ಸದ್ದಿಲ್ಲದೇ ಬಂದು ಹೋದ ರೈಲು, ಕಲಬುರಗಿ ನಿಲ್ದಾಣದಲ್ಲೇ ಕಾದು ಕುಳಿತಿದ್ದ ಪ್ರಯಾಣಿಕರು ಕಂಗಾಲು

ರೈಲು ಸದ್ದಿಲ್ಲದೇ ಬಂದು ಪ್ರಯಾಣಿಕರನ್ನು ಬಿಟ್ಟು ಹೋಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಅರೇ ರೈಲು ಬಂದು ಹೋದರೂ ಪ್ರಯಾಣಿಕರಿಗೆ ಹೇಗೆ ಗೊತ್ತಾಗಲಿಲ್ಲ? ಆಗಿದ್ದೇನು? ಪ್ರಯಾಣಿಕರು ಹೇಳಿದ್ದೇನು? ಇಲ್ಲಿದೆ ನೋಡಿ ವಿವರ.

ಸದ್ದಿಲ್ಲದೇ ಬಂದು ಹೋದ ರೈಲು, ಕಲಬುರಗಿ ನಿಲ್ದಾಣದಲ್ಲೇ ಕಾದು ಕುಳಿತಿದ್ದ ಪ್ರಯಾಣಿಕರು ಕಂಗಾಲು

Updated on: Jun 26, 2023 | 8:34 AM

ಕಲಬುರಗಿ: ರೈಲು, ಬಸ್, ವಿಮಾನಗಳು ಪ್ಯಾಸೆಂಜರ್​ಗಳನ್ನು ಬಿಟ್ಟು ಹೋಗಿರುವ ಪ್ರಸಂಗಗಳು ಬೆಳಕಿಗೆ ಬಂದಿವೆ. ಅದರಂತೆ ಇದೀಗ ಕರ್ನಾಟಕದಲ್ಲಿ ರೈಲು ಸದ್ದಿಲ್ಲದೇ ಬಂದು ಪ್ರಯಾಣಿಕರನ್ನು ಬಿಟ್ಟು ಹೋಗಿರುವುದು ವರದಿಯಾಗಿದೆ. ಹೌದು… ಹುಬ್ಬಳ್ಳಿಯಿಂದ ಹೊರಟು ಕಲಬುರಗಿ ಮಾರ್ಗವಾಗಿ ಸಿಕಂದರಾಬಾದ್‌ಗೆ ಹೊರಟಿದ್ದ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರನ್ನು ಬಿಟ್ಟು ಹೋಗಿರುವ ಘಟನೆ ಭಾನುವಾರ ನಡೆದಿದೆ. ಕಲಬುರಗಿ ರೈಲು ನಿಲ್ದಾಣದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಇದರಿಂದ ರೈಲು ಈಗ ಬರುತ್ತೆ ಆಗ ಬರುತ್ತೆ ಎಂದು ಕಾದು ಕುಳಿತಿದ್ದ ಪ್ರಯಾಣಿಕ ರೈಲ್ವೆ ಸ್ಟೇಷನ್​ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Fact Check: ಕಿಟಕಿಯಿಂದ ಬಸ್ ಹತ್ತುವಾಗ ಮಹಿಳೆಯ ಕೈ ಕಟ್ ಆಯಿತೇ?: ವೈರಲ್ ವಿಡಿಯೋದ ಸತ್ಯಾಸತ್ಯತೆ ಇಲ್ಲಿದೆ

ಆಗಿದ್ದೇನು?

ಹುಬ್ಬಳ್ಳಿಯಿಂದ ಶನಿವಾರ ರಾತ್ರಿಯೆ ಹೊರಟಿದ್ದ ಸಿಕಂದರಾಬಾದ್‌ ಎಕ್ಸಪ್ರೆಸ್‌ ರೈಲು ಬೆಳಗ್ಗೆ 6.15 ಗಂಟೆಗೆ ಕಲಬುರಗಿಗೆ ಬರಬೇಕಿತ್ತು. ಅದರಂತೆ ರೈಲು ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಬಂದು ಹೋಗಿದೆ. ಆದ್ರೆ, ಈ ರೈಲು ಕಲಬುರಗಿ ನಿಲ್ದಾಣಕ್ಕೆ ಬಂದು ಹೋಗಿರುವುದು ಪ್ರಯಾಣಿಕರ ಗಮನಕ್ಕೆ ಬಂದಿಲ್ಲ. ಕಾರಣ ಈ ರೈಲಿನ ಆಗಮನ, ನಿರ್ಗಮನದ ಬಗ್ಗೆ ಯಾವುದೇ ಅನೌನ್ಸ್​ಮೆಂಟ್ ಆಗಿಲ್ಲ. ಎಲ್​ಇಡಿ ಪರದೆ ಮೇಲೂ ರೈಲಿನ ಬಗ್ಗೆ ಯಾವುದೇ ಮಾಹಿತಿ ಡಿಸ್ಪ್ಲೇ ಆಗಿಲ್ಲ. ಈ ಹಿನ್ನೆಲೆಯಲ್ಲಿ ಈ ರೈಲಿಗಾಗಿ ಕಾಯುತ್ತಿದ್ದ ನೂರಾರು ಪ್ರಯಾಣಿಕರು ಕಲಬುರಗಿ ರೈಲ್ವೇ ನಿಲ್ದಾಣದಲ್ಲಿ ಉಳಿಯಬೇಕಾಯ್ತು.

ಪ್ರಯಾಣಿಕರ ಗಮನಕ್ಕೆ ಬಂದಿದ್ದೇಗೆ?

ಸಿಕಂದರಾಬಾದ್‌ ರೈಲು ಬಳಿಕ ಬರುವ ಹುಸೇನ್‌ ಸಾಗರ್‌ ರೈಲು ಆಗಮನದ ಘೋಷಣೆಯಾಗುತ್ತಿದ್ದಂತೆಯೇ ಪ್ರಯಾಣಿಕರು ಗಾಬರಿಯಾಗಿದ್ದರು. ಸಿಕಂದರಾಬಾದ್ ರೈಲು ಬಂದಿಲ್ಲ. ಆಗಲೇ ಹುಸೇನ್ ಸಾಗರ್​ ರೈಲು ಬರುತ್ತಿದೆ ಅಂತ ಪ್ರಯಾಣಿಕರು ಗಾಬರಿಯಿಂದ ರೈಲ್ವೆ ಸಿಬ್ಬಂದಿಯನ್ನು ವಿಚಾರಿಸಿದಾಗ ಸಿಕಂ​ದ​ರಾ​ಬಾದ್‌ ರೈಲು ಅದಾಗಲೇ ಬಂದು ಹೋಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಕಲಬುರಗಿ ರೈಲ್ವೆ ನಿಲ್ದಾಣದ ಅಧಿಕಾರಿಗಳು, ಹುಸೇನ್‌ ಸಾಗರ್‌ ರೈಲಲ್ಲಿ ಪ್ರಯಾಣಿಕರನ್ನು ಹೈದರಾಬಾದ್​ಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಪ್ರಯಾಣಿಕರು ಹೇಳಿದ್ದೇನು?

ಕಲಬುರಗಿಯಿಂದ ಸಿಕಂದರಾಬಾದ್‌ಗೆ ತೆರಳಬೇಕಿದ್ದ ಪ್ರಯಾಣಿರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಿಕಂದರಾಬಾದ್‌ ಎಕ್ಸಪ್ರೆಸ್‌ 6.32ಕ್ಕೆ ಬರಲಿದೆ ಎಂದು ಫಲಕದಲ್ಲಿ ವೇಳೆ ಸಾರಲಾಗುತ್ತಿದ್ದರೂ ರೈಲೇ ಬರಲಿಲ್ಲ. ಆಮೇಲೆ ರೈಲ್ವೆ ಸಿಬ್ಬಂದಿ ನಂತರ ಬಂದ ಹುಸೇನ್‌ ಸಾಗರ್‌ ರೈಲಿನ ಮಾಹಿತಿ ನೀಡುತ್ತ ಘೋಷಣೆ ಕೂಗಿದಾಗಲಷ್ಟೇ ನಾವು ಹತ್ತಬೇಕಿದ್ದ ಸಿಕಂದರಾಬಾರ್‌ ರೈಲು ಹೋಗಿರುವುದು ಗಮನಕ್ಕೆ ಬಂದಿದೆ. 60ಕ್ಕೂ ಹೆಚ್ಚು ಪ್ರಯಾಣಿಕರು ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದರು. ಆದ್ರೆ, ಇಲ್ಲಿನ ಸಿಬ್ಬಂದಿ ನಿರ್ಲಕ್ಷ್ಯತನದಿಂದ ರೈಲು ನಮ್ಮನನ್ನು ಬಿಟ್ಟು ಹೋಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮತ್ತೋರ್ವ ಪ್ರಯಾಣಿಕ ಪ್ರತಿಕ್ರಿಯಿಸಿದ್ದು, ಸಿಕಂದರಬಾದ್ ರೈಲು ಬಿಟ್ಟು ಹೋಗಿದ್ದರಿಂದ ನಾವು ಹೈದರಾಬಾದ್​ಗೆ ಮಧ್ಯಾಹ್ನ ತಲುಪಬೇಕಾಯ್ತು. ಇನ್ನು ಸಿಕಂದರಬಾದ್ ರೈಲಿಗೆ ಟಿಕೆಟ್​ ಬುಕ್ ಮಾಡಿಕೊಂಡಿದ್ದರೂ ಸಹ ಹುಸೇನ್‌ ಸಾಗರ್‌ ರೈಲಿನ ನಿಂತುಕೊಂಡೇ ಬರಬೇಕಾಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us