ಇಂದು ಒಂದೇ ದಿನ ಹಾಸನಾಂಬೆ ದರ್ಶನ ಪಡೆದ ಸಿದ್ದರಾಮಯ್ಯ-ಕುಮಾರಸ್ವಾಮಿ ಹೇಳಿದ್ದೇನು?

| Updated By: ಆಯೇಷಾ ಬಾನು

Updated on: Nov 07, 2023 | 3:38 PM

ಇಂದು ಒಂದೇ ದಿನ ಸಿಎಂ ಸಿದ್ದರಾಮಯ್ಯ ಹಾಗೂಈ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಇಬ್ಬರೂ ಹಾಸನಾಂಬೆ ದರ್ಶನ ಪಡೆದಿದ್ದಾರೆ. ದರ್ಶನದ ಬಳಿಕ ಒಬ್ಬರನೊಬ್ಬರ ವಿರುದ್ಧ ಟೀಕೆ, ವಾಗ್ದಾಳಿಗಳನ್ನು ಮಾಡಿದ್ದಾರೆ. ಆಸೆ, ಆಮೀಷ ಒಡ್ಡಿ ಊಹಾಪೋಹ ಹರಡುತ್ತಿದ್ದಾರೆ. ತಾಯಿಯ ಅನುಗ್ರಹದಿಂದ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ರವಾನೆ ಆಗಬೇಕು ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

ಹಾಸನ, ನ.07: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ (Hasanamba Temple) ಸನ್ನಿಧಿಗೆ ಇಂದು ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ಭೇಟಿ ನೀಡಿ ತಾಯಿಯ ದರ್ಶನ ಮಾಡಿದರು. ಹವಾಮಾನ ವೈಪರೀತ್ಯ ಹಿನ್ನೆಲೆ ಹೆಲಿಕಾಪ್ಟರ್ ಬದಲಿಗೆ ರಸ್ತೆ ಮೂಲಕ ಹಾಸನಕ್ಕೆ ಆಗಮಿಸಿದ ಸಿಎಂ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ತಾಯಿಯ ದರ್ಶನ ಮಾಡಿದರು. ಸಿಎಂಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸಾಥ್‌ ನೀಡಿದರು. ಮತ್ತೊಂದೆಡೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಕುಟುಂಬ ಸಮೇತ ಆಗಮಿಸಿ ಹಾಸನಾಂಬೆ ದರ್ಶನ ಪಡೆದರು.

ಮಾಜಿ ಸಿಎಂಗೆ ಮಂಗಳವಾದ್ಯ, ಕಲಾತಂಡಗಳ ನಾದ ಸ್ವರದೊಂದಿಗೆ ಭವ್ಯ ಸ್ವಾಗತ

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಕುಟುಂಬ ಸಮೇತ ಆಗಮಿಸಿ ಹಾಸನಾಂಬೆ ದರ್ಶನ ಪಡೆದರು. ಹೆಚ್​ಡಿಕೆಗೆ ಶಾಸಕ ಸ್ವರೂಪ್ ಪ್ರಕಾಶ್, MLC ಬೋಜೇಗೌಡ ಸಾಥ್​ ನೀಡಿದರು. ಈ ವೇಳೆ ಜಿಲ್ಲಾಡಳಿತ ಮಾಜಿ ಸಿಎಂಗೆ ಮಂಗಳವಾದ್ಯ, ಕಲಾತಂಡಗಳ ನಾದ ಸ್ವರದೊಂದಿಗೆ ಭವ್ಯ ಸ್ವಾಗತ ನೀಡಿತು. ಹಾಸನಾಂಬ ದೇಗುಲದ ಆವರಣದಲ್ಲಿ ಕುಮಾರಸ್ವಾಮಿ ದಂಪತಿ ಗಣಪತಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಅರ್ಚಕರು ಕುಮಾರಸ್ವಾಮಿ ಕೈಯಿಂದ ಅನಿತಾ ಕುಮಾರಸ್ವಾಮಿಗೆ ಹಾರ ಹಾಕಿಸಿದರು. ಹೆಚ್​ಡಿಕೆ ಇಂದಿನಿಂದ ಎರಡು ದಿನ ಹಾಸನದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಹಾಸನಾಂಬೆ ದರ್ಶನದ ಬಳಿಕ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಹಾಸನಾಂಬೆ ದರ್ಶನಕ್ಕೆ ಪ್ರತೀ ವರ್ಷ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ನಾವು ಸಣ್ಣವರಿದ್ದಾಗ ಹಾಸನಾಂಬೆ ಜಾತ್ರೆಗೆ ಬರುತ್ತಿದ್ದೆವು. ಆಗಲೂ ಹಾಸನಾಂಬೆ ದೇವಿಯ ದರ್ಶನ ಮಾಡಿದ ನೆನಪು ಇದೆ. ನಾಡಿನ ಜನರ ಸುಖ ನೆಮ್ಮದಿಗಾಗಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಮಳೆಯಿಲ್ಲದೆ ಬೆಳೆ ಹಾನಿಯಾಗಿದೆ ಈಗ ಮಳೆಯಾಗಿ ಹಾನಿಯಾಗುತ್ತಿದೆ. ಈ ಸಂಕಷ್ಟದಿಂದ ನಮ್ಮ ರೈತರನ್ನು ಪಾರುಮಾಡು ಎಂದು ದೇವಿಯನ್ನು ಕೇಳಿಕೊಂಡಿದ್ದೇನೆ. ನಾಡಿನ ಜನತೆಯ ಸಂಪತ್ತು ನಾಡಿನ ಜನರ ಬದುಕಿಗೆ ಸದುಪಯೋಗ ಆಗಬೇಕು. ಈ ಸದುಪಯೋಗ ಮಾಡೋ ಮನಸ್ಸು ಆಡಳಿತ ನಡೆಸುವವರಿಗೆ ಕೊಡಲಿ ಎಂದು ಬೇಡಿಕೊಂಡಿದ್ದೇನೆ ಎಂದರು.

ಇದನ್ನೂ ಓದಿ: ವಿಜಯಪುರದಿಂದ ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದ ಗೌಸ್ ಮೊಹಿಯುದ್ದೀನ್ ಮತ್ತವರ ಮಗಳು ಹಾಜಿರ

ಆ ತಾಯಿಯ ಅನುಗ್ರಹ ಎಲ್ಲರಿಗೂ ದೊರಕಲಿ. ಇಂದು ಜನರು ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಸತ್ಯ, ಧರ್ಮ ಆಚರಣೆ ಮಾಡುವ ದಿನಗಳು ಪುನಃ ಆರಂಭವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ನಮ್ಮ ಕುಟುಂಬಕ್ಕೆ ದೊಡ್ಡ ಮಟ್ಟದಲ್ಲಿ ಬೆಳೆವಣಿಗೆಯಾಗಲು ತಾಯಿಯ ಆಶೀರ್ವಾದ ಇದೆ. ದೇವೇಗೌಡರು ಪ್ರಧಾನಮಂತ್ರಿ ಆಗಿ ದೇಶವನ್ನು ಅಳ್ವಿಕೆ ಮಾಡುವ ಶಕ್ತಿಯನ್ನು ಈ ತಾಯಿ ನೀಡಿದ್ದಾಳೆ. ಸೋಲು-ಗೆಲುವು ಪ್ರತಿನಿತ್ಯ ಕಾಣುತ್ತಿದ್ದೇವೆ. ಸಂಪೂರ್ಣವಾಗಿ ತೀರ್ಪು ಕೊಡುವುದು ದೇವರು. ನಮ್ಮ ಶಕ್ತಿಯನ್ನು ಜನತೆಗಾಗಿ ಧಾರೆ ಎರೆಯುತ್ತೇವೆ ಎಂದರು.

ಹಾಸನದಿಂದಲೇ ಒಗ್ಗಟ್ಟು ಪ್ರದರ್ಶನ ಮಾಡಲು ಒಗ್ಗಟ್ಟಾಗಿ ಸೇರುತ್ತಿದ್ದೇವೆ

ಇದೇ ವೇಳೆ ಜೆಡಿಎಸ್​ ಸಭೆ ಬಗ್ಗೆ ಮಾತನಾಡಿದ ಹೆಚ್​ಡಿಕೆ, ನಾಡಿನಲ್ಲಿ ತೀವ್ರ ಬರಗಾವಿದೆ. ನಮ್ಮ ಶಾಸಕರ ಮೇಲೆ ಗದಾಪ್ರಹಾರ ನಡೆಯುತ್ತಿದೆ. ಆಸೆ, ಆಮೀಷ ಒಡ್ಡಿ ಊಹಾಪೋಹ ಹರಡುತ್ತಿದ್ದಾರೆ. ತಾಯಿಯ ಅನುಗ್ರಹದಿಂದ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ರವಾನೆ ಆಗಬೇಕು. ಈ‌ ಬರಗಾಲದಲ್ಲಿ ತಾಯಿಯ ಈ ಪುಣ್ಯ ಕ್ಷೇತ್ರದಲ್ಲಿ, ಈ ಮಣ್ಣಿನಿಂದಲೇ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಬರಗಾಲದಲ್ಲಿ ವಿದೇಶಕ್ಕೆ ಹೋಗಿ ಅಲ್ಲಿ ಸಭೆ ಮಾಡಿ ಒಗ್ಗಟ್ಟು ಪ್ರದರ್ಶಿಸುವುದು ಬೇಡ. ಹಾಗಾಗಿ ಹಾಸನದಿಂದಲೇ ಒಗ್ಗಟ್ಟು ಪ್ರದರ್ಶನ ಮಾಡಲು ಎಲ್ಲಾ ಶಾಸಕರು ಒಗ್ಗಟ್ಟಾಗಿ ಸೇರುತ್ತಿದ್ದೇವೆ ಎಂದರು. ಜೆಡಿಎಸ್​ನಿಂದ 8-9 ಶಾಸಕರು ಕಾಂಗ್ರೆಸ್​ಗೆ ಹೋಗ್ತಾರೆ ಅನ್ನೋದು ಸುಳ್ಳು. ನಮ್ಮ ಶಾಸಕರು ಕಾಂಗ್ರೆಸ್​ಗೆ ಹೋಗುತ್ತಾರೆಂದು ವದಂತಿ ಹಬ್ಬಿಸಲಾಗ್ತಿದೆ ಎಂದರು.

ಹೆಚ್​ಡಿಕೆಗೆ ಸಿದ್ದರಾಮಯ್ಯ ತಿರುಗೇಟು

ಹಾಸನಾಂಬೆ ದರ್ಶನದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಮಳೆ ಆಗಲಿ ಅಂತಾ ಹಾಸನಾಂಬೆಗೆ ಪ್ರಾರ್ಥನೆ ಮಾಡಿದ್ದೇನೆ. ನನಗೆ ದೇವರ ಮೇಲೆ ನಂಬಿಕೆ ಇದೆ. ಹಾಸನಾಂಬೆ ದರ್ಶನಕ್ಕೆ ಬರಬೇಕು ಎಂದು ರಾಜಣ್ಣ ಕರೆದರು. ಅದಕ್ಕಾಗಿ ಬಂದಿದ್ದೇನೆ‌. ಮುಂಗಾರು ಕೈಕೊಟ್ಟಿದೆ, ಹಿಂಗಾರಾದ್ರೂ ಬರಲಿ. ಈ ಮಳೆಯಾದರೆ ದನ ಕರುಗಳಿಗೆ ಮೇವು ಸಿಗುತ್ತೆ. ಬೆಂಗಳೂರಲ್ಲಿ ಮಳೆ ಆಗಿದೆ, ಜನರ ಆಸ್ತಿಪಾಸ್ತಿಗೆ ತೊಂದರೆ ಆಗಿಲ್ಲ ಎಂದರು.

ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಮಳೆ ಅಡ್ಡಿ: ದಿಢೀರ್ ಸುರಿದ ಮಳೆಗೆ ಹೈರಾಣಾದ ಭಕ್ತರು

ಇನ್ನು ಹಾಸನಾಂಬೆ ವಿಚಾರದಲ್ಲಿ ಮೌಢ್ಯ ಇದೆ ಎಂಬ ವಿಚಾರ ಸಂಬಂಧ ಮಾತನಾಡಿದ ಸಿಎಂ, ಮೌಢ್ಯ ನಿನ್ನೆ ಮೊನ್ನೆಯದಲ್ಲ. ಮೌಢ್ಯ ಅನ್ನೋದು ನಂಬಿಕೆ. ಈ ನಂಬಿಕೆಗಳಲ್ಲಿ ಅಪನಂಬಿಕೆ ಅನ್ನೋದು ಇದೆ. ನಾವು ಮೌಢ್ಯ ವಿರೋಧಿ ಕಾಯ್ದೆ ಮಾಡಿದ್ದೇವೆ. ನನ್ನ ಅರಿವಿಗೆ ಬರುವ ರೀತಿಯಲ್ಲಿ ಮೌಢ್ಯ ಆಚರಣೆ ಮಾಡಲ್ಲ. ಆದರೆ ದೇವರ ಬಗ್ಗೆ ನನಗೆ ನಂಬಿಕೆ ಇದೆ. 99.9 99% ಜನರು ದೇವರನ್ನು ನಂಬುತ್ತಾರೆ. ನಾನು ಕೂಡ ಮೊದಲಿಂದ ದೇವರನ್ನ ನಂಬಿದ್ದೇ‌ನೆ ಎಂದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಟೀಕೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಸಿಎಂ, ಕುಮಾರಸ್ವಾಮಿ ಯಾವತ್ತು ಸತ್ಯ ಹೇಳಿದ್ದಾರೆ? ಅವರು ಬರೀ ಸುಳ್ಳೆ ಹೇಳೋದು. ಸುಳ್ಳು ಆರೋಪ ಮಾಡೋದು, ಸುಳ್ಳು ಹೇಳೋದು ಬಿಟ್ರೆ ಅವರಿಗೆ ಬೇರೆ ಕೆಲಸ ಇಲ್ಲ. ವಿಪಕ್ಷ ಅಂದ್ರೆ ಸಲಹೆ ಕೊಡಬೇಕು. ನಾವು ಕೇಂದ್ರದ ಬಳಿ ಹಣ ಕೇಳಬಾರದಾ, ಅದು ಜಗಳನಾ? ಕೇಂದ್ರ, ರಾಜ್ಯ ಸರ್ಕಾರ ಸಮನ್ವಯದಿಂದ ಕೆಲಸ ಮಾಡಬೇಕು. ರಾಜ್ಯದಲ್ಲಿ ಬರ ಬಂದಿದೆ, ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇದೆ. ರಾಜ್ಯದಲ್ಲಿ 37 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಕೇಂದ್ರ ಸರ್ಕಾರದ ಬಳಿ 17,900 ಕೋಟಿ ಅನುದಾನ ಕೇಳಿದ್ದೇವೆ. ಕೇಂದ್ರ ಬರ ತಂಡ ಪರಿಶೀಲನೆ ಮಾಡಿದೆ, ಆದರೆ ವರದಿ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಹಾಸನದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ