ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಮೊದಲ ಗುರಿ ಏನಾಗಿತ್ತು ಗೊತ್ತೇ? ವೈರಲ್ ಆಗ್ತಿದೆ ಪೋಸ್ಟ್

ರಸ್ತೆ ಅಪಘಾತದಲ್ಲಿ ನಿಧನರಾದ ಐಎಎಸ್ ಮಹಾಂತೇಶ್ ಬೀಳಗಿ ಅವರ ಬಾಲ್ಯದ ಕಷ್ಟದ ದಿನಗಳ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ತಾಯಿ ವಿಧವಾ ವೇತನ ಪಡೆಯಲು ಲಂಚ ನೀಡಬೇಕಾಗಿ ಬಂದ ಸನ್ನಿವೇಶ ಅವರ ಮನಸ್ಸಲ್ಲಿ ಆಳವಾಗಿ ಬೇರೂರಿತ್ತು. ಇದೇ ಪ್ರೇರಣೆಯಿಂದ ಜಿಲ್ಲಾಧಿಕಾರಿಯಾದ ಅವರು ಪಿಂಚಣಿ ಅದಾಲತ್ ಯೋಜನೆ ಜಾರಿಗೆ ತಂದರು ಎನ್ನಲಾಗಿದೆ. ಈ ವಿಚಾರವಾಗಿ ಅವರ ಬರಹಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಮೊದಲ ಗುರಿ ಏನಾಗಿತ್ತು ಗೊತ್ತೇ? ವೈರಲ್ ಆಗ್ತಿದೆ ಪೋಸ್ಟ್
ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ

Updated on: Nov 26, 2025 | 12:06 PM

ಬೆಂಗಳೂರು, ನವೆಂಬರ್ 26: ರಸ್ತೆ ಅಪಘಾತದಲ್ಲಿ ಮಂಗಳವಾರ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (IAS Officer Mahantesh Bilagi) ಬಾಲ್ಯ ಜೀವನ ಬಹಳ ಕಷ್ಟದಿಂದ ಕೂಡಿತ್ತು ಎಂಬುದನ್ನು ಅವರ ಬಾಲ್ಯ ಸ್ನೇಹಿತರು ನೆನಪಿಸಿಕೊಂಡಿದ್ದಾರೆ. ಮತ್ತೊಂದೆಡೆ, ಬಡತನದ ಬೇಗೆಯಿಂದ ಬಳಲಿದ್ದ ಮಹಾಂತೇಶ್ ಬೀಳಗಿ, ತಾಯಿ ವಿಧವಾ ವೇತನಕ್ಕಾಗಿ ಲಂಚ ನೀಡಿದ್ದನ್ನು ನೆನಪಿಸಿಕೊಂಡಿರುವ ಮತ್ತು ತಮ್ಮ ಮೊದಲ ಗುರಿಯ ಬಗ್ಗೆ ಉಲ್ಲೇಖಿಸಿದ್ದು ಎನ್ನಲಾದ ಬರಹದ ಸಾಲುಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮಹಾಂತೇಶ್ ಬೀಳಗಿ ಅವರು ಜಿಲ್ಲಾಧಿಕಾರಿ ಆಗಿದ್ದ ಸಂದರ್ಭ ಬರೆದುಕೊಂಡಿರುವ ಬರಹ ಇದು ಎನ್ನಲಾಗಿದೆ.

ಏನು ಹೇಳಿದ್ದರು ಮಹಾಂತೇಶ್ ಬೀಳಗಿ?

‘‘ನನ್ನ ತಂದೆ ನಾನು 5 ವರ್ಷದ ವಯಸ್ಸಿನವನಾಗಿದ್ದಾಗ ಅಕಾಲಿಕ ಮರಣ ಹೊಂದಿದ್ದರು. ಆಗ ನಮಗೆ ಕಿತ್ತು ತಿನ್ನುವ ಬಡತನ. ಆ ಸಮಯದಲ್ಲಿ ನನ್ನ ತಾಯಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದಾಗ ಅನೇಕ ದಿನಗಳವರೆಗೆ ಸಂಬಂಧಪಟ್ಟ ಅಧಿಕಾರಿಗಳು ಅಲೆದಾಡಿಸಿದ್ದರು. ಕೊನೆಗೆ ನನ್ನ ತಾಯಿ 25 ರೂಪಾಯಿ ವಿಧವಾ ವೇತನ ಪಡೆಯಲು ನೂರು ರೂಪಾಯಿಗಳನ್ನು ಲಂಚವಾಗಿ ನೀಡಿದ್ದರು. ಆ ಮೇಲೆ ನನ್ನ ತಾಯಿಗೆ ವಿಧವಾ ವೇತನದ ಆದೇಶ ಪತ್ರವನ್ನು ನೀಡಿರುತ್ತಾರೆ’’ ಎಂದು ಬೀಳಗಿ ಬರೆದುಕೊಂಡಿದ್ದಾರೆ.

‘‘ಇದನ್ನೆಲ್ಲ ಗಮನಿಸಿ, ತಾಯಿಗೆ ಆದ ಅನ್ಯಾಯ ಸಮಾಜದ ಬೇರೆ ತಾಯಂದಿರಿಗೆ ಆಗಬಾರದು ಎಂದು ಸಂಕಲ್ಪ ಮಾಡಿದೆ. ಕಷ್ಟಪಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಹಂತ ಹಂತವಾಗಿ ಬೆಳೆದು ನಾನು ಜಿಲ್ಲಾಧಿಕಾರಿಯಾಗಿದ್ದೇನೆ. ನನ್ನ ಮೊದಲ ಗುರಿ ನನ್ನ ತಾಯಿ ಅನುಭವಿಸಿದ ಕಷ್ಟವನ್ನು ಬೇರೆ ತಾಯಂದಿರು ಅನುಭವಿಸಬಾರದು, ಈ ಹಿನ್ನೆಲೆಯಲ್ಲಿ ನಾನು ಜಿಲ್ಲಾಧಿಕಾರಿಯಾದ ತಕ್ಷಣ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಜಾರಿಗೆ ತಂದೆ. ಇದರ ಉದ್ದೇಶ ತಹಶೀಲ್ದಾರ್ ಕಚೇರಿ ಜನರ ಮನೆಬಾಗಿಲಿಗೆ ಎಂಬುದು. ಇದರ ಅರ್ಥ ನಮ್ಮ ಅಧಿಕಾರಿಗಳು ಜನರ ಮನೆಬಾಗಿಲಿಗೆ ಹೋಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗಬೇಕಾಗಿರುವ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸಬೇಕು ಎಂಬುದು’’ ಎಂದು ಅವರು ಬರೆದಿದ್ದರು.

ಇದನ್ನೂ ಓದಿ: ಹೊತ್ತಿನ ಊಟಕ್ಕೂ ಪರದಾಟ, ಕಿರಾಣಿ ಅಂಗಡಿಯಲ್ಲಿ ಕೆಲಸ: ಮಹಾಂತೇಶ್ ಬೀಳಗಿ ಐಎಎಸ್ ಅಧಿಕಾರಿಯಾಗಲು ಪಟ್ಟ ಪಾಡು ಒಂದೇ ಎರಡೇ!

ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಚಾಚೂತಪ್ಪದೆ ನಿರ್ವಹಿಸಬೇಕಾಗಿ ಸೂಚಿಸಿರುತ್ತೇನೆ ಎಂದು ಮಹಾಂತೇಶ್ ಬೀಳಗಿ ಅಂದು ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದರು. ಸದ್ಯ, ಅಂದು ಮಹಾಂತೇಶ ಬೀಳಗಿ ಬರೆದಿದ್ದ ಬರಹದ ಪ್ರತಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ