ಬೀದಿ ನಾಯಿಗಳ ಕಾಟಕ್ಕೆ ನಲುಗಿದ ಹಾವೇರಿ ಜನತೆ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

| Updated By: ಆಯೇಷಾ ಬಾನು

Updated on: Apr 10, 2021 | 8:43 AM

ನಗರದ ಸುಭಾಶ ವೃತ್ತ ಸೇರಿದಂತೆ ಹಲವೆಡೆ ಗುಂಪು ಗುಂಪಾಗಿ ಬಿಡಾರ ಹೂಡಿರುವ ಬೀದಿ ನಾಯಿಗಳು ಮೂರ್ನಾಲ್ಕು ಬಾರಿ ಮಕ್ಕಳ‌ ಮೇಲೆ ದಾಳಿ ಮಾಡಿ ಮಕ್ಕಳನ್ನು ಕಚ್ಚಿ ಗಾಯಗೊಳಿಸಿವೆ. ಈ ಪ್ರದೇಶದಲ್ಲಿ ವಾಸವಾಗಿರುವ ಪುಟ್ಟಪುಟ್ಟ ಮಕ್ಕಳು ಕೈಯಲ್ಲಿ ಏನಾದರೂ ತಿನಿಸು ಹಿಡಿದುಕೊಂಡು ತಿನ್ನಲು ಮನೆಯಿಂದ ಹೊರಬಂದರೆ ಸಾಕು ಮಕ್ಕಳ‌ ಮೇಲೆ ನಾಯಿಗಳು ದಾಳಿ ಮಾಡುತ್ತವೆ.

ಬೀದಿ ನಾಯಿಗಳ ಕಾಟಕ್ಕೆ ನಲುಗಿದ ಹಾವೇರಿ ಜನತೆ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ವಾಹನಗಳಿಗೆ ಅಡ್ಡಲಾಗಿ ನಿಂತಿರುವ ನಾಯಿಗಳು
Follow us on

ಹಾವೇರಿ : ಏಲಕ್ಕಿ ಕಂಪಿನ ನಾಡು ಹಾವೇರಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ‌ ಮೀರಿದೆ. ನಗರದ ಕೆಲವು ರಸ್ತೆಗಳಲ್ಲಿ ಜನರಿಗೆ ನಡೆದಾಡಲು ರಸ್ತೆ ಇಲ್ಲದಂತೆ ಬೀದಿ ನಾಯಿಗಳು ರಸ್ತೆ ತುಂಬಾ ಓಡಾಡುತ್ತಿವೆ. ಬೀದಿ ನಾಯಿಗಳ ಹಾವಳಿಯಿಂದ ಜನರು ರಸ್ತೆಯಲ್ಲಿ ಓಡಾಡಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಕ್ಕಳಂತೂ ನಾಯಿಗಳ‌ ಹಿಂಡು ಕಂಡು ಮನೆಬಿಟ್ಟು ಹೊರಗೆ ಬರಲು ಭಯಪಡುತ್ತಿದ್ದಾರೆ.

ಸುಭಾಶ ವೃತ್ತದ ಮಾರ್ಗವಾಗಿ ಓಡಾಡುವ ವಾಹನಗಳಂತೂ ರಸ್ತೆ ಎಲ್ಲಿದೆ ಎಂದು ಹುಡುಕಾಡಿ ವಾಹನಗಳನ್ನು ಚಲಾಯಿಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಓಡಾಡುವ ವಾಹನಗಳು ಹರಸಾಹಸಪಟ್ಟು ವಾಹನಗಳನ್ನು ತೆಗೆದುಕೊಂಡು ಹೋಗುವಂತಹ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ವಾಹನಗಳು ಸೌಂಡ್ ಮಾಡಿದರೂ ಬೀದಿ ನಾಯಿಗಳು ರಸ್ತೆ ಬಿಟ್ಟು ಕದಲದಂತೆ ರಸ್ತೆಯಲ್ಲಿಯೇ ಬಿಡಾರ ಹೂಡಿರುವುದೇ ಆಗಿದೆ.

ಮೂರ್ನಾಲ್ಕು ಬಾರಿ ಮಕ್ಕಳ ಮೇಲೆ ದಾಳಿ ಮಾಡಿರುವ ಬೀದಿ ನಾಯಿಗಳು
ನಗರದ ಸುಭಾಶ ವೃತ್ತ ಸೇರಿದಂತೆ ಹಲವೆಡೆ ಗುಂಪು ಗುಂಪಾಗಿ ಬಿಡಾರ ಹೂಡಿರುವ ಬೀದಿ ನಾಯಿಗಳು ಮೂರ್ನಾಲ್ಕು ಬಾರಿ ಮಕ್ಕಳ‌ ಮೇಲೆ ದಾಳಿ ಮಾಡಿ ಮಕ್ಕಳನ್ನು ಕಚ್ಚಿ ಗಾಯಗೊಳಿಸಿವೆ. ಈ ಪ್ರದೇಶದಲ್ಲಿ ವಾಸವಾಗಿರುವ ಪುಟ್ಟಪುಟ್ಟ ಮಕ್ಕಳು ಕೈಯಲ್ಲಿ ಏನಾದರೂ ತಿನಿಸು ಹಿಡಿದುಕೊಂಡು ತಿನ್ನಲು ಮನೆಯಿಂದ ಹೊರಬಂದರೆ ಸಾಕು ಮಕ್ಕಳ‌ ಮೇಲೆ ನಾಯಿಗಳು ದಾಳಿ ಮಾಡುತ್ತವೆ. ಮೂರ್ನಾಲ್ಕು ಬಾರಿ ಮಕ್ಕಳ‌ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದಾಗ ಸ್ಥಳೀಯರು ಮತ್ತು ಗಾಯಗೊಂಡ ಮಕ್ಕಳ ಮನೆಯವರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಘಟನೆಗಳು ನಡೆದಿವೆ.

ನಾಯಿಗಳ ಉಪಟಳದಿಂದ ಜನತೆ ಕಂಗಾಲು

ನಗರಸಭೆ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ 
ನಗರದ ಸುಭಾಶ ವೃತ್ತ ಸೇರಿದಂತೆ ಹಲವೆಡೆ ರಸ್ತೆಗಳನ್ನು ಆಕ್ರಮಿಸಿಕೊಂಡು ಬಿಡಾರ ಹೂಡಿರುವ ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸುವಂತೆ ಸ್ಥಳೀಯರು ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ಮಾತ್ರ ಇದು ತಮಗೆ ಸಂಬಂಧಿಸಿದ್ದೆ ಅಲ್ಲ ಎನ್ನುವಂತೆ ಕಂಡರೂ ಕಾಣದಂತೆ ಓಡಾಡುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಇದೆ ರಸ್ತೆ ಮಾರ್ಗವಾಗಿ ಓಡಾಡುವಾಗ ಬೀದಿ ನಾಯಿಗಳ ಹಿಂಡು ಕಣ್ಣಿಗೆ ಕಂಡರೂ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರಾದ ಅಬ್ದುಲ್ ಖಾದರ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದಿ ನಾಯಿಗಳ ಹಾವಳಿ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಿಲ್ಲ. ಬೀದಿ ನಾಯಿಗಳು ಎಷ್ಟಿವೆ ಎಂಬುವುದರ ಬಗ್ಗೆ ಸಮೀಕ್ಷೆ ಮಾಡಿಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು‌ ಎಂದು ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಹೇಳಿದ್ದಾರೆ.

ನಗರದ ಸುಭಾಶ ವೃತ್ತದಲ್ಲಿ ಬೀದಿ ನಾಯಿಗಳ ದೊಡ್ಡ ಹಿಂಡೆ ಇದೆ. ಕಳೆದ ಹಲವಾರು ದಿನಗಳಿಂದ ಎಂಟತ್ತು ನಾಯಿಗಳು ಇಲ್ಲಿನ ರಸ್ತೆಯಲ್ಲೇ ಬಿಡಾರ ಹೂಡಿವೆ. ಆದರೂ ನಗರಸಭೆ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಕೂಡಲೆ ನಗರಸಭೆ ಅಧಿಕಾರಿಗಳು ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಬೇಕಾಗಿದ್ದು, ಬೀದಿ ನಾಯಿಗಳಿಂದ ನಿತ್ಯ ಸ್ಥಳೀಯರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕಿದೆ.

ಇದನ್ನೂ ಓದಿ: ಕೋಟೆನಾಡಿನಲ್ಲಿ ಬೀದಿ ನಾಯಿಗಳ ಹಾವಳಿ, ಅಧಿಕಾರಿಗಳ ನಿರ್ಲಕ್ಷ್ಯ: ಕ್ರಮಕ್ಕೆ ಸ್ಥಳೀಯರ ಆಗ್ರಹ

( Haveri People urges Municipal Offcers to control the street dogs )

Published On - 8:42 am, Sat, 10 April 21