Karnataka Assembly Election: ಸ್ವರೂಪ್ ಕೂಡ ನನ್ನ ಮಗ: ಮುನಿಸು ಬದಿಗಿಟ್ಟು ಜೆಡಿಎಸ್ ಅಭ್ಯರ್ಥಿ ಬೆನ್ನಿಗೆ ನಿಂತ ದೊಡ್ಡಗೌಡರ ಸೊಸೆ

|

Updated on: Apr 20, 2023 | 7:24 AM

ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರಕ್ಕೆ ಇಡೀ ರಾಜ್ಯವನ್ನೇ ಗಮನ ಸೆಳೆದಿದ್ದ ಹಾಸನ ಕ್ಷೇತ್ರದಲ್ಲಿ ರೇವಣ್ಣ ಕುಟುಂಬದ ವಿರುದ್ದ ಹೋರಾಡಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸ್ವರೂಪ್ ಪರವಾಗಿ ರೇವಣ್ಣ ಕುಟುಂಬ ಅಬ್ಬರದ ಪ್ರಚಾರ ಮಾಡಿದೆ.

Karnataka Assembly Election: ಸ್ವರೂಪ್ ಕೂಡ ನನ್ನ ಮಗ: ಮುನಿಸು ಬದಿಗಿಟ್ಟು ಜೆಡಿಎಸ್ ಅಭ್ಯರ್ಥಿ ಬೆನ್ನಿಗೆ ನಿಂತ ದೊಡ್ಡಗೌಡರ ಸೊಸೆ
ಭವಾನಿ ರೇವಣ್ಣ, ಸ್ವರೂಪ್​
Follow us on

ಹಾಸನ: ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರಕ್ಕೆ ಇಡೀ ರಾಜ್ಯವನ್ನೇ ಗಮನ ಸೆಳೆದಿದ್ದ ಹಾಸನ ಕ್ಷೇತ್ರದಲ್ಲಿ ರೇವಣ್ಣ(H. D. Revanna) ಕುಟುಂಬದ ವಿರುದ್ದ ಹೋರಾಡಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸ್ವರೂಪ್(Swaroop) ಪರವಾಗಿ ರೇವಣ್ಣ ಕುಟುಂಬ ನಿಲ್ಲುತ್ತಾ, ಟಿಕೆಟ್ ಸಿಗದ ನಿರಾಸೆಯಲ್ಲಿರುವ ಭವಾನಿ ರೇವಣ್ಣ(Bhavani Revanna) ಪ್ರಚಾರಕ್ಕೆ ಬರುತ್ತಾರಾ, ಸಂಸದ ಪ್ರಜ್ವಲ್(Prajwal Revanna), ಪರಿಷತ್ ಸದಸ್ಯ ಡಾ. ಸೂರಜ್ ಅಖಾಡಕ್ಕೆ ಇಳಿಯುತ್ತಾರಾ ಹೀಗೆಲ್ಲಾ ಚರ್ಚೆಗಳ ಮೇಲೆ ಚರ್ಚೆ ನಡೆಯುತ್ತಿತ್ತು. ರೇವಣ್ಣ ಕುಟುಂಬ ಪ್ರಚಾರಕ್ಕೆ ಬಾರದಿದ್ದರೆ ಪ್ರೀತಂಗೌಡ ವಿರುದ್ದ ಸ್ವರೂಪ್ ಹೋರಾಟ ಸಾಧ್ಯವೇ ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಆದ್ರೆ, ಈ ಎಲ್ಲಾ ಪ್ರಶ್ನೆಗಳಿಗೆ ಒಂದೇ ಸಭೆ ಮೂಲಕ ಉತ್ತರ ಕೊಟ್ಟಿರುವ ದೊಡ್ಡಗೌಡರ ಸೊಸೆ, ಸಾವಿರಾರು ಕಾರ್ಯಕರ್ತರ ಎದುರು ಅಬ್ಬರಿಸಿದ್ದಾರೆ.

ಹೌದು ನಿನ್ನೆ(ಏ.19) ನಡೆದ ಸಭೆಯಲ್ಲಿ ಸ್ವರೂಪ್ ಕೂಡ ನನ್ನ ಮಗ, ಅವನಿಗೆ ಟಿಕೆಟ್ ಕೊಡಿ ಎಂದಿದ್ದೇ ನಾನು, ಹಾಸನದಲ್ಲಿ ಬಿಜೆಪಿ ಸೋಲಬೇಕು ಜೆಡಿಎಸ್ ಗೆಲ್ಲಬೇಕು ಎಂದು ಸ್ವರೂಪ್ ಕೈ ಎತ್ತಿ ಸಿನಿಮೀಯ ಸ್ಟೈಲ್​ನಲ್ಲಿ ಆರ್ಭಟಿಸಿದ್ದಾರೆ. ಜೊತೆಗೆ ನಿನ್ನೆವರೆಗೂ ನಿಮ್ಮ ಹವಾ ಇಂದಿನಿಂದ ನಮ್ಮ ಹವಾ ಎಂದು ಗುಡುಗಿರುವ ಸಂಸದ ಪ್ರಜ್ವಲ್ ಕೂಡ ಸ್ವರೂಪ್ ಬೆನ್ನಿಗೆ ನಿಂತಿರೋದು ಬಿಜೆಪಿ ಜೆಡಿಎಸ್​ ನಡುವಿನ ನೇರಾ ನೇರ ಕದನ ಇದೀಗ ಮತ್ತಷ್ಟು ರೋಚಕ ತಿರುವು ಪಡೆದುಕೊಂಡಿದೆ.

ಇದನ್ನೂ ಓದಿ:Karnataka Assembly Election: ಜೆಡಿಎಸ್​​ ಮೂರನೇ ಪಟ್ಟಿ ಬಿಡುಗಡೆ: 59 ಅಭ್ಯರ್ಥಿಗಳ ಹೆಸರು ಪ್ರಕಟ

ಟಿಕೆಟ್ ಸಿಗದ ನಿರಾಸೆ ಬದಿಗಿಟ್ಟು ಅಭ್ಯರ್ಥಿ ಬೆನ್ನಿಗೆ ನಿಂತ ದೊಡ್ಡಗೌಡರ ಸೊಸೆ

ಟಿಕೆಟ್ ಸಿಗದ ನಿರಾಸೆ ಬದಿಗಿಟ್ಟು, ಒಂದೇ ವೇದಿಕೆಯಲ್ಲಿ ರೇವಣ್ಣ ಕುಟುಂಬ ಒಗ್ಗಟ್ಟಿನ ಮಂತ್ರ ಸಾರಿದೆ. ಹಾಸನದ ಅಭ್ಯರ್ಥಿ ಸ್ವರೂಪ್ ಪರವಾಗಿ ಭವಾನಿ ರೇವಣ್ಣ ಅಬ್ಬರದ ಪ್ರಚಾರ ಮಾಡಿದ್ದಾರೆ. ಹೌದು ಸತತ ಮೂರು ತಿಂಗಳಿನಿಂದ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ನಡುವಿನ ಅಸಲಿ ಯುದ್ದ ಶುರುವಾಗಿದೆ. ಹಾಸನದ ಅಭ್ಯರ್ಥಿ ತಾನೇ ಆಗಬೇಕೆಂದು ಹಠ ಹಿಡಿದು ಹೋರಾಟ ಮಾಡಿದ್ದ ಭವಾನಿ ರೇವಣ್ಣ ಪತಿ ಪುತ್ರರ ಜೊತೆಗೂಡಿ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದ್ರೆ, ಭವಾನಿಗೆ ಟಿಕೆಟ್ ಕೊಡದೆ ಮಾಜಿ ಶಾಸಕ ದಿವಂಗತ ಪ್ರಕಾಶ್ ಪುತ್ರ ಸ್ವರೂಪ್ ಪ್ರಕಾಶ್​ಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ವರಿಷ್ಠರು ಶಾಕ್ ನೀಡಿದ್ದರು.

ಆಗಿನಿಂದಲೂ ಟಿಕೇಟ್ ತಪ್ಪಿದ ನಿರಾಸೆಯಲ್ಲಿ ರೇವಣ್ಣರ ಇಡೀ ಕುಟುಂಬ ಹಾಸನದಲ್ಲಿ ಪ್ರಚಾರ ಮಾಡೋದು ಡೌಟ್, ಸ್ವರೂಪ್ ಬೆನ್ನಿಗೆ ನಿಲ್ಲೋದು ಕಷ್ಟ ಎಂದೇ ವಿಶ್ಲೇಷಣೆ ಮಾಡಲಾಗುತ್ತಿತ್ತು, ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಚಿವ ರೇವಣ್ಣ ಕೂಡ ಹಾಸನವನ್ನು ಕುಮಾರಸ್ವಾಮಿ ಜವಾಬ್ದಾರಿ ತೆಗೆದುಕೊಂಡಿದ್ದು, ಅವರೇ ನೋಡಿಕೊಳ್ಳುತ್ತಾರೆ. ಎನ್ನುವ ಮೂಲಕ ತಮ್ಮೊಳಗಿನ ಅಸಮಧಾನ ಹೊರ ಹಾಕಿದ್ದರು. ಆದ್ರೆ ನಿನ್ನೆ ಎಲ್ಲವನ್ನು ಮರೆತು ಒಂದೇ ವೇದಿಕೆಯಲ್ಲಿ ಸ್ವರೂಪ್ ಜೊತೆಗೆ ಕಾಣಿಸಿಕೊಂಡ ರೇವಣ್ಣ, ಅವರ ಪತ್ನಿ ಭವಾನಿ, ಪುತ್ರ ಸಂಸದ ಪ್ರಜ್ವಲ್ ಕೂಡ ಸ್ವರೂಪ್ ಪರ ಅಬ್ಬರಿಸಿದ್ರು, ವೇದಿಕೆ ಮೇಲೆ ತಮ್ಮ ನಾಯಕ ರೇವಣ್ಣ, ಭವಾನಿ ರೇವಣ್ಣರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಸ್ವರೂಪ್ ಬಹಿರಂಗವಾಗಿ ಅವರ ಬೆಂಬಲ ಕೋರಿದರು.

ಇದನ್ನೂ ಓದಿ:ಹಾಸನ: ಜೆಡಿಎಸ್​ ನನ್ನ ನೈಜ ಎದುರಾಳಿ ಎಂದ ಬಿಜೆಪಿ ಶಾಸಕ ಪ್ರೀತಂಗೌಡ

ಸಭೆಯಲ್ಲಿ ಅಬ್ಬರದ ಭಾಷಣ ಮಾಡಿದ ಭವಾನಿ ರೇವಣ್ಣ ನಾನು ಟಿಕೆಟ್ ಕೇಳಿದ್ದು ನಿಜ. ಆದ್ರೆ, ದೇವೇಗೌಡರ ಪಕ್ಷಕ್ಕಿಂತ ನಾನು ದೊಡ್ಡವಳಲ್ಲ ಅವರ ತೀರ್ಮಾನಕ್ಕೆ ತಲೆಬಾಗಿದ್ದೇನೆ, ಸ್ವರೂಪ್ ಕೂಡ ನನ್ನ ಮಗನಿದ್ದಂತೆ, ಈ ಕ್ಷೇತ್ರದಲ್ಲಿ ಬಿಜೆಪಿ ಸೋಲಬೇಕು, ಜೆಡಿಎಎಸ್ ಗೆಲ್ಲಬೇಕು ಎನ್ನುವುದಷ್ಟೆ ನಮ್ಮ ಗುರಿ ಎಂದು ಸಿನಿಮೀಯ ರೀತಿಯಲ್ಲಿ ಸ್ವರೂಪ್ ಕೈ ಹಿಡಿದು ಮೇಲೆತ್ತಿ ಜೆಡಿಎಸ್ ಗೆಲ್ಲಬೇಕು ಬಿಜೆಪಿ, ಕಾಂಗ್ರೆಸ್ ಸೋಲಬೇಕು ಎಂದು ಆಕ್ರೋಶ ಭರಿತವಾಗಿ ಮಾತನಾಡಿದ್ರು, ನೆರೆದಿದ್ದ ಸಾವಿರಾರು ಕಾರ್ಯಕರ್ತರ ಎದುರು ಪಕ್ಷದ ಗೆಲುವಿನ ರಣಕಹಳೆ ಮೊಳಗಿಸಿದರು.

ಕಳೆದ ಬಾರಿ ಹಾಸನ ಜಿಲ್ಲೆಯಲ್ಲಿ ಇರುವ ಒಟ್ಟು 7 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರ ಗೆದ್ದಿದ್ದ ಜೆಡಿಎಸ್

ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಹಾಸನ ಜಿಲ್ಲೆಯಲ್ಲಿ ಇರುವ ಒಟ್ಟು 7 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರ ಗೆದ್ದಿದ್ದ ಜೆಡಿಎಸ್ ಕಳೆದ ಬಾರಿ ಜಿಲ್ಲಾ ಕೇಂದ್ರದಲ್ಲಿ ಸೋತು ತೀವ್ರ ಹಿನ್ನಡೆ ಅನುಭವಿಸಿತ್ತು, ಆದ್ರೆ, ಈ ಬಾರಿ ಶತಾಯಗತಾಯ ಹಾಸನ ಗೆಲ್ಲಬೇಕೆಂದು ಪಣ ತೊಟ್ಟಿದ್ದ ರೇವಣ್ಣ ಕುಟುಂಬ ಸಾಕಷ್ಟು ತಂತ್ರ ಹೆಣೆದಿತ್ತು. ಭವಾನಿ ರೇವಣ್ಣರನ್ನ ಕಣಕ್ಕಿಳಿಸಿ ಪ್ರೀತಂಗೌಡ ಅವರನ್ನ ಮಣಿಸಬೇಕೆಂದು ತಂತ್ರ ರೂಪಿಸಿದ್ದರು.

ಭವಾನಿ ರೇವಣ್ಣ ವಿರುದ್ದ ವೈಯಕ್ತಿಕ ಟೀಕೆಗಳಿಂದ ಬೇಸತ್ತಿದ್ದ ರೇವಣ್ಣ ಕುಟುಂಬ ತಮ್ಮ ಕುಟುಂಬ ಸದಸ್ಯರೇ ಕಣಕ್ಕಿಳಿದು ಅವರ ವಿರುದ್ದ ಗೆಲ್ಲುತ್ತೆವೆ ಎಂದು ಶಪಥ ಮಾಡಿದ್ದರು. ಆದ್ರೆ, ಎಷ್ಟೇ ಪ್ರಯತ್ನ ಮಾಡಿದರೂ ಟಿಕೆಟ್ ಸಿಗದಿದ್ದಾಗ ನಿರಾಸೆಯಿಂದ ಬೇಸತ್ತು ಮಾತನಾಡಿದ್ದ ರೇವಣ್ಣ. ‘ಹಾಸನ ಕ್ಷೇತ್ರದಲ್ಲಿ ಪ್ರಚಾರದ ಬಗ್ಗೆ ನಿರಾಸಕ್ತಿ ವಹಿಸಿ ಮಾತನಾಡಿದ್ದು ಭಾರಿ ಚರ್ಚೆ ಹುಟ್ಟು ಹಾಕಿತ್ತು ಆದ್ರೆ, ಇದೀಗ ಎಲ್ಲವನ್ನು ಮರೆತು ಒಂದೇ ವೇದಿಕೆಯಲ್ಲಿ ಅಬ್ಬರಿಸಿದ ರೇವಣ್ಣ ಕುಟುಂಬ ಸದಸ್ಯರು ಸ್ವರೂಪ್ ಗೆಲುವೇ ನಮಗೆ ಮುಖ್ಯ ಎಂದಿದ್ದಾರೆ.

ಇದನ್ನೂ ಓದಿ:Siddaramaiah: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗಿಂತ ಪತ್ನಿ ಪಾರ್ವತಿ ಶ್ರೀಮಂತೆ

ಒಟ್ಟಿನಲ್ಲಿ ಇಡೀ ರಾಜ್ಯವನ್ನೇ ತಿರುಗಿ ನೋಡುವಂತೆ ಮಾಡಿದ್ದ ಹಾಸನ ಕ್ಷೇತ್ರದಲ್ಲಿ ಹೋರಾಟದ ರಣಕಹಳೆ ಮೊಳಗಿದೆ. ಟಿಕೆಟ್ ಸಿಗದೆ ಮುನಿಸಿನಲ್ಲಿದ್ದ ಭವಾನಿ ರೇವಣ್ಣ ಪತಿ ಹಾಗೂ ಪುತ್ರರ ಜೊತೆ ಒಂದೇ ವೇದಿಕೆಯಲ್ಲಿ ಹಾಸನದಲ್ಲಿ ನಿಂತು ಅಬ್ಬರಿಸಿದ್ದು ಜೆಡಿಎಸ್ ಗೆಲುವಿನ ಕಹಳೆ ಮೊಳಗಿಸಿದ್ದು, ಹಾಸನ ಕ್ಷೇತ್ರ ಮತ್ತಷ್ಟು ರಂಗೇರುವಂತೆ ಮಾಡಿದೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ