ಚಿಕಿತ್ಸೆಗೆ ಬಂದ ವೃದ್ಧಗೆ ಮೆಹಂದಿ ಕೋನ್‌ ʼಔಷಧಿʼ: ಸ್ಪಷ್ಟನೆ ನೀಡಿದ ಹಾಸನ ವೈದ್ಯಾಧಿಕಾರಿ

ಕಾಲಿನ ಮೂಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ವೃದ್ಧರೊಬ್ಬರಿಗೆ ಹಾಸನ ಜಿಲ್ಲಾಸ್ಪತ್ರೆ ನರ್ಸ್​ ಮೆಹಂದಿ ಕೋನ್‌ ಔಷಧಿ ಬರೆದುಕೊಟ್ಟಿದ್ದಾರೆ. ಅಚ್ಚರಿ ಎನ್ನಿಸಿದರೂ ಸತ್ಯ. ಮೆಹಂದಿ ಕೋನ್‌ ಬರೆದುಕೊಟ್ಟಿರುವ ಔಷಧಿ ಚೀಟಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಇದರ ಬೆನ್ನಲ್ಲೇ ಈ ಬಗ್ಗೆ ಟಿವಿ9, ಹಾಸನ ವೈದ್ಯಾಧಿಕಾರಿಯನ್ನು ಸಂಪರ್ಕಿಸಿದ್ದು, ಮೆಹಂದಿ ಕೋನ್‌ ತರಲು ಹೇಳಿದ್ದು, ನಿಜ ಎಂದು ಒಪ್ಪಿಕೊಂಡಿದ್ದಾರೆ. ಹಾಗೇ ಅದರ ಬಳಕೆಯ ಮಹತ್ವವನ್ನೂ ಸಹ ತಿಳಿಸಿದ್ದಾರೆ.

ಚಿಕಿತ್ಸೆಗೆ ಬಂದ ವೃದ್ಧಗೆ ಮೆಹಂದಿ ಕೋನ್‌ ʼಔಷಧಿʼ: ಸ್ಪಷ್ಟನೆ ನೀಡಿದ ಹಾಸನ ವೈದ್ಯಾಧಿಕಾರಿ
Edited By:

Updated on: Jun 25, 2024 | 10:14 PM

ಹಾಸನ, (ಜೂನ್ 25): ಕಾಲು ಮೂಳೆ ಚಿಕಿತ್ಸೆಗೆ ಬಂದರೆ ಹಾಸನ ಜಿಲ್ಲಾಸ್ಪತ್ರೆ ವೈದ್ಯರೊಬ್ಬರು ಔಷಧಿ ಚೀಟಿಯಲ್ಲಿ ಮೆಹಂದಿ ಕೋನ್ (mehndi cone) ಎಂದು ಬರೆದುಕೊಟ್ಟಿರುವ ಘಟನೆ ನಡೆದಿದೆ. ಕಾಲು ಮುರಿದುಕೊಂಡಿದ್ದ  ವಯೋವೃದ್ಧರೊಬ್ಬರು ಬ್ಯಾಂಡೇಜು ಹಾಕಿಸಿಕೊಂಡು ಹೋಗಲು ಹಾಸನದ ಚಾಮರಾಜೇಂದ್ರ ಜಿಲ್ಲಾ ಆಸ್ಪತ್ರೆಗೆ ಬಂದಿದ್ದರು. ಅವರನ್ನು ಪರಿಶೀಲಿಸಿದ ಆಸ್ಪತ್ರೆಯ ದಾದಿಯೊಬ್ಬರು, ಆರು ಇಂಚಿನ ಕ್ರೇಪ್‌ ಬ್ಯಾಂಡೇಜ್‌ ಎರಡು ಮತ್ತು ಒಂದು ಮೆಹಂದಿ ಕೋನ್‌ ತೆಗೆದುಕೊಂಡ ಬರುವಂತೆ ಚೀಟಿ ಬರೆದು ಕೊಟ್ಟಿದ್ದಾರೆ. ಔಷದಿ ,ಮಾತ್ರೆ ಬದಲಾಗಿ ಔಷಧಿ ಚೀಟಿಯಲ್ಲಿ ಮೆಹಂದಿ ಕೋನ್ ಎಂದು ಬರೆದ ಫೋಟೋ ವೈರಲ್ ಆಗಿದೆ. ಇನ್ನು ಈ ಔಷಧಿ ಚೀಟಿ ಬಗ್ಗೆ ಟಿವಿ9ಗೆ ಸ್ಪಷ್ಟನೆ ನೀಡಿರುವ ಹಾಸನ ಹಿಮ್ಸ್ ‌ಆಸ್ಪತ್ರೆ ವೈದ್ಯಾಧಿಕಾರಿಗಳು, ವೆರಿಕೋಸ್ ವೇನ್ಸ್ ಶಸ್ತ್ರಚಿಕಿತ್ಸೆಗೆ ಸಹಾಯಕವಾಗುವುದಕ್ಕೆ ಮೆಹಂದಿ ಕೋನ್ ಬಳಸಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ವೆರಿಕೋಸ್ ವೇನ್ಸ್ ಶಸ್ತ್ರಚಿಕಿತ್ಸೆಗೆ ಸಹಾಯಕವಾಗೋದಕ್ಕೆ ಮೆಹಂದಿ ಕೋನ್ ಬಳಸಲಾಗಿದೆ. ಪೆನ್‌ನಿಂದ ಮಾರ್ಕ್ ಮಾಡಿದರೆ ಗುರುತು ಅಳಿಸಿ ಹೋಗೋ ಸಾಧ್ಯತೆ ಇದೆ. ಸ್ಪಿರಿಟ್ ಹಾಕಿ ತೊಳೆದರೆ ಪೆನ್ನಿನ ಮಾರ್ಕ್ ಅಳಿಸಿ ಹೋಗುತ್ತೆ. ಈ ಕಾರಣಕ್ಕಾಗಿ ಶಸ್ತ್ರಚಿಕಿತ್ಸೆ ಸಂದರ್ಭ ಮೆಹಂದಿಯಿಂದ ಗುರುತು ಹಾಕಿಕೊಳ್ಳಲಾಗುತ್ತೆ. ಮೆಹಂದಿಯಿಂದ ಗುರುತು ಮಾಡಿದ್ರೆ ಮೂರ್ನಾಲ್ಕು ದಿನ ಉಳಿಯುತ್ತೆ. ಆದ್ದರಿಂದ ರೋಗಿಗೆ ಮೆಹಂದಿ ಕೋನ್ ತರುವಂತೆ ಸೂಚಿಸಿದ್ದು, ಕಾಲಿನ ಗಂಟುಗಳ ಗುರುತಿಸಿ ಶಸ್ತ್ರಚಿಕಿತ್ಸೆ ಮಾಡಲು ಮೆಹಂದಿ ಬಳಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಮೆಹಂದಿ ಕೋನ್​ ಬರೆದುಕೊಟ್ಟಿರುವ ಔಷಧಿ ಚೀಟಿಯ ವೈರಲ್ ಆಗುತ್ತಿರುವುದಕ್ಕೆ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Viral News: ನರ್ಸ್​​ ಜೊತೆಗೆ ಲೈಂಗಿಕ ಸಂಭೋಗ ಮಾಡುತ್ತಿರುವಾಗಲೇ ಸಾವನ್ನಪ್ಪಿದ ರೋಗಿ

ಹಾಸನ ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ರೋಗಿಗೆ ಮೆಹಂದಿ ಕೋನ್ ತರುವಂತೆ ಪ್ರಿಸ್ಕ್ರಿಪ್ಷನ್ ಚೀಟಿ ಬರೆದುಕೊಟ್ಟಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮೆಹಂದಿ ಕೋನ್ ನಿಂದ ಯಾವ ಚಿಕಿತ್ಸೆ ನೀಡುತ್ತಾರೆ ಎಂಬ ಪ್ರಶ್ನೆ ಜನರಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ, ಮೂಳೆ ಮುರಿತದ ಶಸ್ತ್ರಚಿಕಿತ್ಸೆಗೆ ಹಾಸನದ ವೈದ್ಯರು ಮೆಹಂದಿ ಕೋನ್ ಅನ್ನು ಔಷಧಿಯಾಗಿ ಬಳಕೆ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.

ಹಿಮ್ಸ್ ನ ಸರ್ಜರಿ ವಿಭಾಗದ ವೈದ್ಯರು ಪ್ರಿನ್ಕ್ರಿಪ್ಷನ್ ಚೀಟಿಯಲ್ಲಿ ಒಂದು ಮೆಹಂದಿ ಕೋನ್ ಹಾಗೂ ಎರಡು ಕ್ರೇಪ್ ಬ್ಯಾಂಡೇಜ್ ತರುವಂತೆ ಬರೆದುಕೊಡಲಾಗಿತ್ತು. ಕಾಲು ಮೂಳೆ ಮುರಿದು ಬ್ಯಾಂಡೇಜ್ ಹಾಕಿಕೊಂಡಿದ್ದ ರೋಗಿ ಅದನ್ನು ಹುಡುಕಿಕೊಂಡು ಮೆಡಿಕಲ್ ಶಾಪ್, ಬ್ಯಾಂಗಲ್ ಸ್ಟೋರ್ ಅಲೆಯುತ್ತಿದ್ದಾಗ ಸಾಮಾಜಿಕ ಹೋರಾಟಗಾರ್ತಿ ಸುನೀತಾ ಹೆಬ್ಬಾರ್ ಅವರಿಗೆ ದೊರಕಿದ್ದರಿಂದ ಅವರು ಆ ಚೀಟಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಆಸ್ಪತ್ರೆ ಕಾರ್ಯವೈಖರಿ ಬಗ್ಗೆ ಬೇಸರವನ್ನೂ ಹೊರ ಹಾಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:11 pm, Tue, 25 June 24

Manjunath KB
Follow Us