ರೈತರಿಗೆ ಬರೆ ಎಳೆದ ಬ್ಯಾಂಕ್‌ಗಳು, ಬರ ಪರಿಹಾರ ಹಣ ಸಾಲಕ್ಕೆ ಜಮಾ: ಜಿಲ್ಲಾಧಿಕಾರಿ ಆದೇಶಕ್ಕೂ ಡೋಂಟ್​​ ಕೇರ್​​

ಬರದಿಂದ ಕಂಗೆಟ್ಟ ರೈತರಿಗೆ ಆಸರೆಯಾಗಲೆಂದು ಸರ್ಕಾರ ಬರ ಪರಿಹಾರ ಹಣ ಬಿಡುಗಡೆ ಮಾಡಿದೆ. ಇದ್ರಿಂದ ಅಷ್ಟೊ ಇಷ್ಟೋ ಕಾಸು ಬಂತಲ್ಲ ಅಂತ ರೈತರು ಹಿಗ್ಗಿದ್ದರು. ಆದರೆ ಹೀಗೇ ಬಂದ ಪರಿಹಾರ ಹಣವನ್ನ ಬ್ಯಾಂಕುಗಳು ರೈತರ ಅಕೌಂಟ್‌ಗೆ ಜಮಾ ಮಾಡುವುದನ್ನ ಬಿಟ್ಟು, ಗಾಯದ ಮೇಲೆ ಬರೆ ಎಳೆದಂತೆ ಸಾಲದ ನೆಪ ಹೇಳಿ ಅಕೌಂಟ್ ಗಳನ್ನೆ ಫ್ರೀಜ್ ಮಾಡ್ತಿದ್ದಾರಂತೆ.

ರೈತರಿಗೆ ಬರೆ ಎಳೆದ ಬ್ಯಾಂಕ್‌ಗಳು, ಬರ ಪರಿಹಾರ ಹಣ ಸಾಲಕ್ಕೆ ಜಮಾ: ಜಿಲ್ಲಾಧಿಕಾರಿ ಆದೇಶಕ್ಕೂ ಡೋಂಟ್​​ ಕೇರ್​​
ರೈತರಿಗೆ ಬರೆ ಎಳೆದ ಬ್ಯಾಂಕ್‌ಗಳು, ಬರ ಪರಿಹಾರ ಹಣ ಸಾಲಕ್ಕೆ ಜಮಾ
Edited By: ಸಾಧು ಶ್ರೀನಾಥ್​

Updated on: May 18, 2024 | 4:07 PM

ಆ ಜಿಲ್ಲೆಯ ರೈತರು ಭೀಕರ ಬರದಿಂದ ಇರೊ ಬರೋ ಬೆಳೆಗಳನ್ನ ಕಳೆದುಕೊಂಡು ಬೀದಿಗೆ ಬಂದಿದ್ದರು. ಹೀಗೇ ಆರ್ಥಿಕ ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಸರ್ಕಾರ ಸ್ಪಂದಿಸಿ ಅಲ್ಪಸ್ವಲ್ಪ ಪರಿಹಾರ ಧನ (drought relief) ಬಿಡುಗಡೆ ಮಾಡಿದೆ. ಆದ್ರೆ ಬ್ಯಾಂಕ್‌ಗಳು ಮಾತ್ರ ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರದಿಂದ ಬಂದ ಪರಿಹಾರ ಹಣವನ್ನ (money) ಸಾಲದ (loan) ರೂಪದಲ್ಲಿ ಕಡಿತ ಮಾಡಿಕೊಳ್ತಿದ್ದು, ರೈತರ ಆಕ್ರೋಶ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.. ಎಲ್ಲಿ ಅಂತಿರ.. ಈ ಸ್ಟೋರಿ ನೋಡಿ.

ಹೌದು‌. ಹಿಂದೆಂದೂ ಕಂಡು ಕೇಳರಿಯದ ಭೀಕರ ಬರದಿಂದ ಇಡೀ ಕಲ್ಯಾಣ ಕರ್ನಾಟಕ ಅಕ್ಷರಶಃ ಕಂಗೆಟ್ಟು ಹೋಗಿದೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹೇಳತೀರದು. ಕಳೆದ ಎರಡ್ಮೂರು ದಶಕಗಳಿಗೆ ಹೋಲಿಸಿದ್ರೆ ಈ ಬಾರಿ ರಣಬಿಸಿಲು ಬೆಂಕಿಯುಂಡೆಯಾಗಿತ್ತು. ಜೊತೆಗೆ ಕಳೆದ ಬಾರಿ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಜಿಲ್ಲೆಯಲ್ಲಿ ಬಹುತೇಕ ರೈತರು ಇರೋಬರೋ ಬೆಳೆಗಳನ್ನ ಕಳೆದುಕೊಂಡು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

ಹೀಗಾಗಿ ಸರ್ಕಾರ ಬರದಿಂದ ಕಂಗೆಟ್ಟ ರೈತರಿಗೆ ಆಸರೆಯಾಗಲೆಂದು ಬರ ಪರಿಹಾರ ಹಣ ಬಿಡುಗಡೆ ಮಾಡಿದೆ. ಇದ್ರಿಂದ ಅಷ್ಟೊ ಇಷ್ಟೋ ಕಾಸು ಬಂತಲ್ಲ ಅಂತ ರೈತರು ಹಿರಿ ಹಿರಿ ಹಿಗ್ಗಿದ್ದರು. ಆದರೆ ಹೀಗೇ ಬಂದ ಪರಿಹಾರ ಹಣವನ್ನ ಬ್ಯಾಂಕುಗಳು ರೈತರ ಅಕೌಂಟ್‌ಗೆ ಜಮಾ ಮಾಡುವುದನ್ನ ಬಿಟ್ಟು, ಗಾಯದ ಮೇಲೆ ಬರೆ ಎಳೆದಂತೆ ಸಾಲದ ನೆಪ ಹೇಳಿ ಅಕೌಂಟ್ ಗಳನ್ನೆ ಫ್ರೀಜ್ ಮಾಡ್ತಿದ್ದಾರಂತೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಜೇವರ್ಗಿ ತಾಲೂಕಿನಲ್ಲಿ ಅತೀ ಹೆಚ್ಚು ರೈತರಿಗೆ ಈ ಸಮಸ್ಯೆ ಆಗಿದೆ. ಇನ್ನು ವಿಷಯ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಪರಿಹಾರ ಕಡಿತ ಮಾಡದಂತೆ ಆದೇಶ ನೀಡಿದರೂ ಬ್ಯಾಂಕುಗಳು ಕ್ಯಾರೆ ಎನ್ನುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳ ಕ್ರಮಕ್ಕೆ ರೈತ ಸಂಘಟನೆಗಳು ಕಿಡಿಕಾರಿವೆ.

Also Read: ಸಮಾಜವಾದಿ ಸೋಗಿನಲ್ಲಿ 4 ವರ್ಷ ಕಾಲ ಆದಾಯ ತೆರಿಗೆಯನ್ನು ಶೇ 97.5 ಕ್ಕೆ ಏರಿಸಿದ್ದ ಪ್ರಧಾನಿ ಇಂದಿರಾ! ಏನಾಯ್ತು ಆಗ

ಇನ್ನು ಕಲಬುರಗಿ ಜಿಲ್ಲೆಯಲ್ಲಿ ಸಹ ಬರದಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಸಂಪೂರ್ಣ ಕೈಕೊಟ್ಟಿದ್ದವು. ಹೀಗಾಗಿ ಬರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅನ್ನದಾತರಿಗೆ ಆಸರೆಯಾಗಲೆಂದು ಕಲಬುರಗಿ ಜಿಲ್ಲೆಯ 2 ಲಕ್ಷ 63 ಸಾವಿರ ರೈತರಿಗೆ 274 ಕೋಟಿ ರೂ ಪರಿಹಾರ ಹಣವನ್ನ ಈಗಾಗಲೇ ಡಿಬಿಟಿ ಮಾಡಲಾಗಿದೆ. ಆದರೆ ರೈತರ ಅಕೌಂಟ್‌ಗಳಿವೆ ಡಿಬಿಟಿ ಆದ ಪರಿಹಾರ ಹಣವನ್ನ ಬ್ಯಾಂಕ್ ಅಧಿಕಾರಿಗಳು ಸಾಲದ ರೂಪದಲ್ಲಿ ಕಡಿತ ಮಾಡಿಕೊಳ್ತಿರೋ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿತ್ತು.

ರೈತರಿಂದ ದೂರುಗಳು ಬಂದ ಬೆನ್ನಲ್ಲೆ ಅಲರ್ಟ್ ಆದ ಕಲಬುರಗಿ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಲೀಡ್ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಯಾವುದೇ ಕಾರಣಕ್ಕೂ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಬಂದ ಬರ ಪರಿಹಾರ ಹಣವನ್ನ ಸಾಲದ ರೂಪದಲ್ಲಿ ಕಡಿತ ಮಾಡಿಕೊಳ್ಳದೇ ಅವರ ಅಕೌಂಟ್‌ಗೆ ಜಮಾ ಮಾಡಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ. ಅಲ್ಲದೇ ಇಂತಹ ದೂರುಗಳು ಬಂದರೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ..

ಅದೆನೇ ಇರಲಿ ಒಂದು ಕಡೆ ಭೀಕರ ಬರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ಅನ್ನದಾತರಿಗೆ ಇದೀಗ ಬ್ಯಾಂಕ್ ಅಧಿಕಾರಿಗಳು ಶಾಕ್ ನೀಡುತ್ತಿದ್ದು, ಮುಂದೇನು ಅನ್ನುವ ಚಿಂತೆಯಲ್ಲಿ ರೈತಾಪಿ ವರ್ಗ ಮುಳುಗಿದ್ದಾರೆ. ಒಟ್ಟಿನಲ್ಲಿ ದೇವರು ವರ ಕೊಟ್ಟರು ಪೂಜಾರಿ ಕೊಡಲ್ಲ ಅನ್ನೊ ಗಾದೆ ಮಾತಿನಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಡಳಿತ ಮೂಗುದಾರ ಹಾಕಿ ಸಂಕಷ್ಟದಲ್ಲಿರೋ ಅನ್ನದಾತರ ನೆರವಿಗೆ ಧಾವಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us