ಕಲಬುರಗಿ: ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್, ಆಡಿಯೋದಲ್ಲಿರೋ ಧ್ವನಿ ಮಗನದ್ದಲ್ಲ ಎಂದ ಪಾಲಕರು

| Updated By: ಗಣಪತಿ ಶರ್ಮ

Updated on: Oct 23, 2023 | 3:56 PM

ಪ್ರಕರಣಕ್ಕೆ ಇದೀಗ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪ್ರಮುಖ ಸಾಕ್ಷಿಯಾಗಿದ್ದ, ಶಿವಕುಮಾರ್ ಮಾತನಾಡಿರುವ ಧ್ವನಿ ಅವನದ್ದೆ ಅಲ್ಲಾ ಅಂತ ಶಿವಕುಮಾರ ಕುಟುಂಬದವರು ಹೇಳ್ತಿದ್ದಾರೆ. ಹೌದು ಆಡಿಯೋದಲ್ಲಿರೋದು ತಮ್ಮ ಮಗನದ್ದೇ ಧ್ವನಿ ಅನ್ನೋ ಅನುಮಾನ ನಮಗೆ ಬರ್ತಿದೆ. ನಮಗೆ ಆತನ ದ್ವನಿ ಅಲ್ಲಾ ಅಂತ ಅನಿಸುತ್ತಿದೆ ಅಂತ ಶಿವಕುಮಾರ್ ತಾಯಿ ಮತ್ತು ಪತ್ನಿ ಹೇಳ್ತಿದ್ದಾರೆ.

ಕಲಬುರಗಿ: ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್, ಆಡಿಯೋದಲ್ಲಿರೋ ಧ್ವನಿ ಮಗನದ್ದಲ್ಲ ಎಂದ ಪಾಲಕರು
ಬಿಜೆಪಿ ಕಾರ್ಯಕರ್ತ ಶಿವಕುಮಾರ್
Follow us on

ಕಲಬುರಗಿ, ಅಕ್ಟೋಬರ್ 23: ಬಿಜೆಪಿ ಕಾರ್ಯಕರ್ತನೋರ್ವ ತನ್ನ ಸಾವಿಗೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ (Sharan Prakash Patil) ಕಾರಣ ಅಂತ ಆಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನೇ ದಾಳ ಮಾಡಿಕೊಂಡಿದ್ದ ಬಿಜೆಪಿ (BJP) ನಾಯಕರು, ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ರಾಜೀನಾಮೆಗೆ ಬಿಗಿಪಟ್ಟು ಹಿಡದಿದ್ದಾರೆ. ಆದ್ರೆ ಇದೀಗ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಪಾಲಕರೇ, ಆಡಿಯೋದಲ್ಲಿರುವ ಧ್ವನಿ ತಮ್ಮ ಮಗನದ್ದು ಅಲ್ಲ ಅನ್ನೋ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದಾರೆ.

ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಬಿಜೆಪಿ ಕಾರ್ಯಕರ್ತ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದಲ್ಲಿ ಇದೇ ಅಕ್ಟೋಬರ್ 19 ರಂದು ಶಿವಕುಮಾರ್ ಅನ್ನೋ ಮೂವತ್ತೈದು ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದ ಶಿವಕುಮಾರ್, ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಮುನ್ನ ಮೂರು ಆಡಿಯೋ ಮೆಸಜ್ ಗಳನ್ನು ಕೆಲವರಿಗೆ ಕಳಿಸಿದ್ದಾನೆ. ಅದರಲ್ಲಿ ತನ್ನ ಸಾವಿಗೆ ಸೇಡಂ ಶಾಸಕ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮತ್ತು ಕೆಲ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ. ಅತಿಯಾದ ಕಿರುಕುಳ ನೀಡಿದ್ದಾರೆ. ಅವರಿಗೆ ಹಿಂದೂ ಧರ್ಮ ಅಂದ್ರೆ ಆಗಿಬರಲ್ಲಾ, ನನ್ನದು ಸಹಜ ಸಾವಲ್ಲಾ ಅಂತ ಹೇಳಿದ್ದ.

ಯಾವಾಗ ಈ ಆಡಿಯೋಗಳು ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದವೋ, ಆಗ ಬಿಜೆಪಿ ನಾಯಕರು ಎಚ್ಚೆತ್ತುಕೊಂಡು, ಪ್ರತಿಭಟನೆ ನಡೆಸಿದ್ದರು. ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿದ್ದರು. ಪ್ರಕರಣವನ್ನು ಸಿಬಿಐಗೆ ನೀಡಬೇಕು ಅಂತ ಆಗ್ರಹಿಸಿದ್ದರು. ಇನ್ನೊಂದಡೆ ನಿನ್ನೆಯಷ್ಟೇ ಮೃತ ಶಿವಕುಮಾರ್ ಕುಟುಂಬಕ್ಕೆ ಸಾಂತ್ವಾನ ಹೇಳಿ, ಮೂರು ಲಕ್ಷ ನಗದು ಸಹಾಯ ಕೂಡಾ ಮಾಡಿ ಬಂದಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗುತ್ತಿದೆ ಅಂತ ಆರೋಪಿಸಿದ್ದಾರೆ.

ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್

ಆದ್ರೆ ಪ್ರಕರಣಕ್ಕೆ ಇದೀಗ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪ್ರಮುಖ ಸಾಕ್ಷಿಯಾಗಿದ್ದ, ಶಿವಕುಮಾರ್ ಮಾತನಾಡಿರುವ ಧ್ವನಿ ಅವನದ್ದೆ ಅಲ್ಲಾ ಅಂತ ಶಿವಕುಮಾರ ಕುಟುಂಬದವರು ಹೇಳ್ತಿದ್ದಾರೆ. ಹೌದು ಆಡಿಯೋದಲ್ಲಿರೋದು ತಮ್ಮ ಮಗನದ್ದೇ ಧ್ವನಿ ಅನ್ನೋ ಅನುಮಾನ ನಮಗೆ ಬರ್ತಿದೆ. ನಮಗೆ ಆತನ ದ್ವನಿ ಅಲ್ಲಾ ಅಂತ ಅನಿಸುತ್ತಿದೆ ಅಂತ ಶಿವಕುಮಾರ್ ತಾಯಿ ಮತ್ತು ಪತ್ನಿ ಹೇಳ್ತಿದ್ದಾರೆ. ಇನ್ನು ತಮ್ಮ ಮಗನ ಸಾವಿಗೆ ತಮಗೆ ಕಾರಣ ಗೊತ್ತಿಲ್ಲಾ, ಆದ್ರೆ ಸಾಲ ಮಾಡಿಕೊಂಡಿದ್ದ. ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ದೂರು ನೀಡಿದ್ದ ಕುಟುಂಬ, ಇದೀಗ ಆಡಿಯೋದಲ್ಲಿರುವ ಧ್ವನಿ ಕೂಡಾ ಶಿವಕುಮಾರ್ ನದ್ದು ಅಲ್ಲಾ ಅಂತಿರೋದು, ಬಿಜೆಪಿ ನಾಯಕರ ಹಿನ್ನಡೆಗೆ ಕಾರಣವಾಗಿದೆ. ಇದೇ ಪ್ರಕರಣವನ್ನು ಇಟ್ಟುಕೊಂಡು, ಕಾಂಗ್ರೆಸ್ ಮೇಲೆ ಮುಗಿಬೀಳಲು ಮುಂದಾಗಿದ್ದ ಬಿಜೆಪಿ ನಾಯಕರಿಗೆ, ಕುಟುಂಬದವರ ಹೇಳಿಕೆಗಳು ದೊಡ್ಡ ಮಟ್ಟದ ಹಿನ್ನೆಡೆಯನ್ನು ಉಂಟು ಮಾಡುತ್ತಿವೆ.

ನನ್ನ ಮಗ, ಆತನಿಗೆ ಕಾಂಗ್ರೆಸ್ ನವರ ಕಿರುಕುಳ ಬಗ್ಗೆ ಯಾವತ್ತು ಹೇಳಿಲ್ಲಾ, ಆತನಿಗೆ ಯಾರ ಜೊತೆ ಜಗಳ ಕೂಡಾ ಇರಲಿಲ್ಲಾ. ಆದ್ರೆ ಸಾಲದ ಬಗ್ಗೆ ಹೇಳಿಕೊಂಡಿದ್ದ. ಇನ್ನು ಆಡಿಯೋದಲ್ಲಿರುವ ಧ್ವನಿ ನನ್ನ ಮಗನದ್ದು ಅಲ್ಲಾ ಅಂತ ನಮಗೆ ಅನಿಸುತ್ತಿದೆ ಅಂತಿದ್ದಾರೆ ಆತ್ಮಹತ್ಯೆ ಮಾಡಿಕೊಂಡ ಶಿವಕುಮಾರ್ ತಾಯಿ, ಸುಶಿಲಾಬಾಯಿ.

ಇದನ್ನೂ ಓದಿ: ಕಲಬುರಗಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣದ ತನಿಖೆ ಸಿಐಡಿಗೆ, ಮೃತನ ತಾಯಿ ಹೇಳಿದ್ದೇನು?

ಇನ್ನು ಕಾಂಗ್ರೆಸ್ ನಾಯಕರು ಕುಟುಂಬದವರ ಮೇಲೆ ಒತ್ತಡ ಹೇರ್ತಿದ್ದಾರೆ. ಸ್ವತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೇ, ಆಡಿಯೋದಲ್ಲಿ ಸಚಿವರ ಹೆಸರು ಹೇಳಿದ್ದಾನೆ. ಆದ್ರೆ ಪ್ರಕರಣ ಮುಚ್ಚಿಹಾಕಲು, ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಯತ್ನನಿಸುತ್ತಿದ್ದಾರೆ ಅಂತ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಆರೋಪಿಸುತ್ತಿದ್ದಾರೆ.

ಕುಟುಂಬದವರೇ ಕಾಂಗ್ರೆಸ್ ಕಾರ್ಯಕರ್ತರ ಕಿರುಕುಳ, ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರ ಕಿರುಕುಳ ಬಗ್ಗೆ ಯಾವುದೇ ಚಕಾರ ಎತ್ತಿಲ್ಲಾ. ಆತನಿಗೆ ಯಾರ ಜೊತೆ ಜಗಳ ಕೂಡಾ ಇರಲಿಲ್ಲಾ ಅಂತ ಹೇಳ್ತಿದ್ದಾರೆ. ಹೀಗಾಗಿ ಶಿವಕುಮಾರ್ ಆತ್ಮಹತ್ಯೆ ಮತ್ತು ಆಡಿಯೋ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಿದೆ. ನಿಸ್ಪಕ್ಷಪಾತವಾಗಿ ತನಿಖೆ ನಡೆದ್ರೆ ಮಾತ್ರ ಅಸಲಿ ಸತ್ಯ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Mon, 23 October 23