 ಸಾವಿರ ಲಂಚ ಕೇಳಿದ್ದು, ಅದನ್ನು ಪಡೆಯುವಾಗ ರೆಡ್​ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಾಲು ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಅಧಿಕಾರಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಭ್ರಷ್ಟ ಅಧಿಕಾರಿಗಳ ಮೇಲೆ ಕರ್ನಾಟಕ ರಾಜ್ಯಾದ್ಯಂತ ದಾಳಿ ಮಾಡಿದ್ದ ಲೋಕಾಯುಕ್ತ

ಇನ್ನು ಜೂ.28ರಂದು ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕ ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮನೆ, ಕಛೇರಿ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಅಪಾರ ಪ್ರಮಾಣದ ಹಣ, ಚಿನ್ನ, ಬೆಳ್ಳಿ ಸೇರಿದಂತೆ ಐಷಾರಾಮಿ ಕಾರು, ಆಸ್ತಿ ದಾಖಲೆಗಳ ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಬೆಂಗಳೂರು ಸೇರಿದಂತೆ ರಾಜ್ಯದ 62ಕ್ಕೂ ಹೆಚ್ಚು ಕಡೆ ಬೃಹತ್​ ಬೇಟೆಯಾಡಿದ್ದರು.

ಇದನ್ನೂ ಓದಿ:ಲೋಕಾಯುಕ್ತ ಕಸ್ಟಡಿಯಲ್ಲಿರುವ ಅಜಿತ್​​ ರೈ ರಾಯಚೂರಗೆ ವರ್ಗ​: ಸಾರ್ವಜನಿಕರಿಂದ ಭಾರಿ ವಿರೋಧ

ಚಿಕ್ಕಮಗಳೂರಿನಲ್ಲಿ ಒಟ್ಟು 4 ಕಡೆ ಲೋಕಾಯುಕ್ತ ದಾಳಿ ನಡೆದಿತ್ತು. ಜಿಲ್ಲಾ ನಿರ್ಮಿತಿ ಕೇಂದ್ರಗಳ ಯೋಜನಾ ವ್ಯವಸ್ಥಾಪಕ ಗಂಗಾಧರ್​ ಮನೆ, ಹೋಟೆಲ್​ ಮತ್ತು ಆತನಿಗೆ ಸಂಬಂಧಪಟ್ಟ ಪೆಟ್ರೋಲ್​ ಬಂಕ್​ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಕೋಟ್ಯಂತರ ಮೌಲ್ಯದ 16 ಮನೆಗಳು, 1 ರೆಸಾರ್ಟ್​, ಚಿನ್ನ , ಬೆಳ್ಳಿ ಸಿಕ್ಕಿತ್ತು. ಈ ಮೂಲಕ ಒಟ್ಟು 3.76 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು.

ಅದರಂತೆ ಬಾಗಲಕೋಟೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯಾಡಿತ್ತು. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್​ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿ, ಬರೊಬ್ಬರಿ 32 ಲಕ್ಷ ನಗದು, ಚಿನ್ನಾಭರಣ, 31 ವ್ಯಾನಿಟಿ ಬ್ಯಾಗ್, ಬೆಳ್ಳಿ ಫ್ರೇಮ್​ಯಿರುವ ಫೋಟೋ, 10ಕ್ಕೂ ಹೆಚ್ಚು ಲಗೇಜ್​ ಬ್ಯಾಗ್, ಚಿನ್ನದ ಬಳೆ, ಸರ, ಎರಡು ಆಮೆಗಳು ಪತ್ತೆ ಆಗಿದ್ದವು. ಅಷ್ಟೇ ಅಲ್ಲದೇ ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರುಗೆ ಸೇರಿದ 4 ಕಡೆ ದಾಳಿ ಮಾಡಲಾಗಿತ್ತು. ಆತನ ಬಳಿ 71.88 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ