ಪ್ರಸಿದ್ಧ ಹಾಸನಾಂಬೆ ಉತ್ಸವದಲ್ಲೂ ಅಕ್ರಮ: ಗೋಲ್ಮಾಲ್ ಬಗ್ಗೆ ಲೋಕಾಯುಕ್ತ ತನಿಖೆ

ಹಾಸನಾಂಬೆ ಉತ್ಸವದ ವೇಳೆ ನಡೆದ ವಿದ್ಯುತ್ ದೀಪಾಲಂಕಾರ ಟೆಂಡರ್‌ನಲ್ಲಿ ಲಕ್ಷಾಂತರ ರೂ. ಅಕ್ರಮ ಆರೋಪ ಕೇಳಿಬಂದಿದೆ. RTI ಕಾರ್ಯಕರ್ತ ದೂರಿನನ್ವಯ ಲೋಕಾಯುಕ್ತ ತನಿಖೆ ಆರಂಭಿಸಿದ್ದು, ಹಾಸನದಲ್ಲಿ ದೂರುದಾರರು ಹಾಗೂ ಪಾಲಿಕೆ ಇಂಜಿನಿಯರ್‌ಗಳನ್ನು ವಿಚಾರಣೆ ನಡೆಸಲಾಗಿದೆ. 15 ಲಕ್ಷಕ್ಕೂ ಅಧಿಕ ಹಣ ದುರುಪಯೋಗ ಆರೋಪ ಕೇಳಿಬಂದಿದೆ.

ಪ್ರಸಿದ್ಧ ಹಾಸನಾಂಬೆ ಉತ್ಸವದಲ್ಲೂ ಅಕ್ರಮ: ಗೋಲ್ಮಾಲ್ ಬಗ್ಗೆ ಲೋಕಾಯುಕ್ತ ತನಿಖೆ
ಹಾಸನಾಂಬೆ
Image Credit source: thehansindia
Edited By:

Updated on: Feb 20, 2026 | 3:24 PM

ಹಾಸನ, ಫೆಬ್ರವರಿ 20: ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಶಕ್ತಿದೇವತೆ ಹಾಸನಾಂಬೆ (Hasanamba). ಕಳೆದ ವರ್ಷ ಲಕ್ಷಾಂತರ ಭಕ್ತರ ದಂಡೇ ಹರಿದುಬಂದಿತ್ತು. ಆ ಮೂಲಕ ಇತಿಹಾಸ ಸೃಷ್ಟಿಯಾಗಿತ್ತು. ಇದೀಗ ಹಾಸನಾಂಬೆ ಉತ್ಸವ ವೇಳೆಯ ವಿದ್ಯುತ್ ದೀಪಾಲಂಕಾರದ ಟೆಂಡರ್​​ನಲ್ಲಿ​ ಗೋಲ್ಮಾಲ್​ ನಡೆದಿದ್ದು, ಲಕ್ಷಾಂತರ ರೂ ಅಕ್ರಮ ಆರೋಪ ಕೇಳಿಬಂದಿದೆ. ಈ ಬಗ್ಗೆ ಆರ್​ಟಿಐ ಕಾರ್ಯಕರ್ತ ಮನು ದೂರು ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಮುಜರಾಯಿ ಇಲಾಖೆಯ ಗ್ರೇಡ್ ಒನ್ ದೇವಾಲಯದಲ್ಲಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಪ್ರತಿ ವರ್ಷ ಒಬ್ಬನೇ ಗುತ್ತಿಗೆದಾರನಿಗೆ ಗುತ್ತಿಗೆ ನೀಡಲಾಗುತ್ತಿದೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ಸರಿಯಾದ ದಾಖಲೆಯನ್ನೇ ನೀಡಿಲ್ಲ. ಭಕ್ತರ ಹಣವನ್ನು ದುಂದು ವೆಚ್ಚ ಮಾಡಲಾಗಿದೆ. ಕೇವಲ ದೀಪಾಲಂಕಾರ ಮಾತ್ರವಲ್ಲ ಎಲ್ಲದರಲ್ಲೂ ಹಣ ದುರ್ಬಳಕೆ ಮಾಡಿರುವ ಬಗ್ಗೆ ಮನು ದೂರು ನೀಡಿದ್ದಾರೆ.

ಲೋಕಾಯುಕ್ತರ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬು

ಸದ್ಯ ಆರ್​ಟಿಐ ಕಾರ್ಯಕರ್ತ ಮನು ದೂರು ಆಧರಿಸಿ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲೇ ಲೋಕಾಯುಕ್ತ ಅಧಿಕಾರಿ ಗಾಯಿತ್ರಿ ಅವರಿಂದ ತನಿಖೆ ನಡೆಸಿದ್ದು, ದೂರುದಾರ ಮನು ಸೇರಿ ಮಹಾನಗರ ಪಾಲಿಕೆ ಇಂಜಿನಿಯರ್ ಸುಜಾತಾ ಹಾಗೂ ನಿವೃತ್ತ ಇಂಜಿನಿಯರ್ ರಂಗಸ್ವಾಮಿ ವಿಚಾರಣೆ ನಡೆಸಿದ್ದಾರೆ. ದೂರುದಾರನ ಸಮ್ಮುಖದಲ್ಲೇ ಸಂಪೂರ್ಣ ಮಾಹಿತಿ ಪಡೆದ ಅಧಿಕಾರಿಗಳು, ಸರಿಯಾದ ದಾಖಲೆ ನೀಡದ ಬಗ್ಗೆ ತನಿಖಾಧಿಕಾರಿ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ಸರಿಯಾದ ದಾಖಲೆ ನೀಡದಿದ್ದರೇ ಇದನ್ನೇ ವರದಿ ಮಾಡಬೇಕಾಗುತ್ತೆ ಎಂದು ವಾರ್ನಿಂಗ್ ನೀಡಿದ್ದು, ಈ ವೇಳೆ ಅಧಿಕಾರಿಗಳ ಪ್ರಶ್ನೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ತಬ್ಬಿಬ್ಬಾದರು.

15 ಲಕ್ಷಕ್ಕೂ ಅಧಿಕ ಮೊತ್ತದ ಅವ್ಯವಹಾರ

ಇನ್ನು ನಿಯಮ ಪಾಲನೆ ಮಾಡದೆ ವಿದ್ಯುತ್ ದೀಪಾಲಂಕಾರ ಗುತ್ತಿಗೆ ನೀಡಲಾಗಿದೆ. ವಿದ್ಯುತ್ ದೀಪಾಲಂಕಾರಕ್ಕೆ‌ಹಲವು ಗುತ್ತಿಗೆದಾರರು ಅರ್ಜಿ ಹಾಕಿದ್ದರೂ ಒಬ್ಬರಿಗೆ ಮಾತ್ರ ಅಧಿಕಾರಿಗಳು ನೆರವು ನೀಡಿದ್ದಾರೆ. ದೀಪಾಲಂಕಾರ ಒಂದರಲ್ಲೇ 15 ಲಕ್ಷಕ್ಕೂ ಅಧಿಕ ಮೊತ್ತದ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಹಾಸನಾಂಬ ಹುಂಡಿಯಲ್ಲಿ ಇಂಡೋನೇಷ್ಯಾ, ಮಾಲ್ಡೀವ್ಸ್, ಅಮೆರಿಕ ಕರೆನ್ಸಿ! ರಾಶಿ ರಾಶಿ ಹಣ

ಹಾಸನಾಂಬೆ ಉತ್ಸವದಲ್ಲಿ ಅನುಭವ ಹೊಂದಿದವರಿಗೆ ಮಾತ್ರ ಆದ್ಯತೆ ಎನ್ನುವ ನಿಯಮ ಸೇರಿಸಿ ಲೈಟಿಂಗ್, ಹೂವಿನ ಅಲಂಕಾರ ಸೇರಿ ಎಲ್ಲಾ ಕೆಲಸಕ್ಕೂ ಒಬ್ಬರಿಗೆ ಗುತ್ತಿಗೆ ನೀಡಲಾಗಿದೆ. ಖರೀದಿ ಮಾಡಿದರು ಅಷ್ಟು ಹಣ ಆಗಲ್ಲ, ಅಷ್ಟೊಂದು ದುಂದು ವೆಚ್ಚ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Manjunath KB
Follow Us