JC Madhuswamy: ಹಿಂದೂಪರ ಸಂಘಟನೆಗಳ ಅಭಿಯಾನಕ್ಕೆ ಪರೋಕ್ಷವಾಗಿ ಕುಟುಕಿದ ಸಚಿವ ಮಾಧುಸ್ವಾಮಿ

| Updated By: ಸಾಧು ಶ್ರೀನಾಥ್​

Updated on: Apr 08, 2022 | 5:50 PM

ಸರ್ಕಾರವನ್ನ RSS ಕಂಟ್ರೋಲ್ ಮಾಡುವಂತಹ ಸ್ಥಿತಿ ಬಂದಿಲ್ಲ. ರಾಜ್ಯದಲ್ಲಿ ನಡೆಯುತ್ತಿರೋ ವಿವಾದಗಳ ಹಿಂದೆ ಆರ್.ಎಸ್. ಎಸ್ ಇಲ್ಲ. ಹಿಜಾಬ್-ಹಲಾಲ್ ಇರಲಿ ಯಾವುದರಲ್ಲೂ ಆರ್.ಎಸ್.ಎಸ್ ಭಾಗಿಯಾಗಿಲ್ಲ. ಕೆಲ ಹಿಂದೂ ಸಂಘಟನೆಗಳು ಇದರ ಹಿಂದೆ ಇವೆ. ಅದನ್ನು ನಾವು ಇಲ್ಲಾ ಅನ್ನಲ್ಲ ಎಂದ ಕಾನೂನು, ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ.

JC Madhuswamy: ಹಿಂದೂಪರ ಸಂಘಟನೆಗಳ ಅಭಿಯಾನಕ್ಕೆ ಪರೋಕ್ಷವಾಗಿ ಕುಟುಕಿದ ಸಚಿವ ಮಾಧುಸ್ವಾಮಿ
ಹಿಂದೂಪರ ಸಂಘಟನೆಗಳ ಅಭಿಯಾನಕ್ಕೆ ಪರೋಕ್ಷವಾಗಿ ಕುಟುಕಿದ ಸಚಿವ ಮಾಧುಸ್ವಾಮಿ
Follow us on

ಹಾಸನ: ರಾಜ್ಯದಲ್ಲಿ ಹಿಂದೂ-ಮುಸ್ಲಿಂ ವಿಚಾರವಾಗಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿರುವ ಕಾನೂನು, ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಅವರು ನನ್ನ ದೃಷ್ಟಿಯಲ್ಲಿ ಇದೆಲ್ಲಾ ಅನಗತ್ಯ ಎಂದು ಹಿಂದೂಪರ ಸಂಘಟನೆಗಳ ಅಭಿಯಾನಕ್ಕೆ ಪರೋಕ್ಷವಾಗಿ ಕುಟುಕಿದ್ದಾರೆ. ಒಂದು ಕಡೆ ಇದ್ದಾಗ ಹಾಗೆಲ್ಲಾ ಮಾಡೋಕೆ ಆಗುತ್ತಾ? ಇದೆಲ್ಲ ತಪ್ಪು. ನಾವೆಲ್ಲಾ ಮನುಷ್ಯರು, ಒಂದೇ ದೇಶದಲ್ಲಿ ಬದುಕುತ್ತಿದ್ದೇವೆ. ಇದೆಲ್ಲ ವಿವಾದ ಮಾಡೋ ವಿವರಗಳಲ್ಲ. ಆದರೆ ಏನೋ ನಡೆಯುತ್ತಿದೆ, ನಾವು ಏನು ಹೇಳೋಕಾಗುತ್ತೆ ಹೇಳಿ. ಹಿಂದೂ ಪರ ಸಂಘಟನೆಗಳ ಮಾವು, ವ್ಯಾಪಾರ ಬ್ಯಾನ್, ಕ್ಯಾಬ್ ಬ್ಯಾನ್ ವಿವಾದಗಳ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು. ಖಾಸಗಿ ಭೇಟಿಗಾಗಿ ಹಾಸನಕ್ಕೆ ಆಗಮಿಸಿದ್ದ ವೇಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು (Minister JC Madhuswamy).

ರಾಜ್ಯದಲ್ಲಿ ನಡೆಯುತ್ತಿರೋ ವಿವಾದಗಳ ಹಿಂದೆ ಆರ್.ಎಸ್. ಎಸ್ ಇಲ್ಲ:
ಸರ್ಕಾರವನ್ನ RSS ಕಂಟ್ರೋಲ್ ಮಾಡುವಂತಹ ಸ್ಥಿತಿ ಬಂದಿಲ್ಲ. ರಾಜ್ಯದಲ್ಲಿ ನಡೆಯುತ್ತಿರೋ ವಿವಾದಗಳ ಹಿಂದೆ ಆರ್.ಎಸ್. ಎಸ್ ಇಲ್ಲ. ಹಿಜಾಬ್-ಹಲಾಲ್ ಇರಲಿ ಯಾವುದರಲ್ಲೂ ಆರ್.ಎಸ್.ಎಸ್ ಭಾಗಿಯಾಗಿಲ್ಲ. ಕೆಲ ಹಿಂದೂ ಸಂಘಟನೆಗಳು ಇದರ ಹಿಂದೆ ಇವೆ. ಅದನ್ನು ನಾವು ಇಲ್ಲಾ ಅನ್ನಲ್ಲ. ಆದರೆ ಆರ್.ಎಸ್.ಎಸ್ ಎಲ್ಲಿಯೂ ಈ ಬಗ್ಗೆ ಬಾಯ್ಬಿಟ್ಟಿಲ್ಲ. ಮುತಾಲಿಕ್ ಮಾತಾಡಿದರೆ, ಭಜರಂಗದಳದವರು ಮಾತಾಡಿದರೆ – ಆರ್.ಎಸ್.ಎಸ್ ಅನ್ನೋಕೆ ಆಗುತ್ತಾ? ಎಂದೂ ಸಚಿವ ಮಾಧುಸ್ವಾಮಿ ಪ್ರಶ್ನಿಸಿದರು.

ಇನ್ನು ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು ಕೆಲವರಿಗೆ ಕೊಕ್ ಕೊಟ್ಟು, ಹೊಸಬರಿಗೆ ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ಒಳ್ಳೆಯದಾಗಲಿದೆ. ಹೊಸಬರಿಗೆ ಅವಕಾಶ ನೀಡೋ ಬಗ್ಗೆ ಚರ್ಚೆ ಆಗಿದೆ ಅನ್ನುವ ಪ್ರಶ್ನೆಗೆ ಸಚಿವರು ಈ ಉತ್ತರ ಕೊಟ್ಟರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಏನೂ ಮಾಹಿತಿ ಇಲ್ಲ. ಹೊಸಪೇಟೆ ಕಾರ್ಯಕಾರಿ ಸಭೆಯಲ್ಲಿ ಇದ್ಯಾವುದೂ ಚರ್ಚೆ ಆಗಲ್ಲ. ನಿನ್ನೆಯ ಡೆಲ್ಲಿ ಸಭೆಯಲ್ಲೂ ಇದ್ಯಾವುವೂ ಚರ್ಚೆ ಆಗಿಲ್ಲ. ನೀವು ಕೇಳಿದಾಗ ನಾವು ಇಲ್ಲಾ ಅನ್ನೋಕೆ ಆಗಲ್ಲ, ಹಾಗಾಗಿ ಇಲ್ಲಾ ಅಂತೀವಿ ಅಷ್ಟೆ ಎಂದೂ ಸಚಿವ ಮಾಧುಸ್ವಾಮಿ ಮಾರ್ಮಿಕವಾಗಿ ತಿಳಿಸಿದರು.

ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಸರ್ವಪಕ್ಷ ಸಭೆ ನಡೆದಿತ್ತು. ಹಾಗಾಗಿ ಅನುಮತಿ ಪಡೆಯಲು ಹೋಗೋಣ ಎಂದಿದ್ದರು. ನಾನು ಬ್ಯುಸಿ ಇದ್ದೆ, ಸಿಎಂ ಹೋಗಿ ಬಂದಿದಾರೆ ಅಷ್ಟೆ. ಒಂದೆರಡು ನೀರಾವರಿ ಯೋಜನೆ ಅನುಮತಿಗೆ ಬಾಕಿ ಇದೆ. ಹಾಗಾಗಿ ಕೇಂದ್ರ ಸಚಿವರ ಭೇಟಿಗೆ ಹೋಗಿದ್ದರು, ಭೇಟಿ ಮಾಡಿದ್ದಾರೆ. ಆದರೆ ಸೀರಿಯಸ್ ಮೀಟಿಂಗ್ ಆಗಲಿಲ್ಲ ಅನ್ನೋದು ನನಗಿರೋ ಮಾಹಿತಿ ಎಂದು ಸಚಿವ ಮಾಧುಸ್ವಾಮಿ ಕ್ಲುಪ್ತವಾಗಿ ಹೇಳಿದರು.

ಮೇಕೆದಾಟು ವಿಚಾರಕ್ಕೆ ತಮಿಳುನಾಡು ಬಿಜೆಪಿ ವಿರೋಧ ವಿಚಾರ ಪ್ರಸ್ತಾಪಿಸಿ, ಪಕ್ಷವಾಗಿ ಅವರ ರಾಜ್ಯದ ಹಿತದಿಂದ ಅವರು ಹಾಗೆ ಹೇಳ್ತಾರೆ. ಅವರಿಗೂ ಮೇಕೆದಾಟು ಯೋಜನೆಗೂ ಸಂಬಂಧವೇ ಇಲ್ಲಾ. ಇದು ನಮ್ಮ ರಾಜ್ಯದಲ್ಲಿ ಇದೆ, ನಮ್ಮ‌ಉಳಿಕೆ ನೀರಲ್ಲಿ ಯೋಜನೆ ಆಗುತ್ತೆ. ನೀರಾವರಿಗೆ ಈ ಯೋಜನೆ ಬಳಸಲ್ಲ, ಕೇವಲ ಕುಡಿಯೋ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಸುತ್ತೇವೆ. ಅವರಿಗೆ ನೀರು ಕೊರತೆ ಬಂದರೆ ನೀರು ಕೊಡಲು ಸಹಾಯ ಆಗುತ್ತೆ ಎಂದು ಅವರಿಗೆ ಮನವರಿಕೆ ಮಾಡಿದ್ದೇವೆ. ಅದರೆ ಅವರಿಗೆ ಮನವರಿಕೆ ಆದಂತೆ ಕಾಣುತ್ತಿಲ್ಲ! ತಮಿಳುನಾಡಿನಲ್ಲಿ ರಾಜಕೀಯ ಮಾಡಬೇಕಾದರೆ ಈ ವಿಚಾರ ಬೇಕು, ಹಾಗಾಗಿ ಇದನ್ನ ಇಟ್ಟುಕೊಂಡಿದಾರೆ. ಆದರೆ ಮೇಕೆದಾಟು ಯೋಜನೆಯಿಂದ ಅವರಿಗೆ ಯಾವುದೇ ಸಮಸ್ಯೆ ಇಲ್ಲಾ. ಬೆಂಗಳೂರಿಗೆ ಹೆಚ್ಚುವರಿ ನೀರು ಬೇಕು. ಹಾಗಾಗಿ ನಾವು ಕುಡಿಯೊ ನೀರಿಗೆ ಯೋಜನೆ ಮಾಡಲೇ ಬೇಕು. ಅವರು ನಮ್ಮ ಯೋಜನೆಗೆ ತಕರಾರು ಮಾಡಿದರು. ಹಾಗಾಗಿ ನಾವು ಅವರ ಗುಂಡ್ಲಾ ಯೋಜನೆಗೆ ತಕರಾರು ಮಾಡಿದಿವಿ. ಅವರು ಹೀಗೆಯೇ ಮುಂದುವರಿದರೆ ಅವರ ಎಲ್ಲಾ ಯೋಜನೆಗೂ ತಾವು ತಕರಾರು ಹಾಕಬೇಕಾಗುತ್ತೆ ಎಂದೂ ಸಚಿವ ಮಾಧುಸ್ವಾಮಿ ಅವರು ತಮಿಳುನಾಡಿಗೆ ವಾರ್ನಿಂಗ್ ರವಾನಿಸಿದರು.

Published On - 5:24 pm, Fri, 8 April 22