ನ್ಯಾ.ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ: ತಮ್ಮದೇ ಶಾಸಕರ ಮನೆಗೆ ಮುತ್ತಿಗೆ ಹಾಕುವಂತೆ ಸಚಿವ ಮುನಿಯಪ್ಪ ಕರೆ

ನ್ಯಾ.ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ವಿಚಾರವಾಗಿ ತೀವ್ರ ಸ್ವರೂಪದ ಹೋರಾಟ ನಡೆಸುವಂತೆ ಮಾದಿಗ ಸಮುದಾಯದ ಮುಖಂಡರಿಗೆ ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಕರೆ ನೀಡಿದ್ದಾರೆ. ತಮ್ಮದೇ ಸರ್ಕಾರ ಇದ್ದರೂ ಶಾಸಕರ ಮನೆಗೆ ಮುತ್ತಿಗೆ ಹಾಕುವಂತೆ ಕರೆ ನೀಡಿದ್ದಾರೆ.

ನ್ಯಾ.ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ: ತಮ್ಮದೇ ಶಾಸಕರ ಮನೆಗೆ ಮುತ್ತಿಗೆ ಹಾಕುವಂತೆ ಸಚಿವ ಮುನಿಯಪ್ಪ ಕರೆ
ಆಹಾರ ಇಲಾಖೆ ಸಚಿವ ಮುನಿಯಪ್ಪ
Edited By:

Updated on: Nov 06, 2023 | 8:32 PM

ಬೆಂಗಳೂರು, ನವೆಂಬರ್​​​​ 06: ನ್ಯಾ.ಸದಾಶಿವ ಆಯೋಗದ (Justice Sadashiva Commission) ವರದಿಯಂತೆ ಒಳ ಮೀಸಲಾತಿ ವಿಚಾರವಾಗಿ ತೀವ್ರ ಸ್ವರೂಪದ ಹೋರಾಟ ನಡೆಸುವಂತೆ ಮಾದಿಗ ಸಮುದಾಯದ ಮುಖಂಡರಿಗೆ ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಕರೆ ನೀಡಿದ್ದಾರೆ. ತಮ್ಮದೇ ಸರ್ಕಾರ ಇದ್ದರೂ ಶಾಸಕರ ಮನೆಗೆ ಮುತ್ತಿಗೆ ಹಾಕುವಂತೆ ಕರೆ ನೀಡಿದ್ದಾರೆ. ನ್ಯಾ.ಸದಾಶಿವ ಆಯೋಗ, ಕಾಂತರಾಜ್ ವರದಿ ವಿಚಾರವಾಗಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದವರ ಹೋರಾಟ ಒಗ್ಗಟ್ಟಿನಲ್ಲಿ ಸಾಗಬೇಕು ಎಂದು ಹೇಳಿದ್ದಾರೆ.

ನಿಮ್ಮ ಕ್ಷೇತ್ರಗಳ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಿ. ಹೋರಾಟ ತೀವ್ರಸ್ವರೂಪ ಕಾಣಬೇಕು, ಆಗ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ನಾನು ಸಚಿವನಾಗಿ ಈ ಮಾತು ಹೇಳ್ತಿದ್ದೇನೆ, ಹೀಗೆ ಹೇಳುವ ಸಂದರ್ಭ ಬಂದಿದೆ. ನಾನು ಈಗ ಸಚಿವನಾಗಿದ್ದೇನೆ, ನಾನಿದ್ದ ಮೇಲೆ ಬೇರೆಯವರ ಆಟ ನಡೆಯಲ್ಲ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ ಎಂದರು.

ಇದನ್ನೂ ಓದಿ: ಸರ್ಕಾರಕ್ಕೆ ಸಂಕಷ್ಟ: ಕಾಂತರಾಜ್, ಸದಾಶಿವ ಆಯೋಗ ವರದಿ ಅನುಷ್ಠಾನಕ್ಕೆ ಒತ್ತಡ

ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿತು. ಆದರೆ ವೈಜ್ಞಾನಿಕವಾಗಿ ಒಳ ಮೀಸಲಾತಿ ಹಂಚಿಕೆ ಮಾಡಿಲ್ಲ. ಇದು ಸುಪ್ರೀಂಕೋರ್ಟ್​ನಲ್ಲಿ ನಿಲ್ಲೋದಿಲ್ಲ. ಯಾಕೆಂದರೆ ಮೀಸಲಾತಿ ಪ್ರಮಾಣ 50% ಮೀರುವ ಹಾಗಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಾರಿ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ತಮ್ಮ ಸಮುದಾಯದ ನಾಯಕರ ಬಗ್ಗೆ ಶಾಸಕಿ ರೂಪಾ ಶಶಿಧರ್ ಬೇಸರ

ಸಭೆಯಲ್ಲಿ ಶಾಸಕಿ ರೂಪಾ ಶಶಿಧರ್​ ಮಾತನಾಡಿ, ತಮ್ಮ ಸಮುದಾಯದ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷದ ಸರ್ಕಾರವೇ ಅಧಿಕಾರದಲ್ಲಿದೆ. ಒಳ ಮೀಸಲಾತಿ ಸಮುದಾಯಕ್ಕೆ ಅಗತ್ಯ ಅಂತ ಗೊತ್ತಿದ್ರೂ ಒಟ್ಟಿಗೆ ಇಚ್ಛಾಶಕ್ತಿ ಪ್ರದರ್ಶನ ಆಗುತ್ತಿಲ್ಲ. ಒಳ ಮೀಸಲಾತಿ ಬೇಕು ಅಂತ ನಮ್ಮವರೇ ಒತ್ತಡ ತರಬೇಕಿತ್ತು. ಆ ಕೆಲಸವನ್ನು ನಮ್ಮ ಸರ್ಕಾರದಲ್ಲೇ ಯಾಕೆ ಯಾರೂ ಮಾಡಿಲ್ಲ ಅಂತ ಗೊತ್ತಿಲ್ಲ ಎಂದಿದ್ದಾರೆ.

ಮೀಸಲಾತಿ ತಡೆ ಹಿಡಿಯೋದು ಒಂದು ಜನಾಂಗದ ಹತ್ಯೆ ಮಾಡಿದಂತೆ: ಸದಸ್ಯ ಎಲ್.ಹನುಮಂತಯ್ಯ

ಸಭೆಯಲ್ಲಿ ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ನ್ಯಾ.ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ತಡೆ ಹಿಡಿಯೋದು ಒಂದು ಜನಾಂಗದ ಹತ್ಯೆ ಮಾಡಿದಂತೆ. ಒಳಮೀಸಲಾತಿ ಬಗ್ಗೆ ಮಾದಿಗ ಸಮುದಾಯದವರು ಹೊರತುಪಡಿಸಿ ಉಳಿದ ಪರಿಶಿಷ್ಟ ಸಮುದಾಯದವರು ಮೌನವಾಗಿದ್ದಾರೆ. ಇದು ನಮ್ಮ ಮುಂದೆ ಇರುವ ಇಕ್ಕಟ್ಟು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us