ದೊಡ್ಡವರ ಗೋಡೆ ಮುಟ್ಟಲು ಜೆಸಿಬಿಗೂ ಭಯ; ವಿಪ್ರೋ ಒತ್ತುವರಿ ತೆರವು ವೇಳೆ ಕೆಟ್ಟುನಿಂತ ಜೆಸಿಬಿ

ದೊಡ್ಡವರ ಮನೆ ಗೋಡೆ ಮುಟ್ಟಲು ಜೆಸಿಬಿಗೂ ಭಯ ಅಂತಾ ಕಾಣುತ್ತದೆ. ಸಣ್ಣ ಪುಟ್ಟ ಮನೆಗಳನ್ನ ಭರ್ಜರಿಯಾಗಿ ಒಡೆದುಹಾಕುತ್ತಿದ್ದ ಜೆಸಿಬಿ, ವಿಪ್ರೋ, ಸಲಾರ್ ಪುರಿಯಾ ಒತ್ತುವರಿ ತೆರವು ವೇಳೆ ಕೆಟ್ಟು ನಿಂತಿದೆ.

ದೊಡ್ಡವರ ಗೋಡೆ ಮುಟ್ಟಲು ಜೆಸಿಬಿಗೂ ಭಯ; ವಿಪ್ರೋ ಒತ್ತುವರಿ ತೆರವು ವೇಳೆ ಕೆಟ್ಟುನಿಂತ ಜೆಸಿಬಿ
ವಿಪ್ರೋ ಒತ್ತುವರಿ ತೆರವು ವೇಳೆ ಕೆಟ್ಟುನಿಂತ ಜೆಸಿಬಿ
Edited By: Rakesh Nayak Manchi

Updated on: Sep 20, 2022 | 8:38 PM

ಬೆಂಗಳೂರು: ದೊಡ್ಡವರ ಮನೆ ಗೋಡೆ ಮುಟ್ಟಲು ಜೆಸಿಬಿಗೂ ಭಯ ಅಂತಾ ಕಾಣುತ್ತದೆ. ಸಣ್ಣ ಪುಟ್ಟ ಮನೆಗಳನ್ನ ಭರ್ಜರಿಯಾಗಿ ಯಾವುದೇ ಸಮಸ್ಯೆ ಇಲ್ಲದೆ ಒಡೆದುಹಾಕಿದ್ದ ಜೆಸಿಬಿ (JCB), ಸರ್ಜಾಪುರ ಸಮೀಪದ ವಿಪ್ರೋ (Wipro), ಸಲಾರ್ ಪುರಿಯಾ ಒತ್ತುವರಿ ತೆರವು ವೇಳೆ ಕೆಟ್ಟು ನಿಂತಿದೆ. ಅಷ್ಟೇ ಅಲ್ಲದೆ ರಿಪೇರಿಗೆ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದಾರೆ. ವಿಪ್ರೋ ಬಳಿಕ ಗ್ರೀನ್ ವುಡ್ ಅಪಾರ್ಟ್‌ಮೆಂಟ್​ ಮಾಡಿಕೊಂಡಿದ್ದ ಒತ್ತುವರಿಯನ್ನು ತೆರವುಗೊಳಿಸಬೇಕಿತ್ತು. ಆದರೆ ವಿಪ್ರೋ ತೆರವು ವೇಳೆಯೇ ಜೆಸಿಬಿ ವೈಯರ್ ತುಂಡಾಗಿದೆ. ಇದನ್ನೇ ಸರಿಪಡಿಸಲು ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದನ್ನೆಲ್ಲಾ ಗಮನಿಸುವಾಗ ವಿಪ್ರೋ ಕಂಪನಿಯ ಒತ್ತುವರಿ ತೆರವು ಇಂದು ಕೂಡ ಮುಕ್ತಾಯವಾಗುವಂತೆ ಕಾಣಿಸುತ್ತಿಲ್ಲ.

ನಾಳೆ ಬೆಳಗ್ಗೆಯಿಂದ ಮತ್ತೆ ತೆರವು ಕಾರ್ಯ

ಜೆಸಿಬಿಯ ವೈಯರ್ ತುಂಡಾದ ಕಾರಣ ತೆರವು ಕಾರ್ಯಾಚರಣೆ ಅರ್ಧಕ್ಕೆ ನಿಂತಿದ್ದು, ನಾಳೆ ತೆರವು ಕಾರ್ಯಾಚರಣೆ ಮುಂದುವರೆಯಲಿದೆ. ಈ ಬಗ್ಗೆ ಹೇಳಿಕೆ ನೀಡಿದ ಮಹದೇವಪುರ ವಲಯದ ಎಇಇ ಮಾರ್ಕಾಂಡೇಯ, ಸದ್ಯಕ್ಕೆ ಈಗಿನ ಪರಿಸ್ಥಿತಿಯಲ್ಲಿ ತೆರವು ಮುಂದುವರಿಕೆ ಕಷ್ಟ. ನಾಳೆ ಬೆಳಗ್ಗೆಯಿಂದ ಮತ್ತೆ ತೆರವು ಕಾರ್ಯ ಮಾಡುತ್ತೇವೆ ಎಂದಿದ್ದಾರೆ.

ಕಾಂಪೌಂಡ್ ಮೇಲೆ ತಗಡಿನ ಶೀಟ್​​ ಅಳವಡಿಕೆ

ವಿಪ್ರೋ ಬಳಿ ರಾಜಕಾಲುವೆ ಒತ್ತುವರಿ ತೆರವು ಮಾಡಿದ್ದ ಕಾಂಪೌಂಡ್ ಮೇಲೆ ವಿಪ್ರೋ ಸಿಬ್ಬಂದಿಗಳು ತಗಡಿನ ಶೀಟ್​​ ಅಳವಡಿಸಿದ್ದಾರೆ.  ಕಾಂಪೌಂಡ್ ಮೇಲೆ ನಿಂತರೆ ಒತ್ತುವರಿಯ ಚಿತ್ರಣ ಸಿಗಲಿದೆ. ಹೂಳೆತ್ತದೆ ಕಸಕಡ್ಡಿ ತುಂಬಿಕೊಂಡಿರುವ ದೃಶ್ಯ ಕಣ್ಣಿಗೆ ರಾಚುತ್ತಿದೆ. ಇದನ್ನ ಮರೆಮಾಚಲು ವಿಪ್ರೋ ಸಿಬ್ಬಂದಿ ತಗಡಿನ ಶೀಟ್ ಅಳವಡಿಸಿದ್ದಾರೆ.

ಒತ್ತುವರಿ ತೆರವು ವೇಳೆ ವಿಪ್ರೋ ಕಂಪನಿ ಸಿಬ್ಬಂದಿಯಿಂದ ರಂಪಾಟ

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ವಿಪ್ರೊ ಸಿಬ್ಬಂದಿ ರಂಪಾಟ ನಡೆಸಿದ್ದು, ನಾವು ಯಾವುದೇ ಒತ್ತುವರಿ ಮಾಡಿಲ್ಲ, ರಾಜಕಾಲುವೆ ಹೂಳೆತ್ತದೆ ಕಸ ತುಂಬಿಕೊಂಡಿದೆ ಎಂದು ಕೂಗಾಡಿದ್ದಾರೆ. ಅಲ್ಲದೆ ಕಾಂಪೌಂಡ್​ ಮೇಲೆ ಚಿತ್ರೀಕರಿಸುತ್ತಿದ್ದ ಮಾಧ್ಯಮಗಳಿಗೂ ಅಡ್ಡಿಪಡಿಸಿದ್ದಾರೆ. ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದರೆ ನನ್ನ ಭಾಷೆಯಲ್ಲೇ ನಾನು ಮಾತನಾಡುವುದು ಎಂದು ಹೇಳಿದ ವಿಪ್ರೊ ಸಿಬ್ಬಂದಿ, ಮಾಧ್ಯಮದವರಿಂದ ನಮಗೆ ಭಯವಾಗುತ್ತಿದೆ, ಅತಂಕ ಸೃಷ್ಟಿಯಾಗುತ್ತಿದೆ ಎಂದಿದ್ದಾರೆ.

ವಿಪ್ರೊ ಕಂಪನಿಯಿಂದ ಸ್ಪಷ್ಟನೆ

“ವಿಪ್ರೊ ತಾನು ಕಾರ್ಯ ನಿರ್ವಹಿಸುವ ಪರಿಸರ ವ್ಯವಸ್ಥೆಗೆ ಬೆಂಬಲಿಸಲು ಬದ್ಧವಾಗಿದೆ. ನಾವು ನಮ್ಮ ದೊಡ್ಡಕನ್ನೆಲ್ಲಿ ಕ್ಯಾಂಪಸ್ ಮೂಲಕ ಹರಿದು ಹೋಗುವ ರಾಜಕಾಲುವೆಯ ಸಾಮರ್ಥ್ಯ ಮತ್ತು ಬಳಕೆಯನ್ನು ಹೆಚ್ಚಿಸಲು ಸಕ್ರಿಯವಾಗಿ ಬಿಬಿಎಂಪಿಯೊಂದಿಗೆ ಶ್ರಮಿಸುತ್ತಿದ್ದು ಸಂಬಂಧಿಸಿದ ಸಂಸ್ಥೆಗಳು ಅನುಮೋದಿಸಿದ ಯೋಜನೆಗಳ ಪ್ರಕಾರವೇ ನಿರ್ಮಾಣ ಮಾಡಿದ್ದೇವೆ. ವಿಪ್ರೊ ಈ ಪ್ರಯತ್ನಗಳನ್ನು ಸುಲಭವಾಗಿ ನಿರ್ವಹಿಸಲು ಬಿಬಿಎಂಪಿಗೆ ನೆರವಾಗಲು ಕಾಂಪೌಂಡ್ ಗೋಡೆಯ ಭಾಗವನ್ನೂ ತೆರವುಗೊಳಿಸಿದೆ” ಎಂದು ಕಂಪನಿಯು ಸ್ಪಷ್ಟನೆ ನೀಡಿದೆ.

ಮತ್ತಷ್ಟು ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Tue, 20 September 22

Web contact

TV9 Kannada

Read More
Follow Us