Hasan News: ಪಿತ್ರಾರ್ಜಿತ ಆಸ್ತಿಗಾಗಿ ದಾಯಾದಿಗಳ ನಡುವೆ ಗಲಾಟೆ: ಸಿನಿಮೀಯ ರೀತಿಯಲ್ಲಿ ಮಚ್ಚಿನಿಂದ ಹಲ್ಲೆಗೈದ ಆರೋಪ

ಪಿತ್ರಾರ್ಜಿತ ಆಸ್ತಿಗಾಗಿ ದಾಯಾದಿಗಳ ನಡುವೆ ಗಲಾಟೆ ನಡೆದಿದ್ದು, ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಹಲ್ಲೆ ಆರೋಪ ಮಾಡಲಾಗಿದೆ.

Hasan News: ಪಿತ್ರಾರ್ಜಿತ ಆಸ್ತಿಗಾಗಿ ದಾಯಾದಿಗಳ ನಡುವೆ ಗಲಾಟೆ: ಸಿನಿಮೀಯ ರೀತಿಯಲ್ಲಿ ಮಚ್ಚಿನಿಂದ ಹಲ್ಲೆಗೈದ ಆರೋಪ
ದಾಯಾದಿಗಳ ಗಲಾಟೆ ಕೈಯಲ್ಲಿ ಮಚ್ಚು ಹಿಡಿದಿರುವುದು

Updated on: May 24, 2023 | 8:40 PM

ಹಾಸನ: ಪಿತ್ರಾರ್ಜಿತ ಆಸ್ತಿ (property) ಗಾಗಿ ದಾಯಾದಿಗಳ ನಡುವೆ ಗಲಾಟೆ ನಡೆದಿದ್ದು, ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಹಲ್ಲೆ ಆರೋಪ ಮಾಡಲಾಗಿದೆ. ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಮಲ್ಲೇಶಗೌಡ, ಶಶಿಕುಮಾರ, ಗೌರೀಶ್, ಸೊಸೆ ತೀರ್ಥ ಮೇಲೆ ಹಲ್ಲೆ ಮಾಡಿದ್ದು, ಗಾಯಾಳುಗಳನ್ನು ಬೇಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸರ್ವೆ ನಂಬರ್​ 211/1ರಲ್ಲಿರುವ 14 ಗುಂಟೆ ಜಮೀನು ದಾಯಾದಿಗಳ ಮಧ್ಯೆ ಕಲಹ ಕಾರಣವಾಗಿದೆ.

30 ವರ್ಷಗಳಿಂದ ಮಲ್ಲೇಶ್‌ಗೌಡ ಕುಟುಂಬ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಮಳೆ ಬಿದ್ದಿದರಿಂದ ಮಲ್ಲೇಶ್‌ಗೌಡ ಉಳುಮೆ ಮಾಡುತ್ತಿದ್ದು, ಇದೇ ವೇಳೆ ಸ್ಥಳಕ್ಕೆ ಬಂದಿದ್ದ ಮಲ್ಲೇಶ್‌ಗೌಡನ ಸಹೋದರನ ಮಕ್ಕಳು ಈ ಜಮೀನು ನಮ್ಮ ಕುಟುಂಬಕ್ಕೆ ಸೇರಿದ್ದು ಎಂದು ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಮಧುಕುಮಾರ್, ಚಂದ್ರೇಗೌಡ, ಕುಮಾರ್, ಜವರೇಗೌಡ, ರುದ್ರೇಶ್​ ಮತ್ತು ಲೋಕೇಶ್​ ವಿರುದ್ಧ ಹಲ್ಲೆ ಆರೋಪದಡಿ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲು ಮಾಡಲಾಗಿದೆ.

ಪೊಲೀಸರು ವಶಕ್ಕೆ ಪಡೆಯಲು ತೆರಳಿದ್ದ ವೇಳೆ 4ನೇ ಮಹಡಿಯಿಂದ ಜಿಗಿದು ವ್ಯಕ್ತಿ ಸಾವು

ಬೆಂಗಳೂರು: ಪೊಲೀಸರು ವಶಕ್ಕೆ ಪಡೆಯಲು ತೆರಳಿದ್ದ ವೇಳೆ 4ನೇ ಮಹಡಿಯಿಂದ ಜಿಗಿದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೊಮ್ಮನಹಳ್ಳಿಯ ಬೇಗೂರು ರಸ್ತೆಯಲ್ಲಿ ನಡೆದಿದೆ. ಮೊಹಮ್ಮದ್​ ಹುಸೇನ್(31) ಮೃತ ವ್ಯಕ್ತಿ. ಪ್ರಕರಣ ಸಂಬಂಧ ವಶಕ್ಕೆ ಪಡೆಯಲು ಪೊಲೀಸರು ತೆರಳಿದ್ದರು. 4ನೇ ಮಹಡಿಯಿಂದ ಬೆತ್ತಲೆಯಾಗಿ ಬಿದ್ದು ಮೃತಪಟ್ಟಿದ್ದು,​ ವಶಕ್ಕೆ ಪಡೆಯಲು ಬಂದಿದ್ದ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ-7 ಜನರಿಗೆ ಸಣ್ಣಪುಟ್ಟ ಗಾಯ

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ ಹೊಡೆದ ಪರಿಣಾಮ 7 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವಂತ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ‌ಮುಳ್ಳೂರ ಗುಡ್ಡದಲ್ಲಿ ನಡೆದಿದೆ. ಬಾಗಲಕೋಟ ಜಿಲ್ಲೆಯ ಜಮಖಂಡಿ‌ ಡಿಪೋಗೆ ಸರ್ಕಾರಿ ಬಸ್ ಸೇರಿದ್ದು, 30ಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ರಾಮದುರ್ಗ ‌ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಧಾರವಾಡದಿಂದ ಜಮಖಂಡಿಯತ್ತ ಬಸ್ ಹೊರಟಿದ್ದಾಗ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ರಾಮದುರ್ಗ ‌ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹಣ ವಾಪಾಸ್ ಕೇಳಿದ್ದಕ್ಕೆ ರಾಡ್​ನಿಂದ ಹಲ್ಲೆ

ಬೆಂಗಳೂರು: ಹಣ ವಾಪಾಸ್​ ಕೇಳಿದ್ದ ವೃದ್ದೆ ಮೇಲೆ ಎದುರು ಮನೆಯ ನಿವಾಸಿಯಿಂದ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆಯೊಂದು ನಗರದ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಮೇ 21 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 70 ವರ್ಷದ ವೃದ್ದೆ ಗಿರಿಯಮ್ಮ ಹಲ್ಲೆಗೊಳಗಾದವರು. ಎದುರು ಮನೆಯ ನಿವಾಸಿ ಶಾಂತಮ್ಮಳಿಂದ ಮಾರಣಾಂತಿಕ ಹಲ್ಲೆ ಆರೋಪ ಮಾಡಲಾಗಿದೆ. ಹಣ ಕೊಡುವ ನೆಪದಲ್ಲಿ ಬಂದು ರಾಡ್​ನಿಂದ ವೃದ್ದೆ ಗಿರಿಯಮ್ಮ ತಲೆಗೆ ಹೊಡೆದಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: Belagavi News: ಮನೆ ಮಹಡಿ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಸಾವು; ಮುಗ್ಧ ಬಾಲಕಿ ಸಾವಿಗೆ ಯಾರು ಹೊಣೆ?

ವೃದ್ದೆ ದೂರು ನೀಡಿದ್ದರು ಪೊಲೀಸರು ಯಾವುದೇ ಕ್ರಮ‌ ಕೈಗೊಂಡಿಲ್ಲ. ಕೊಲೆ ಯತ್ನ ಮಾಡಿದ್ದರು ಕ್ರಮಕ್ಕೆ ಪೊಲೀಸರು ಮುಂದಾಗಿಲ್ಲ ಸ್ಥಳೀಯರಿಂದ ನಂದಿನಿ ಲೇಔಟ್ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ನರೇಗಾ ಕೆಲಸ ಮಾಡೋ ವೇಳೆ ಕಾರ್ಮಿಕ ಹೃದಯಾಘಾತದಿಂದ ಸಾವು

ರಾಯಚೂರು: ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮದ ಬಳಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಸಿದ್ದಣ್ಣ(40) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕರಿಗುಡ್ಡ ಕೆರೆಯ ಹೂಳೆತ್ತುವ ಸಂದರ್ಭದಲ್ಲಿ ಬಿಸಿಲಿನ ತಾಪಕ್ಕೆ ಕೂಲಿ ಕಾರ್ಮಿಕ ಸಿದ್ದಣ್ಣನ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಕುಸಿದುಬಿದ್ದು ಮೃತಪಟ್ಟಿದ್ದಾರೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ಕಾರೊಂದು ಮಹಿಳೆಗೆ ಡಿಕ್ಕಿ

ಹಾವೇರಿ: ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ಕಾರೊಂದು ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ದುರ್ಮರಣ ಹೊಂದಿದ್ದಾರೆ. ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ಘಟನೆ ನಡೆದಿದೆ. ಕಾರು ಡಿಕ್ಕಿ ಹೊಡೆದ ಧಾರುಣ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಪಘಾತದ ದೃಶ್ಯ ಎದೆ ಝಲ್ ಎನ್ನಿಸುವಂತಿದೆ.

ಇದನ್ನೂ ಓದಿ: Mysore News: ರೌಡಿಶೀಟರ್‌ ಚಂದ್ರು ಹತ್ಯೆ ಪ್ರಕರಣ; ಮತ್ತೆ ಐವರನ್ನು ಬಂಧಿಸಿದ ಪೊಲೀಸರು

ಮೃತ ಮಹಿಳೆಯನ್ನು ಕುಂದೂರ ಗ್ರಾಮದ (40) ರತ್ನವ್ವ ಸಂಶಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಶಿಗ್ಗಾಂವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಪಘಾತದ ನಂತರ ಪರಾರಿಯಾಗಿರುವ ವಾಹನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:36 pm, Wed, 24 May 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us