IT Raid: ಕೆಜಿಎಫ್​ ಬಾಬು ನಿವಾಸದಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ತು 5000 ರೇಷ್ಮೆ‌ ಸೀರೆ, 2000ಕ್ಕೂ ಹೆಚ್ಚು ಡಿಡಿ

ಕೆಜಿಎಫ್​ ಬಾಬು ಅವರ ಬೆಂಗಳೂರಿನ ನಿವಾಸದ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, 2000ಕ್ಕೂ ಹೆಚ್ಚು ಡಿಮಾಂಡ್ ಡ್ರಾಫ್ಟ್, 5000 ರೇಷ್ಮೆ‌ ಸೀರೆಗಳನ್ನು ಜಪ್ತಿ ಮಾಡಿದ್ದಾರೆ.

IT Raid: ಕೆಜಿಎಫ್​ ಬಾಬು ನಿವಾಸದಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ತು 5000 ರೇಷ್ಮೆ‌ ಸೀರೆ, 2000ಕ್ಕೂ ಹೆಚ್ಚು ಡಿಡಿ
ಕೆಜಿಎಫ್ ಬಾಬು

Updated on: Apr 19, 2023 | 4:18 PM

ಮುಖ್ಯಾಂಶಗಳು

  • ಕೆಜಿಎಫ್​ ಬಾಬು ಅವರ ಬೆಂಗಳೂರಿನ ನಿವಾಸದ ಮೇಲೆ ಐಟಿ ದಾಳಿ
  • 2000ಕ್ಕೂ ಹೆಚ್ಚು ಡಿಮಾಂಡ್ ಡ್ರಾಫ್ಟ್, 5000 ರೇಷ್ಮೆ‌ ಸೀರೆಗಳ ಜಪ್ತಿ
  • ಉಮ್ರಾ ಫೌಂಡೇಷನ್ ಹೆಸರಿನಲ್ಲಿ ತಲಾ 1,105 ರೂ. ಮೌಲ್ಯದ ಡಿಡಿ

ಬೆಂಗಳೂರು: ಕೆಜಿಎಫ್​ ಬಾಬು (KGF Babu) ಅವರ ಬೆಂಗಳೂರಿನ ನಿವಾಸದ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid) ನಡೆಸಿದ್ದು, 2000ಕ್ಕೂ ಹೆಚ್ಚು ಡಿಮಾಂಡ್ ಡ್ರಾಫ್ಟ್, 5000 ರೇಷ್ಮೆ‌ ಸೀರೆಗಳನ್ನು ಜಪ್ತಿ ಮಾಡಿದ್ದಾರೆ. ಅಧಿಕಾರಿಗಳಿಗೆ ಉಮ್ರಾ ಫೌಂಡೇಷನ್ ಹೆಸರಿನಲ್ಲಿ ತಲಾ 1,105 ರೂ. ಮೌಲ್ಯದ ಡಿಡಿ ದೊರೆತಿದೆ. ಸೀರೆ ಹಾಗೂ ಇತರ ಸಾಮಗ್ರಿಗಳ ಪ್ಯಾಕಿಂಗ್ ಮೇಲೆ ಕೆಜಿಎಫ್ ಬಾಬು ಭಾವಚಿತ್ರ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು, ಚಾಮರಾಜನಗರ ಸೇರಿದಂತೆ ರಾಜ್ಯದ ಹಲವೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಿಜೆಪಿ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ವೃಷಬೇಂದ್ರಪ್ಪ ಮಾಲೀಕತ್ವದ ಬೈಕ್ ಶೋ ರೂಂಗೆ ಐಟಿ ಅಧಿಕಾರಿಗಳು ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ಹೆಚ್ಚು ಜನರು ಶೋ ರೂಂಗೆ ಭೇಟಿ ನೀಡಿದ್ದರು ಎಂಬ ಕುರಿತು ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಲಾಗಿತ್ತು. ಇದರ ಆಧಾರದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

‘ಪುಷ್ಪ’ ಸಿನಿಮಾ ನಿರ್ದೇಶಕ ಸುಕುಮಾರ್ ಹಾಗೂ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಮೇಲೆ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಕುಮಾರ್​ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಶೋಧ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೆಜಿಎಫ್​ ಬಾಬು ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರ ಮನೆಗಳ ಮೇಲೆ ಐಟಿ ದಾಳಿ

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಮಧ್ಯೆಯೇ ಐಟಿ ಅಧಿಕಾರಿಗಳು ಕೂಡ ಅಲರ್ಟ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಮಂಗಳೂರು, ಮೈಸೂರು ಸೇರಿದಂತೆ ಕೆಲ ಕಡೆ ಕಾಂಗ್ರೆಸ್ ಮುಖಂಡರುಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಈಗ ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಕೆಜಿಎಫ್​ ಬಾಬು ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಬಯಸಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕೆಜಿಎಫ್ ಬಾಬು, ಕ್ಷೇತ್ರದಲ್ಲಿ ಅನೇಕ ಸಾಮಾಜ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಕಾಂಗ್ರೆಸ್​ ಪಕ್ಷವು ಬಾಬುಗೆ ಟಿಕೆಟ್ ನೀಡಿಲ್ಲ. ಹಾಗಾಗಿ ​ಅವರು ಪತ್ನಿಯನ್ನು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:15 pm, Wed, 19 April 23

Loading...
Unable to load recommendations.
Follow Us