Belagavi session: ಸುವರ್ಣಸೌಧದಲ್ಲಿ ಸಾವರ್ಕರ್ ಭಾವಚಿತ್ರ ತೆಗೆದು ನೆಹರೂ ಫೋಟೊ ಹಾಕಲಿದೆಯಾ ಕಾಂಗ್ರೆಸ್ ಸರ್ಕಾರ?

| Updated By: ಗಣಪತಿ ಶರ್ಮ

Updated on: Dec 05, 2023 | 2:53 PM

ಬೆಳಗಾವಿ ಅಧಿವೇಶನ 2023: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವೀರ ಸಾವರ್ಕರ್ ಭಾವಚಿತ್ರವನ್ನು ಹಿಂದಿನ ಬಿಜೆಪಿ ಸರ್ಕಾರ ಅಳವಡಿಸಿದ್ದು ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅದನ್ನು ಈಗಿನ ಕಾಂಗ್ರೆಸ್ ಸರ್ಕಾರ ತೆರವು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮಧ್ಯೆ, ಸುವರ್ಣಸೌಧದಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರ ಅಳವಡಿಸುವ ಪ್ರಸ್ತಾವ ಇದೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.

Belagavi session: ಸುವರ್ಣಸೌಧದಲ್ಲಿ ಸಾವರ್ಕರ್ ಭಾವಚಿತ್ರ ತೆಗೆದು ನೆಹರೂ ಫೋಟೊ ಹಾಕಲಿದೆಯಾ ಕಾಂಗ್ರೆಸ್ ಸರ್ಕಾರ?
ಬೆಳಗಾವಿಯ ಸುವರ್ಣ ಸೌಧದಲ್ಲಿ ವೀರ ಸಾವರ್ಕರ್ ಹಾಗೂ ಇತರರ ಭಾವಚಿತ್ರ
Follow us on

ಬೆಂಗಳೂರು, ಡಿಸೆಂಬರ್ 5: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (Suvarna Vidhan Soudha) ಸ್ವಾತಂತ್ರ್ಯ ಹೋರಾಟಗಾರ, ಹಿಂದುತ್ವವಾದಿ ವೀರ ಸಾವರ್ಕರ್ (Veer Savarkar) ಅವರ ಭಾವಚಿತ್ರ ಅಳವಡಿಸಿ ಒಂದು ವರ್ಷ ಕಳೆದಿದ್ದು, ಅದನ್ನು ತೆರವು ಮಾಡುವಂತೆ ಕಾಂಗ್ರೆಸ್ (Congress) ಮುಖಂಡರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಆ ಬಗ್ಗೆ ಸ್ಪೀಕರ್ ಯುಟಿ ಖಾದರ್ ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ನಾಯಕರ ವಿರೋಧದ ನಡುವೆ ಬಿಜೆಪಿ ಸರ್ಕಾರ ಸಾವರ್ಕರ್ ಭಾವಚಿತ್ರವನ್ನು ಅನಾವರಣಗೊಳಿಸಿತ್ತು. ಇದನ್ನು ವಿರೋಧಿಸಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಕಳೆದ ವರ್ಷ ಸುವರ್ಣಸೌಧದ ಮೆಟ್ಟಿಲುಗಳಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರು.

ಸುವರ್ಣಸೌಧದಲ್ಲಿ ನೆಹರೂ ಭಾವಚಿತ್ರ?

ಸುವರ್ಣಸೌಧದಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರ ಅಳವಡಿಸುವ ಪ್ರಸ್ತಾವನೆ ಇದ್ದು, ಈ ಬಗ್ಗೆ ಸದನದ ಸದಸ್ಯರೊಂದಿಗೆ ಚರ್ಚಿಸಲಾಗುವುದು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. ಇದರ ನಂತರ ಸಾವರ್ಕರ್ ಭಾವಚಿತ್ರ ವಿಚಾರದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ವರದಿಗಳ ಪ್ರಕಾರ, ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಭಾವಚಿತ್ರಗಳನ್ನು ಅಳವಡಿಸಲು ನಿಯಮಗಳನ್ನು ರೂಪಿಸುವಂತೆ ಸ್ಪೀಕರ್ ಅವರಿಗೆ ಮನವಿ ಮಾಡಲಿದ್ದಾರೆ.

ಸಾವರ್ಕರ್ ಅವರ ಭಾವಚಿತ್ರವನ್ನು ಅಳವಡಿಸುವಾಗ ಬಿಜೆಪಿ ಸರ್ಕಾರವು ನಿಯಮಗಳನ್ನು ಪಾಲಿಸಿಲ್ಲ ಎಂದು ಕಾಂಗ್ರೆಸ್ ನಾಯಕರು ಅಧಿವೇಶನದಲ್ಲಿ ವಾದ ಮಂಡಿಸಲು ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಭಾವಚಿತ್ರ ಅಳವಡಿಸಿರುವ ಕ್ರಮದ ಬಗ್ಗೆ ಸ್ಪೀಕರ್‌ ಸ್ಪಷ್ಟನೆ ಪಡೆಯಲು ಕಾಂಗ್ರೆಸ್ ಶಾಸಕರು ಮುಂದಾಗಿದ್ದಾರೆ.

ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಬಿ.ಆರ್.ಅಂಬೇಡ್ಕರ್, ಬಸವಣ್ಣ, ಮಹಾತ್ಮ ಗಾಂಧಿ ಮತ್ತು ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಗಳ ಜೊತೆಗೆ ಸಾವರ್ಕರ್ ಅವರ ಭಾವಚಿತ್ರಗಳನ್ನು ಕಳೆದ ವರ್ಷ ಡಿಸೆಂಬರ್ 19 ರಂದು ಅಂದಿನ ಬಿಜೆಪಿ ಸರ್ಕಾರ ಅನಾವರಣಗೊಳಿಸಿತ್ತು

ಇದನ್ನೂ ಓದಿ: ವಿದ್ಯುತ್ ದೀಪಗಳ ಅಲಂಕಾರದಲ್ಲಿ ಕಂಗೊಳಿಸುತ್ತಿದೆ ಸುವರ್ಣ ವಿಧಾನಸೌಧ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಶಾಲಾ ಪಠ್ಯಪುಸ್ತಕಗಳಿಂದ ಸಾವರ್ಕರ್ ಸೇರಿದಂತೆ ಹಲವಾರು ವಿವಾದಾತ್ಮಕ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ಇದೀಗ ಸುವರ್ಣಸೌಧದಲ್ಲಿರುವ ಸಾವರ್ಕರ್ ಭಾವಚಿತ್ರವನ್ನು ಕೂಡ ತೆರವುಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Tue, 5 December 23