ಒಂದೇ ದಿನಕ್ಕೆ ಬಿಜೆಪಿ ಖಜಾನೆಗೆ 335 ಕೋಟಿ ರೂ ಹೇಗೆ ಬಂತು? ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ಕಲಬುರಗಿಯ ಎನ್​ವಿ ಮೈದಾನದಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಮಗೆ ಖರ್ಚು ಮಾಡಲು ಹಣ ಇಲ್ಲ. ಖಾತೆ ಬಂದ್ ಮಾಡಿಸಿದ್ದಾರೆ. ಆದರೆ ಒಂದೇ ದಿನಕ್ಕೆ ಬಿಜೆಪಿ ಖಜಾನೆಗೆ 335 ಕೋಟಿ ರೂಪಾಯಿ ಬಂದಿದೆ. ಬಿಜೆಪಿಯವರಿಗೆ ಇಷ್ಟು ಬೇಗ ಅಷ್ಟು ದುಡ್ಡು ಹೇಗೆ ಬಂತು ಎಂದು ಪ್ರಶ್ನೆಸಿದ್ದಾರೆ.

ಒಂದೇ ದಿನಕ್ಕೆ ಬಿಜೆಪಿ ಖಜಾನೆಗೆ 335 ಕೋಟಿ ರೂ ಹೇಗೆ ಬಂತು? ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Edited By:

Updated on: Mar 13, 2024 | 4:38 PM

ಕಲಬುರಗಿ, ಮಾರ್ಚ್​ 13: ಒಂದೇ ದಿನಕ್ಕೆ ಬಿಜೆಪಿ ಖಜಾನೆಗೆ 335 ಕೋಟಿ ರೂಪಾಯಿ ಬಂದಿದೆ. ಬಿಜೆಪಿಯವರಿಗೆ ಇಷ್ಟು ಬೇಗ ಅಷ್ಟು ದುಡ್ಡು ಹೇಗೆ ಬಂತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಶ್ನೆ ಮಾಡಿದ್ದಾರೆ. ನಗರದ ಎನ್​ವಿ ಮೈದಾನದಲ್ಲಿ ನಡೆಯುತ್ತಿರುವ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮಗೆ ಖರ್ಚು ಮಾಡಲು ಹಣ ಇಲ್ಲ. ಖಾತೆ ಬಂದ್ ಮಾಡಿಸಿದ್ದಾರೆ. ಐಟಿ ಇಲಾಖೆ ಮೂಲಕ ನಮಗೆ ದಂಡ ಹಾಕಿಸಿ ಲಾಕ್ ಮಾಡಿದ್ದಾರೆ. ಆದರೆ ಬಿಜೆಪಿಯವರಿಗೆ ಇಷ್ಟು ಬೇಗ ಅಷ್ಟು ದುಡ್ಡು ಹೇಗೆ ಬಂತು ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಪ್ರಧಾನಿ ಮೋದಿ ಒಂದು ನೊಣವನ್ನೂ ಹೊಡೆದಿಲ್ಲ, ಪ್ರಚಾರನೇ ಜಾಸ್ತಿ. ಎಲ್ಲಿ ಸಿಕ್ಕಿದ್ರೆ ಅಲ್ಲಿ ಬೆಂಕಿ ಇಡುವ ಕೆಲಸವನ್ನು ಮಾಡುತ್ತಾರೆ. ಹೇಳಿದಂತೆ ಮಾಡೋದು ಕಷ್ಟ, ಬೆಂಕಿ ಹಚ್ಚೋದು ಸುಲಭ. ಗುಜರಾತ್‌ನಲ್ಲಿ 5 ವರ್ಷದಲ್ಲಿ 500 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಮೋಸಗಾರರು, ಬಿಜೆಪಿ ನಾಯಕರ ಮಾತಿಗೆ ಮರಳಾಗಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುವುದಿಲ್ಲ: ಸಂಸದ ಪ್ರತಾಪ್​ ಸಿಂಹ ಸ್ಪಷ್ಟನೆ

ಸಂವಿಧಾನ ರಕ್ಷಣೆ ಜನರ ಕೆಲಸ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಕೊಡುತ್ತೇವೆ. ಈ ಬಾರಿ ಕಲಬುರಗಿಯಲ್ಲಿ ಕಾಂಗ್ರೆಸ್​ ಗೆಲ್ಲಿಸ್ತೇವೆಂದು ಜನ ಹೇಳ್ತಿದ್ದಾರೆ. ಚುನಾವಣೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂದರು.

ನುಡಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆದಿದೆ. ನಡಿದಂತೆ ನಡೆಯೋದು ಅಷ್ಟು ಸುಲಭವಲ್ಲ. ಮೋದಿ ಕೂಡ ಬಹಳ ಗ್ಯಾರಂಟಿಗಳನ್ನ ಕೊಟ್ಟಿದ್ದರು. ಮೋದಿ ಕಲಬುರಗಿಗೆ ಮಾರ್ಚ್​​ 18 ರಂದು ಬರುತ್ತಿದ್ದಾರೆ. ಬರಲೀ, ಬಂದ್ರೆ ಏನಾದ್ರು ಕೊಟ್ಟು ಹೋಗಬೇಕಲ್ಲ. ಮೋದಿ ಈ ಭಾಗಕ್ಕೆ ಏನ್ ಕೊಟ್ಟಿದ್ದಾರೆ ಹೇಳಿ ಎಂದು ನೆರೆದ ಜನತೆಯನ್ನ ಕೇಳಿದರು.

ಇವರಿಗೆ ಓಟ್ ಕೊಡಬೇಕಾ ಎಂದ ಮಲ್ಲಿಕಾರ್ಜುನ ಖರ್ಗೆ

ನಮ್ಮ ಭಾಗದ ಬಗ್ಗೆ ಮೋದಿ ಕೆಲಸ ಮಾಡಲ್ಲ‌. ಎಲ್ಲಿ ರೈಲ್ವೆ ಸ್ಟೇಷನ್ ಕಂಡರು ಹಸಿರು ಧ್ವಜ, ಮೋದಿ ತೋರಿಸುತ್ತಾರೆ. ಬರೀ ಧ್ವಜ ತೋರಿಸಿದರೆ ಅಭಿವೃದ್ಧಿ ಆಗುತ್ತಾ? ಹಳಿ ನಮ್ಮದೂ ಅದರ ಮೇಲೆ ಓಡಾಡುವುದು ನಿಮ್ಮ ಬರೀ ಡಬ್ಬಿ ಮಾತ್ರ. ನಾವು ಪಕ್ಷದ ಮೇಲೆ ಕೆಲಸ ಮಾಡಿಲ್ಲ. ಜನ ಹಿತಕ್ಕಾಗಿ ಕೆಲಸ ಮಾಡಿದ್ದೇವೆ‌. ನನ್ನ ಅವಧಿಯಲ್ಲಿ ಹಲವು ಕಡೆಗಳಲ್ಲಿ ನಾವು ರೈಲುಗಳನ್ನ ಬಿಟ್ಟಿದ್ದೇವೆ‌. ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳಕ್ಕೆ ಏನ್ ಮಾಡಿದ್ದಾರೆ‌. ಇವರಿಗೆ ಓಟ್ ಕೊಡಬೇಕಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್​ಗೆ 3 ಕ್ಷೇತ್ರ ಬಿಟ್ಟುಕೊಟ್ಟ ಬಿಜೆಪಿ: ಯಾವುವು ಎಂದು ಬಹಿರಂಗಪಡಿಸಿದ ಎಚ್​ಡಿಕೆ

ನೀವು ನಮಗೆ ಬೈದರೂ ಬೈಗುಳ ತಿಂತೇವೆ, ಆದರೆ ನೀವು ಕೆಲಸ ಮಾಡಿ. ಮೋದಿ ತಮಗೆಲ್ಲಿ ಬೇಕು ಅಲ್ಲಿ ಯೋಜನೆಗಳನ್ನ ತೆಗೆದುಕೊಂಡು ಹೋಗುತ್ತಾರೆ. ಮೋದಿ ಗ್ಯಾರಂಟಿ ಏನ್? ಉದ್ಯೋಗ ಕೊಡ್ತಿನಿ ಅಂದ್ರು ಕೊಡಲಿಲ್ಲ. ಎಂಎಸ್​ಪಿ ಕೊಡ್ತಿವಿ ಅಂತಾ ಅಂದ್ರು ಕೊಡಲಿಲ್ಲ. ನಾವು ಅಧಿಕಾರಕ್ಕೆ ಬಂದರೆ ಎಂಎಸ್​ಪಿ  ಜಾರಿ ಮಾಡುತ್ತೇವೆ. ಮೋದಿ ಹೈತೋ ಮುಮಕೀನ್ ಹೈ ಅಂತಾರೇ‌, ಅರೇ ಭಾಯ್ ಆಪ್ ಹೈತೋ ಕಾಮ್ ಕ್ಯೂಂ ನಹಿ ಹೋರಾ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:38 pm, Wed, 13 March 24

Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us