ದಾರಿ ನಿರ್ಮಾಣ ವಿಚಾರದಲ್ಲಿ ಕುಟುಂಬಗಳ ಮಧ್ಯೆ ಮಾರಾಮಾರಿ: ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆಗೆ ಯತ್ನ

ಹಾಸನ ಬೇಲೂರು ತಾಲೂಕಿನ ಹಂಚಿಹಳ್ಳಿಯಲ್ಲಿ ದಾರಿ ವಿಚಾರಕ್ಕೆ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ. ಸದ್ಯ ಹಳೆಬೀಡು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದು, ಆರು ಜನರನ್ನು ಬಂಧಿಸಲಾಗಿದೆ. 8 ವರ್ಷದಿಂದ ಬಹಿಷ್ಕಾರ, ಜೀವ ಬೆದರಿಕೆ ಎದುರಿಸುತ್ತಿರುವ ಸಂತ್ರಸ್ತ ಕುಟುಂಬ ನ್ಯಾಯ ಮತ್ತು ರಕ್ಷಣೆಗೆ ಆಗ್ರಹಿಸಿದೆ.

ದಾರಿ ನಿರ್ಮಾಣ ವಿಚಾರದಲ್ಲಿ ಕುಟುಂಬಗಳ ಮಧ್ಯೆ ಮಾರಾಮಾರಿ: ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆಗೆ ಯತ್ನ
ಮಾರಾಮಾರಿ
Image Credit source: tv9 kannada
Edited By:

Updated on: Apr 02, 2026 | 9:12 PM

ಹಾಸನ, ಏಪ್ರಿಲ್​ 02: ಅವರೆಲ್ಲಾ ಒಂದೇ ಕುಟುಂಬಗಳು. ಒಂದೇ ಸಮುದಾಯಕ್ಕೆ ಸೇರಿದವರು. ಆದರೆ ದಶದಕದ ಹಿಂದೆ ನಡೆದ ಅದೊಂದು ಚುನಾವಣೆ ಊರಿನ್ನೇ ಎರಡು ಭಾಗ ಮಾಡಿ ಹಾಕಿದೆ. ಸಣ್ಣಪುಟ್ಟ ವಿಚಾರಕ್ಕೂ ಕಲಹ, ಮಾರಾಮಾರಿ (Clash) ನಡೆಯುತ್ತಿದೆ. ಐದು ಕುಟುಂಬಗಳು ವಾಸಿಸುವ ಮನೆಗಳಿಗೆ ತೆರಳಲು ರಸ್ತೆ ನಿರ್ಮಾಣದ ವಿಚಾರ ಇದೀಗ ಊರಿನಲ್ಲಿ ಮತ್ತೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಜಿಲ್ಲೆಯ ಬೇಲೂರು ತಾಲೂಕಿನ ಹಂಚಿಹಳ್ಳಿಯಲ್ಲಿ ಘಟನೆ ನಡೆದಿದೆ. ಅಧಿಕಾರಿಗಳ ಸೂಚನೆಯಂತೆ ದಾರಿ ಮಾಡಿಕೊಳ್ಳಲು ಮುಂದಾದಾಗ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಯತ್ನ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಳೆಬೀಡು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ನಡೆದಿದ್ದೇನು?

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಂಚಿಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಐದು ಕುಟುಂಬಗಳು ವಾಸಿಸುವ ಪ್ರದೇಶಕ್ಕೆ ರಸ್ತೆ ನಿರ್ಮಾಣ ಮಾಡಿಕೊಳ್ಳುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪೈಶಾಚಿಕ ಘಟನೆಯ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಹೋಟೆಲ್ ಬಳಿ ಡ್ರಗ್ಸ್ ಸೇವನೆ: ಪ್ರಶ್ನಿಸಿದ್ದಕ್ಕೆ ಗಲಾಟೆ; ಸಿಕ್ಕಸಿಕ್ಕ ವಸ್ತುಗಳಿಂದ ಹೊಡೆದಾಟ

ಗ್ರಾಮದ ಗಂಗಾಬೋವಿ, ಶೀವಕುಮಾರ್, ಸೋಮ, ಕಿರಣ್, ಆನಂದ್, ಪುನೀತ್, ಪ್ರತಾಪ್, ಪ್ರಸನ್ನ, ನಾಗಾಬೋವಿ, ಮಂಜಾಬೋವಿ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ನೊಂದ ಕುಟುಂಬ ಸದಸ್ಯರು ಇಂದು ಹಾಸನದ ಡಿಸಿ ಕಚೇರಿಗೆ ಆಗಮಿಸಿ ರಕ್ಷಣೆಗೆ ಮೊರೆಯಿಟ್ಟಿದ್ದಾರೆ. 8 ವರ್ಷಗಳಿಂದಲೂ ತಮ್ಮ ಮೇಲೆ ಒಂದಿಲ್ಲೊಂದು ನೆಪವೊಡ್ಡಿ ಹಲ್ಲೆ, ದೌರ್ಜನ್ಯ ನಡೆಸುತ್ತಿದ್ದಾರೆ ಎಂದಿದ್ದಾರೆ.

ಮಹಿಳೆ ಬಟ್ಟೆ ಎಳೆದು ಹಲ್ಲೆ

ಡಿಸಿ, ತಹಸಿಲ್ದಾರ್ ಸೂಚನೆಯಂತೆ ರಸ್ತೆ ನಿರ್ಮಾಣ ಮಾಡಿಕೊಳ್ಳಲು ಯತ್ನಿಸಿದಾಗ ಹಲವು ಬಾರಿ ಗಲಾಟೆ ಮಾಡಿದ್ದಾರೆ. ಈಗ ಕೊನೆಯದಾಗಿ ಮಾರ್ಚ್ 22ರಂದು ಮುಂಜಾನೆ 7ಗಂಟೆ ಸುಮಾರಿಗೆ ಮನೆಯೊಳಗೆ ನುಗ್ಗಿ ಮಹಿಳೆಯನ್ನ ಎಳೆತಂದು ಹಲ್ಲೆ ಮಾಡಿದ್ದಾರೆ. ಮೈ ಮೇಲಿನ ಬಟ್ಟೆ ಎಳೆದು ಹಲ್ಲೆ ಮಾಡಿ ನೀಚ ಕೃತ್ಯ ಎಸಗಿದ್ದಾರೆ ಎಂದು ಮಹಿಳೆ ಕಣ್ನೀರಿಟ್ಟಿದ್ದಾರೆ. ಅವರೆ ವಿಡಿಯೋ ಮಾಡಿ ನಮ್ಮ ಮರ್ಯಾದೆ ತೆಗೆದಿದ್ದಾರೆ ಎಂದು ಅಳಲು ತೋಡಿಕೊಂಡಿ​ದ್ದು, ನಮ್ಮನ್ನ ಅಮಾನುಷವಾಗಿ ಹಲ್ಲೆ ಮಾಡಿದವರ ಬಂಧನ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಅಭ್ಯರ್ಥಿ ವಿರುದ್ಧ ಕುಮಾರ್ ಎಂಬುವವರು ಚುನಾವಣೆಗೆ ನಿಂತರು ಎಂಬ ಕಾರಣಕ್ಕೆ 8 ವರ್ಷದಿಂದ ದ್ವೇಷ ಸಾಧಿಸುತ್ತಿದ್ದಾರೆ ಎನ್ನುವುದು ನೊಂದ ಕುಟುಂಬಗಳ ಅಳಲಾಗಿದೆ. ನಾವು ಐದು ಕುಟುಂಬಗಳಿದ್ದು, ಉಳಿದ 20 ಕುಟುಂಬಗಳು ನಮಗೆ ಕಿರುಕುಳ ನೀಡುತ್ತಿದ್ದಾರೆ. ಮಾರ್ಚ್ 22ರಂದು ಹಲ್ಲೆ ಮಾಡಿದ್ದಾರೆ. ನಮಗೆ ಓಡಾಡಲು ಬೇರೆ ದಾರಿಯೇ ಇಲ್ಲ, ಈಗ ಅವರೇ ಹಲ್ಲೆ ಮಾಡಿ ಮತ್ತೆ ಜೀವಬೆದರಿಕೆ ಹಾಕುತ್ತಿದ್ದಾರೆ. ಅಧಿಕಾರಿಗಳೇ ಬಂದು ದಾರಿ ಗುರುತಿಸಿ ಹೋದರೂ ದಾರಿಯನ್ನ ಬಂದ್​ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

10 ಜನರ ವಿರುದ್ಧ ಕೇಸ್: ಆರು ಜನರ ಬಂಧನ

ಇನ್ನು ಘಟನೆ ಸಂಬಂಧ ಶಿವಕುಮಾರ್, ಗಂಗಾಬೋವಿ ಸೇರಿ 10 ಜನರ ವಿರುದ್ಧ ಕೇಸ್ ದಾಖಲಾಗಿದ್ದರೆ, ಇತ್ತ ಪ್ರತಾಪ್​ ಎಂಬುವವರು ನೀಡಿದ ದೂರು ಆಧರಿಸಿ ಕುಮಾರ್, ಗೋವಿಂದಪ್ಪ ಹಾಗೂ ಇತರೆ ನಾಲ್ವರ ವಿರುದ್ದ ಕೂಟ ಹಳೆಬೀಡು ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಈಗಾಗಲೆ 6 ಜನರ ಬಂಧನವಾಗಿದ್ದು ಪ್ರತಾಪ್, ಮಂಜಾಬೋವಿ, ಕಿರಣ್ ಹಾಗೂ ಸೋಮ ಎಂಬುವವರ ಬಂಧಿಸಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾನೂನು ಪಾಲನೆ ಕೇವಲ ಆಯ್ಕೆಯ ವಿಷಯವೇ?: ಬಸವನಗುಡಿ ಪುತ್ತಿಗೆ ಮಠಕ್ಕೆ ಬಂದಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿದ ಯುವಕ

ರಸ್ತೆಯೊಂದರ ವಿಚಾರದಲ್ಲಿ ರಾಜಕೀಯ ತಂದು ಪದೇಪದೆ ಬಡಿದಾಡಿಕೊಂಡ ಎರಡು ಗುಂಪುಗಳು ಇದೀಗ ಪರಸ್ಪರ ದೂರು, ಪ್ರತಿದೂರು ನೀಡಿ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಘಟನೆಯ ಸಂಬಂಧ ಹಳೆಬೀಡು ಠಾಣೆಯ ಪಿಎಸ್​​ಐ ಮಂಜುನಾಥ್, ಒಂದು ಗುಂಪಿನ ಪರ ಬೆಂಬಲ ನೀಡುತ್ತಿದ್ದಾರೆಂದು ಬಂಧನಕ್ಕೆ ಒಳಗಾಗಿರುವ ಶಿವಕುಮಾರ್ ಮತ್ತು ಇತರರ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ತಹಶೀಲ್ದಾರ್ ಸೂಚನೆಯಂತೆ ಪಿಎಸ್​ಐ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಪ್ರಕಾರ ನಡೆದುಕೊಂಡಿದ್ದಾರೆ. ಆದರೆ ರಾಜಕೀಯ ಅಧಿಕಾರದ ಪ್ರಭಾವ ಹೊಂದಿರುವ ಶಿವಕುಮಾರ್ ಮತ್ತು ಇತರರು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ನಮಗೆ ರಕ್ಷಣೆ ಕೊಡಿ ಎಂದು ಡಿಸಿ ಅವರನ್ನ ಭೇಟಿ ಮಾಡಿದ ನೊಂದ ಕುಟುಂಬದ ಸದಸ್ಯರು, ತಮ್ಮ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಅಳಲುತೋಡಿಕೊಂಡಿದ್ದಾರೆ.

ಬೀದಿಯಲ್ಲಿ ಮಾರಾಮಾರಿ

ಒಟ್ಟಿನಲ್ಲಿ 8 ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಸೃಷ್ಟಿಯಾಗಿದ್ದ ಎರಡು ಗುಂಪುಗಳ ನಡುವಿನ ಸಂಘರ್ಷ ಇದೀಗ ಬೀದಿಯಲ್ಲಿ ಮಾರಾಮಾರಿಯ ಹಂತಕ್ಕೆ ಬಂದು ನಿಂತ್ತಿದೆ. ಅಷ್ಟೇ ಅಲ್ಲದೆ ಮಹಿಳೆಯ ಬಟ್ಟೆ ಬಿಚ್ಚಿ ಹಲ್ಲೆ ಮಾಡುವ ನೀಚತನದ ಕೃತ್ಯದ ಬಗ್ಗೆಯೂ ಆರೋಪ ಕೇಳಿಬಂದಿದೆ. ಸದ್ಯ ಪೊಲೀಸರು ಎರಡೂ ಕಡೆಯಿಂದ ದೂರು ದಾಖಲಿಸಿದ್ದು, ತನಿಖೆ ಬಳಿಕ ಸತ್ಯ ತಿಳಿಯಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Follow Us