ಹಾಸನಾಂಬೆ ಭಕ್ತರಿಗೆ ಕರೆಂಟ್ ಶಾಕ್! ಕಾರಣ ನಿಗೂಢ? ಇಲ್ಲಿದೆ ಸಂಪೂರ್ಣ ವಿವರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 10, 2023 | 6:58 PM

ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ವಿದ್ಯುತ್ ಶಾಕ್ ತಗುಲಿತು ಎಂಬ ಸುದ್ದಿ ತಿಳಿದ ಕೂಡಲೇ ಫ್ಯೂಸ್ ತೆಗೆಯಲಾಗಿದೆ. ಇದರಿಂದ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಲಾಗಿದೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ. ಹಾಸನಾಂಬೆ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಇಂತಹ ಘಟನೆ ಮೊದಲ ಬಾರಿಗೆ ನಡೆದಿರುವುದು ಸಾಕಷ್ಟು ಅನುಮಾನ ಹಾಗೂ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಹಾಸನಾಂಬೆ ಭಕ್ತರಿಗೆ ಕರೆಂಟ್ ಶಾಕ್! ಕಾರಣ ನಿಗೂಢ? ಇಲ್ಲಿದೆ ಸಂಪೂರ್ಣ ವಿವರ
ಹಾಸನಾಂಬೆ ದೇಗುಲದಲ್ಲಿ ಕರೆಂಟ್​ ಶಾಕ್​
Follow us on

ಹಾಸನ, ನ.10: ಹಾಸನಾಂಬೆ(Hassanambe)ಯ ದರ್ಶನದ ವೇಳೆ ಕರೆಂಟ್ ಶಾಕ್(Current Shock)ಹೊಡೆದಿರುವ ಸುದ್ದಿ ಸಾಕಷ್ಟು ತಲ್ಲಣದ ಜೊತೆಗೆ ಆತಂಕ, ಅನುಮಾನ ಸೃಷ್ಟಿ ಮಾಡಿದೆ. ಹೌದು, ಇಂದು(ನ.10) ಮಧ್ಯಾಹ್ನ ಸಹಸ್ರಾರು ಭಕ್ತರು, ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಇನ್ನು ಈ ಘಟನೆಗೆ ಕಾರಣ ನಿಗೂಢವಾಗಿದ್ದು, ಹಾಸನಾಂಬೆ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಇಂತಹ ಘಟನೆ ಮೊದಲ ಬಾರಿಗೆ ನಡೆದಿರುವುದು ಸಾಕಷ್ಟು ಅನುಮಾನ ಹಾಗೂ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಕರೆಂಟ್ ಶಾಕ್ ಆತಂಕ

ಇನ್ನು ಧರ್ಮದರ್ಶಿ ಸಾಲು, 300 ರೂ. ಮತ್ತು 1 ಸಾವಿರ ರೂಪಾಯಿಯ ಟಿಕೆಟ್ ಸಾಲು ಹಾಗೂ ವಿವಿಐಪಿ ಗೇಟ್ ಸೇರಿದಂತೆ ಎಲ್ಲಾ ಸಾಲುಗಳು ಭರ್ತಿಯಾಗಿದ್ದವು. ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರಿಂದ ದೇವಸ್ಥಾನ ತುಂಬಿ ತುಳುಕುತ್ತಿದ್ದವು. ಈ ನಡುವೆ ಧರ್ಮ ದರ್ಶನ ಸರತಿ ಸಾಲಿನಲ್ಲಿ ಸಾವಿರಾರು ಮಂದಿ ನಿಂತಿದ್ದ ವೇಳೆ ಓರ್ವ ಭಕ್ತರೊಬ್ಬರಿಗೆ ವಿದ್ಯುತ್ ಶಾಕ್ ತಗುಲಿದ ಅನುಭವ ಆಯಿತು ಎನ್ನಲಾಗಿದೆ. ಕೂಡಲೇ ಆ ಮಹಿಳೆಯೊಬ್ಬರು ಕೂಗಿ ಕೊಂಡಿದ್ದಾರೆ. ಇದರಿಂದ ದಿಢೀರ್ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಿಂದ ಹಲವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಹಾಸನದ ಹಾಸನಾಂಬೆ ದೇವಸ್ಥಾನದಲ್ಲಿ ಭಕ್ತರಿಗೆ ವಿದ್ಯುತ್ ಶಾಕ್ , ಆವರಣದಲ್ಲಿ ​ನೂಕುನುಗ್ಗಲು

ಕಾಲ್ತುಳಿತಕ್ಕೆ 17 ಮಂದಿಗೆ ಗಾಯ

ವಿದ್ಯುತ್ ಶಾಕ್ ಸುದ್ದಿ ಕೇಳಿದ ಕೂಡಲೇ ಮಹಿಳೆಯರು, ಮಕ್ಕಳು ಸೇರಿದಂತೆ ಸಾಲಲ್ಲಿ ನಿಂತಿದ್ದ ಭಕ್ತಾಧಿಗಳು ತಮ್ಮವರು ಹಾಗೂ ತಮ್ಮ ಜೊತೆಯಲ್ಲಿದ್ದ ವಸ್ತುಗಳನ್ನೂ ಲೆಕ್ಕಿಸದೆ ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದರು. ಎಲ್ಲೆಡೆ ಬ್ಯಾರಿಕೇಡ್ ಇದ್ದುದರಿಂದ ಯಾರೂ ಸಲೀಸಾಗಿ ಬೇರೆಡೆ ಸಾಗಲು ಆಗಲಿಲ್ಲ. ಈ ವೇಳೆ ನೂಕು ನುಗ್ಗಲು ಉಂಟಾದ ಪರಿಣಾಮ, ಕಾಲ್ತುಳಿತಕ್ಕೆ ಸಿಲುಕಿ 17 ಮಂದಿ ಗಾಯಗೊಂಡಿದ್ದಾರೆ. ಕೂಡಲೇ ಎಲ್ಲರನ್ನೂ ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಈ ಪೈಕಿ ಐದು ಮಂದಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಉಳಿದವರಿಗೆ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಫ್ಯೂಸ್ ತೆಗೆದು ಹೆಚ್ಚಿನ ಅನಾಹುತಕ್ಕೆ ಬ್ರೇಕ್​

ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ವಿದ್ಯುತ್ ಶಾಕ್ ತಗುಲಿತು ಎಂಬ ಸುದ್ದಿ ತಿಳಿದ ಕೂಡಲೇ ಫ್ಯೂಸ್ ತೆಗೆಯಲಾಗಿದೆ. ಇದರಿಂದ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಲಾಗಿದೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ. ಆದರೆ, ಕರೆಂಟ್ ಶಾಕ್ ಸುದ್ದಿ, ಹಾಸನಾಂಬೆ ದೇವಾಲಯದ ಬಳಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು. ಏಕೆಂದರೆ ಕೆಲವರಿಗೆ ಕರೆಂಟ್ ಶಾಕ್
ತಗುಲಿ ಕುಸಿದು ಬಿದ್ದು ಅವಾಂತರ ಸೃಷ್ಟಿಯಾದರೆ, ಒಬ್ಬರ ಮೇಲೆ ಒಬ್ಬರು ಬಿದ್ದ ಮಹಿಳೆಯರು ಎದ್ದೆವೋ, ಬಿದ್ದೆವೋ ಎಂದು ಓಡಲಾರಂಭಿಸಿದರು.

ಇದನ್ನೂ ಓದಿ:ಹಾಸನಾಂಬೆ ದರ್ಶನದ ವೇಳೆ ವಿದ್ಯುತ್ ಪ್ರವಹಿಸಿದ ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ: ಹಾಸನ ಪೊಲೀಸ್ ವರಿಷ್ಠಾಧಿಕಾರಿ

ಅವಾಂತರಕ್ಕೆ ಯಾರು ಕಾರಣ ಎಂಬುದು ನಿಗೂಢ

ಘಟನೆ ವೇಳೆ ಅಲ್ಲೇ ಇದ್ದ ಸ್ಥಳೀಯರು, ಕೆಲವರನ್ನು ಹೊರಗೆಳೆದು ರಕ್ಷಣೆ ಮಾಡಿದರು. ಈ ಅವಾಂತರಕ್ಕೆ ಯಾರು ಕಾರಣ ಎಂಬುದು ನಿಗೂಢವಾಗಿಯೇ ಉಳಿದಿದೆ. ಆದರೂ ಹಾಸನಾಂಬೆ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಇಂತಹ ಘಟನೆ ಮೊದಲ ಬಾರಿಗೆ ನಡೆದಿರುವುದು ಸಾಕಷ್ಟು ಅನುಮಾನ ಹಾಗೂ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಸಚಿವರು ಭೇಟಿ

ಸುದ್ದಿ ತಿಳಿದ ಕೂಡಲೇ ಹಾಸನಕ್ಕೆ ಆಗಮಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವರು, ನಡೆಯ ಬಾರದ ಘಟನೆ ನಡೆದು ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆಸ್ಪತ್ರೆಗೆ ದಾಖಲಾದ ಎಲ್ಲರಿಗೂ ನಮ್ಮ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದಾರೆ. ಈಗಾಗಲೇ ಐವರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಉಳಿದವರೂ ಗುಣಮುಖರಾದ ನಂತರ ಆಸ್ಪತ್ರೆಯಿಂದ ಬಿಡುಗಡೆ ಆಗುವರು ಎಂದು ಹೇಳಿದರು.

ತನಿಖೆ ನಡೆಸಿ ಸತ್ಯಾಸತ್ಯತೆ ಹೊರಗೆ- ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್

ಬಳಿಕ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಮಾತನಾಡಿ, ‘ಯಾರಿಗೂ ದೊಡ್ಡಮಟ್ಟದ ಗಾಯ ಆಗಿಲ್ಲ. ಶೀಘ್ರ ಎಲ್ಲರೂ ಗುಣಮುಖರಾಗಲಿ ಎಂದು ಆಶೀಸಿದರು. ತಳ್ಳಾಟ, ನೂಕು ನುಗ್ಗಲು ಕಾರಣದಿಂದ ಕೆಲವರು ಅಸ್ವಸ್ಥರಾಗಿದ್ದಾರೆ ಎಂದು ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ತಿಳಿಸಿದರು. ಘಟನೆಗೆ ಪ್ರಮುಖ ಪ್ರಮುಖ ಕಾರಣ ಏನೆಂದು ತಿಳಿಯಬೇಕಿದೆ. ಇಂಥ ಘಟನೆ ಆಗಬಾರದು, ಮರುಕಳಿಸಬಾರದು. ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಯಲಾಗುವುದು ಎಂದು ಹೇಳಿದರು.ಯಾರೂ ಕೂಡ, ಭಕ್ತರಿಗೆ ತೊಂದರೆ ಕೊಡಬಾರದು ಎಂದು ವಿನಂತಿ ಮಾಡುತ್ತಿದ್ದೇವೆ. ಶಕ್ತಿ ಯೋಜನೆಯಿಂದಾಗಿ ದೊಡ್ಡಮಟ್ಟದ ಸಂಖ್ಯೆಯಲ್ಲಿ ಕ್ಯೂ, ಜನಸಂಖ್ಯೆ ಜಾಸ್ತಿ ಇದೆ, ಆದಷ್ಟು ಬೇಗ ದರ್ಶನ ಮಾಡಿ ಹೊಗಲಿ ಎಂದು ಮನವಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ