ಕೆಲಸದ ಒತ್ತಡದಿಂದ ಒಮ್ಮೊಮ್ಮೆ ಹೀಗಾಗುತ್ತದೆ: ಚಿಕಿತ್ಸೆ ಬಳಿಕ ಹೆಚ್‌ಡಿ ಕುಮಾರಸ್ವಾಮಿ ಮಾತು

ಮೂಗಿನಲ್ಲಿ ರಕ್ತಸ್ರಾವದಿಂದ ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಇದೀಗ ಡಿಸ್ಜಾರ್ಜ್ ಆಗಿದ್ದಾರೆ. ಸುಮಾರು 4 ಗಂಟೆ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮಾತನಾಡಿದ ಅವರು, ಒಮ್ಮೊಮ್ಮೆ ಹೀಗಾಗುತ್ತೆ. ಯಾರೂ ಆತಂಕಪಡುವ ಅಗತ್ಯವಿಲ್ಲ, ಭಗವಂತನ ಆಶೀರ್ವಾದವಿದೆ ಎಂದು ಹೇಳಿದ್ದಾರೆ.

ಕೆಲಸದ ಒತ್ತಡದಿಂದ ಒಮ್ಮೊಮ್ಮೆ ಹೀಗಾಗುತ್ತದೆ: ಚಿಕಿತ್ಸೆ ಬಳಿಕ ಹೆಚ್‌ಡಿ ಕುಮಾರಸ್ವಾಮಿ ಮಾತು
ಕೆಲಸದ ಒತ್ತಡದಿಂದ ಒಮ್ಮೊಮ್ಮೆ ಹೀಗಾಗುತ್ತದೆ: ಚಿಕಿತ್ಸೆ ಬಳಿಕ ಹೆಚ್‌ಡಿ ಕುಮಾರಸ್ವಾಮಿ ಮಾತು

Updated on: Jul 28, 2024 | 9:45 PM

ಬೆಂಗಳೂರು, ಜುಲೈ 28: ಕೆಲಸದ ಒತ್ತಡದಿಂದ ಒಮ್ಮೊಮ್ಮೆ ಮೂಗಿನಲ್ಲಿ ರಕ್ತಸ್ರಾವ ಆಗುತ್ತದೆ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಸುಮಾರು 4 ಗಂಟೆ ಕಾಲ ಚಿಕಿತ್ಸೆ ಬಳಿಕ ಜಯನಗರದ ಅಪೋಲೊ ಆಸ್ಪತ್ರೆ ಬಳಿ ಮಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ರಾಂತಿ ಪಡೆಯುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ. ನನ್ನ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿಲ್ಲ. ಯಾರು ಆತಂಕ ಪಡುವ ಅಗತ್ಯವಿಲ್ಲ. ಭಗವಂತನ ಆಶೀರ್ವಾದ ಇದೆ ಎಂದು ಹೇಳಿದ್ದಾರೆ. ಸದ್ಯ ಜಯನಗರದ ಅಪೋಲೊ ಆಸ್ಪತ್ರೆಯಿಂದ ತೆರಳಿದ್ದಾರೆ.

ಮೂರು ಬಾರಿ ಹೃದಯದ ವಾಲ್ ಬದಲಾವಣೆ ಆಗಿದೆ. ಇದಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಒತ್ತಡ, ವಿಶ್ರಾಂತಿ ಪಡೆಯದೆ ಕೆಲಸ ಮಾಡಿದ್ದರಿಂದ ಈ ರೀತಿ ಆಗಿದೆ. ರಾಜ್ಯದ ಜನರಿಗೆ ಕೆಲಸ ಮಾಡಿಕೊಡಬೇಕು ಅಂತ ಓಡಾಡುತ್ತಿದ್ದೆ. ಒತ್ತಡವನ್ನ ಕಡಿಮೆ ಮಾಡಿಕೊಳ್ಳಿ ಅಂತ ವೈದ್ಯರ ಹೇಳಿದ್ದಾರೆ ಎಂದರು.

ಇದನ್ನೂ ಓದಿ: ಹೆಚ್​ಡಿ ಕುಮಾರಸ್ವಾಮಿ ಮೂಗಿನಲ್ಲಿ ರಕ್ತಸ್ರಾವ: ಆತಂಕ ಪಡುವ ಅಗತ್ಯವಿಲ್ಲವೆಂದ ನಿಖಿಲ್, ವೈದ್ಯರು ಹೇಳಿದ್ದಿಷ್ಟು

ಬೆಂಗಳೂರಿನಿಂದ ಮೈಸೂರು ಪಾದಯಾತ್ರೆಗೆ ಇನ್ನೂ 1 ವಾರ ಇದೆ. ಪಾದಯಾತ್ರೆಯಲ್ಲಿ ಭಾಗಿಯಾಗುವ ಬಗ್ಗೆ ಆಮೇಲೆ ನೋಡೋಣ. ಅಂತಹ ಸಂದರ್ಭ ಬಂದರೆ ನಿಖಿಲ್‌ ಪಾದಯಾತ್ರೆಯಲ್ಲಿ ಭಾಗಿ ಆಗುತ್ತಾರೆ. ನಾಳೆ ರಾಜ್ಯಸಭೆಯಲ್ಲಿ ಕಾವೇರಿ ನದಿ ನೀರಿನ ಪ್ರಸ್ತಾಪ ಬಂದೇ ಬರುತ್ತೆ. ತಮಿಳುನಾಡಿನ ಸಂಸದರು ಭಾಷಣಕ್ಕೆ ಹಲವು ವರ್ಷಗಳಿಂದ ಅಡ್ಡಿಪಡಿಸ್ತಿದ್ದಾರೆ. ನಾನು ಈ ವೇಳೆ ಸದನದಲ್ಲಿ ಇರಬೇಕು ಅನ್ನೋದು ನನ್ನ ಆಸೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​ 

ಹೆಚ್.ಡಿ. ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾದ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ.
ಚಿಕಿತ್ಸೆ ಪಡೆಯುತ್ತಿರುವ ಕುಮಾರಸ್ವಾಮಿ ಅವರು ಶೀಘ್ರ ಚೇತರಿಸಿಕೊಂಡು ಮತ್ತೆ ತಮ್ಮ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಮೂಗಿನಿಂದ ರಕ್ತ ನೋಡಿ ಶಾಕ್ ಆಗಿ ನಿಂತ ಬಿಎಸ್​ ಯಡಿಯೂರಪ್ಪ

ಕುಮಾರಸ್ವಾಮಿ ಭೇಟಿ ಬಳಿಕ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಅವರು ಆರಾಮಾಗಿದ್ದಾರೆ. ಕೆಲಸದ ಒತ್ತಡವಿತ್ತು. ಹಾಗಾಗಿ ಅವರಿಗೆ ಸ್ವಲ್ಪ ಆಯಾಸವಾಗಿದೆ. ಯಾರು ಗಾಬರಿ ಪಡುವ ಅಗತ್ಯ ಇಲ್ಲ. ಕುಮಾರಸ್ವಾಮಿಯವರನ್ನ ಮಾತಾಡಿಸಿಕೊಂಡು ಬಂದೆ. ಸದ್ಯ ಆರಾಮಾಗಿದ್ದಾರೆ ಎಂದು ಹೇಳಿದ್ದಾರೆ.

ನಾನೂ ಕೂಡ ಪರೀಕ್ಷೆ ಮಾಡ್ದೆ, ಏನು ಸಮಸ್ಯೆ ಇಲ್ಲ: ಡಾ.ಮಂಜುನಾಥ್

ಕುಮಾರಸ್ವಾಮಿಯವರಿಗೆ ಈಗ ಏನೂ ಸಮಸ್ಯೆ ಇಲ್ಲ ಎಂದು ಸಂಸದ ಡಾ.ಮಂಜುನಾಥ್ ಹೇಳಿಕೆ ನೀಡಿದ್ದು, ಇಎನ್​ಟಿ ವೈದ್ಯರು ಹೆಚ್​ಡಿಕೆರನ್ನು ಪರೀಕ್ಷೆ ಮಾಡಿದ್ದಾರೆ. ನಾನೂ ಕೂಡ ಪರೀಕ್ಷೆ ಮಾಡ್ದೆ, ಏನು ಸಮಸ್ಯೆ ಇಲ್ಲ. ರಕ್ತಹೆಪ್ಪುಗಟ್ಟದಂತೆ ತಡೆಗಟ್ಟುವ ಮಾತ್ರೆ ತೆಗೆದುಕೊಳ್ತಿದ್ರು ಹೀಗಾಗಿ ಕೆಲವೊಮ್ಮೆ ಹೀಗೆ ಆಗುತ್ತೆ. ಅರ್ಧ ಗಂಟೆಯಲ್ಲಿ ಅವರು ಮನೆಗೆ ಹೋಗುತ್ತಾರೆ ಎಂದಿದ್ದಾರೆ.

ನಾಳೆ ಬೆಳಗ್ಗೆ ಫ್ಲೈಟ್​ಗೆ ಅವರು ದೆಹಲಿಗೆ ಹೋಗ್ತಾರೆ. ಹಿಂದೆ ಇಂಗ್ಲೆಂಡ್​ಗೆ ಹೋಗಿದ್ದಾಗಲೂ ಹೀಗೆ ಆಗಿತ್ತು. ಮುಂದೆ ಅವರಿಗೆ ಮಾತ್ರೆಗಳನ್ನ ಕಡಿಮೆ ಮಾಡುತ್ತೇವೆ. ಬ್ಲಡ್ ಪ್ರೆಷರ್ ಕೂಡ ನಾರ್ಮಲ್ ಇದೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:29 pm, Sun, 28 July 24