ವಿಡಿಯೋ ನೋಡಿ; ಬೆಂಗಳೂರು – ಮಂಗಳೂರು ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ, ಸಂಚಾರಕ್ಕೆ ಅಡಚಣೆ

ಹಾಸನ ಜಿಲ್ಲೆಯ ಕೊಲ್ಲಹಳ್ಳಿ ಗ್ರಾಮದ ಬಳಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 47ರಲ್ಲಿ ಬಿಸಾಡಿದ ಅನ್ನವನ್ನು ಆನೆ ತಿನ್ನುತ್ತಿದ್ದ ಪರಿಣಾಮ ಹೆದ್ದಾರಿಯಲ್ಲಿ ಗುರುವಾರ ಸುಮಾರು ಅರ್ಧ ಗಂಟೆ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಹಾಸನ: ಸಕಲೇಶಪುರದ ಹಲವೆಡೆ ಸುತ್ತಾಡಿ ಸ್ಥಳೀಯರನ್ನು ಭಯಭೀತರನ್ನಾಗಿಸುತ್ತಿರುವ ‘ಓಲ್ಡ್ ಮಕ್ನಾ’ ಎಂಬ ಕಾಡಾನೆಯನ್ನು ಮತ್ತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಹಾಸನ ಜಿಲ್ಲೆಯ ಹಲವು ಗ್ರಾಮಗಳ ನಿವಾಸಿಗಳ ಹಲವು ದೂರುಗಳ ಹಿನ್ನೆಲೆಯಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ. ಈ ಮಧ್ಯೆ, ಹಾಸನ ಜಿಲ್ಲೆಯ ಕೊಲ್ಲಹಳ್ಳಿ ಗ್ರಾಮದ ಬಳಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 47ರಲ್ಲಿ ಬಿಸಾಡಿದ ಅನ್ನವನ್ನು ಆನೆ ತಿನ್ನುತ್ತಿದ್ದ ಪರಿಣಾಮ ಹೆದ್ದಾರಿಯಲ್ಲಿ ಗುರುವಾರ ಸುಮಾರು ಅರ್ಧ ಗಂಟೆ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ಗುರುವಾರ ಮನೆಯೊಂದರ ಕಿಟಕಿ ಗಾಜುಗಳನ್ನು ಆನೆ ಹಾನಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

‘ಓಲ್ಡ್ ಮಕ್ನಾ’ವನ್ನು 2022 ರ ಜೂನ್​ನಲ್ಲಿ ಸೆರೆಹಿಡಿದು ಬಂಡೀಪುರದ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಆನೆಯು ತಿಂಗಳೊಳಗೆ ಕಾಡನ್ನು ತೊರೆದು ಸಕಲೇಶಪುರಕ್ಕೆ ಮರಳಿದೆ.

ಅರಣ್ಯಾಧಿಕಾರಿಗಳು ಪಳಗಿದ ಆನೆಗಳ ಸಹಾಯದಿಂದ ಆನೆಯನ್ನು ಹಿಡಿದು ಈ ಬಾರಿ ಕಾಡಾನೆಯನ್ನು ತಿಂಗಳುಗಟ್ಟಲೆ ಮರಳಿ ಊರಿಗೆ ಬಾರದಂತ ಪ್ರದೇಶದಲ್ಲಿ ಬಿಡುವ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಹನಿ ಟ್ಯ್ರಾಪ್ ಮೂಲಕ​ ಕಾಡಾನೆಗಳ ಸೆರೆಗೆ ಮುಂದಾದ ಅರಣ್ಯ ಇಲಾಖೆ: ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅವಳವಡಿಕೆ

ಈ ಮಧ್ಯೆ, ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ  ಉಪಟಳ ಮಿತಿಮೀರಿದ ಹಿನ್ನೆಲೆ ಕಾಡಾನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಹನಿ ಟ್ಯ್ರಾಪ್  ಮೊರೆ ಹೋಗಿದೆ. ಹೌದು ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಅರಣ್ಯ ಇಲಾಖೆ ಸಿದ್ದತೆ ನಡೆಸಿದೆ. ಹೆಣ್ಣಾನೆ ಮೋಹಕ್ಕೆ ಬಿದ್ದು, ಕಾಡಾನೆಗಳು ಸೆರೆ ಸಿಗುವ ಸಾಧ್ಯತೆ ಇದೆ. ಹೀಗಾಗಿ ಇಂದಿನಿಂದ ಮೇ.25 ರವರೆಗೆ ಸಕಲೇಶಪುರ, ಬೇಲೂರು ವಲಯಗಳಲ್ಲಿ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆಯಲಿದೆ. ಇನ್ನು ರೇಡಿಯೋ ಕಾಲರ್ ಅಳವಡಿಕೆಗೆ ಸಾಕಾನೆಗಳನ್ನು ಬಳಸಿಕೊಳ್ಳಲಾಗಿದ್ದು, ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು ಮತ್ತು ಮಹೇಂದ್ರ ಹಾಗೂ ದುಬಾರೆ ಆನೆ ಶಿಬಿರದಿಂದ ಅಜ್ಜಯ್ಯ, ಪ್ರಶಾಂತ ಮತ್ತು ವಿಕ್ರಮ ಆನೆಗಳನ್ನು ಕರೆಸಿಕೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us