ಹಾಸನದಲ್ಲಿ ಚಿರತೆ ದಾಳಿಗೆ ಹಸು ಬಲಿ, ಮೂರು ಹಸುಗಳಿಗೆ ಗಂಭೀರ ಗಾಯ, ಕೋಲಾರದಲ್ಲಿ ಕರು ತಿಂದ ಚಿರತೆ!

| Updated By: Rakesh Nayak Manchi

Updated on: Dec 07, 2023 | 11:48 AM

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾವಿನಹಳ್ಳಿಯಲ್ಲಿ ಚಿರತೆ ದಾಳಿಗೆ ಹಸು ಬಲಿಯಾಗಿದ್ದು, ಮೂರು ಹಸುಗಳು ಗಂಭಿರವಾಗಿ ಗಾಯಗೊಂಡಿವೆ. ಹಾಡು ಹಗಲಿನಲ್ಲಿಯೇ ಚಿರತೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಭೀತಿ ಆವರಿಸಿದೆ. ಇನ್ನೊಂದೆಡೆ, ತುಮಕೂರಿನ ಮುಳಬಾಗಿಲಿನಲ್ಲಿ ಚಿರತೆ ದಾಳಿಗೆ ಕರುವೊಂದು ಬಲಿಯಾಗಿದೆ.

ಹಾಸನದಲ್ಲಿ ಚಿರತೆ ದಾಳಿಗೆ ಹಸು ಬಲಿ, ಮೂರು ಹಸುಗಳಿಗೆ ಗಂಭೀರ ಗಾಯ, ಕೋಲಾರದಲ್ಲಿ ಕರು ತಿಂದ ಚಿರತೆ!
ಹಾಸನದಲ್ಲಿ ಚಿರತೆ ದಾಳಿಗೆ ಗಾಯಗೊಂಡ ಹಸು
Follow us on

ಹಾಸನ, ಡಿ.7: ನಾಲ್ಕು ಹಸುಗಳ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾವಿನಹಳ್ಳಿಯಲ್ಲಿ ನಡೆದಿದೆ. ಚಿರತೆ ದಾಳಿಯಿಂದ ಒಂದು ಹಸು ಸಾವನ್ನಪ್ಪಿದ್ದು, ಮೂರು ಹಸುಗಲು ಗಂಭೀರವಾಗಿ ಗಾಯಗೊಂಡಿವೆ.

ಗ್ರಾಮದಲ್ಲಿ ಒಂದೇ ವಾರದಲ್ಲಿ ಆರು ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆದಿದೆ. ಇದೀಗ ಹಾಡು ಹಗಲಿನಲ್ಲಿಯೇ ಚಿರತೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದ್ದು, ಚಿರತೆಯನ್ನು ಸೆರೆ ಹಿಡಿದು ಗ್ರಾಮಕ್ಕೆ ತಂದು ಬಿಟ್ಟಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಹಾಸನ: ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಬಲಿ

ಗ್ರಾಮಕ್ಕೆ ಎಸಿಎಫ್​​, ಆರ್​​​ಎಫ್ಫ್​ಒ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಚಿರತೆ ಸೆರೆಗಾಗಿ ಬೋನಿಟ್ಟರೂ ಪ್ರಯೋಜನವಾಗುತ್ತಿಲ್ಲ. ಕೂಡಲೇ ಚಿರತೆ ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬೈಪಲ್ಲಿ ಗ್ರಾಮದಲ್ಲಿ ಕರುವನ್ನು ತಿಂದಿ ಚಿರತೆ

ಕೋಲಾರ: ಚಿರತೆಯೊಂದು ಕರುವಿನ ಮೇಲೆ ದಾಳಿ ನಡೆಸಿ ತಿಂದು ಹಾಕಿದ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೈಪಲ್ಲಿ ಗ್ರಾಮದಲ್ಲಿ ನಡೆದಿದೆ. ಕಳೆದ ಎರಡು ತಿಂಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಜನರು ಭೀತಿಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಕಳೆದ ರಾತ್ರಿ ಗ್ರಾಮದ ಬಳಿ ಚಿರತೆ ಕರುವನ್ನು ಕೊಂದು ತಿಂದು ಮುಗಿಸಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬೋನ್​ಗಳನ್ನಿಟ್ಟು ಚಿರತೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಅರಣ್ಯ ಸಿಬ್ಬಂದಿ ಕಣ್ಣು ತಪ್ಪಿಸಿ ಓಡಾಡುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ