Kalaburagi News: ನಿರಂತರ ಮಳೆಗೆ ಕುಸಿದ ಮಣ್ಣಿನ ಗೋಡೆ: ಮಹಿಳೆ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 24, 2023 | 8:48 PM

ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಕಲಬುರಗಿ ಜಿಲ್ಲೆಯ ಜನರ ಎದೆಬಡಿತ ಹೆಚ್ಚಿಸಿದೆ. ಅದರಲ್ಲೂ ಮಣ್ಣಿನಿಂದ ನಿರ್ಮಾಣ ಮಾಡಿರುವ ಮನೆಗಳಲ್ಲಿ ವಾಸಿಸುತ್ತಿರುವ ಜನರು ಜೀವ ಭಯದಲ್ಲಿ ಬದುಕುವಂತಾಗಿದೆ. ಇಂದು ಮಣ್ಣಿನ ಗೋಡೆ ಬಿದ್ದ ಪರಿಣಾಮ ಮಹಿಳೆ ಓರ್ವ ಮೃತಪಟ್ಟಿರುವಂತಹ ಘಟನೆ ನಡೆದಿದೆ.

Kalaburagi News: ನಿರಂತರ ಮಳೆಗೆ ಕುಸಿದ ಮಣ್ಣಿನ ಗೋಡೆ: ಮಹಿಳೆ ಸಾವು
ಕುಸಿದ ಗೋಡೆ, ಮೃತ ಮಹಿಳೆ
Follow us on

ಕಲಬುರಗಿ, ಜುಲೈ 24: ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ್ ಬಿ ಗ್ರಾಮದಲ್ಲಿ ಇಂದು ಸಂಜೆ ಮನೆಯ ಗೋಡೆ (wall collapses) ದಿಢೀರನೆ ಕುಸಿದು ಬಿದ್ದಿದ್ದು, ಕಲ್ಲು ಮತ್ತು ಮಣ್ಣಿನ ಅಡಿ ಓರ್ವ ಮಹಿಳೆ (Woman) ಸಿಲುಕಿ ಮೃತಪಟ್ಟಿರುವಂತಹ ಘಟನೆ ನಡೆದಿದೆ. ಬಿರಾಳ್ ಬಿ ಗ್ರಾಮದ ಬಸಮ್ಮಾ ಬಸವರಾಜ್(35) ಮೃತ ಮಹಿಳೆ. ಸಂಜೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಿಢೀರನೆ ಮನೆಯ ಗೋಡೆ ಕುಸಿದು ದುರಂತ ಸಂಭವಿಸಿದೆ.

ಮೃತ ಮಹಿಳೆಯೊಂದಿಗೆ ಮಗು  ಕೂಡ ಇದ್ದು, ಅದೃಷ್ಟವಶಾತ್ ಪಾರಾಗಿದೆ. ಮೃತ ಬಸಮ್ಮ ಅವರ ಮನೆ ಮಣ್ಣು ಮತ್ತು ಕಲ್ಲಿನಿಂದ ನಿರ್ಮಾಣ ಮಾಡಲಾಗಿತ್ತು. ನಿರಂತರ ಮಳೆಯಿಂದ ಗೋಡೆ ತೇವಗೊಂಡು, ಕುಸಿದು ಬಿದ್ದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಹೆಚ್ಚಿನ ಮಳೆ ಸುರಿತ್ತಿದೆ. ವಾಡಿಕೆ ಪ್ರಕಾರ ಜಿಲ್ಲೆಯಲ್ಲಿ 35.6 ಮಿಲಿ ಮೀಟರ್ ಆಗಬೇಕಿತ್ತು. ಆದರೆ ಜಿಲ್ಲೆಯಲ್ಲಿ 138 ಮಿಲಿ ಮೀಟರ್ ಮಳೆಯಾಗಿದೆ. ಸರಿಸುಮಾರು 288 ರಷ್ಟು ಮಳೆ ಹೆಚ್ಚಾಗಿದೆ.

ಇದನ್ನೂ ಓದಿ: Karnataka Weather: ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಎರಡು ದಿನ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಜೂನ್ ಮತ್ತು ಜುಲೈ ಆರಂಭದ ದಿನಗಳಲ್ಲಿ ಮಳೆಯಾಗಿರಲಿಲ್ಲಾ. ಹೀಗಾಗಿ ಬರದ ಕಾರ್ಮೋಡ ಕವಿದಿತ್ತು. ಆದರೆ ಜುಲೈ 15 ರಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಜೊತೆಗೆ ಅನೇಕರ ಆತಂಕವನ್ನು ಹೆಚ್ಚಿಸಿದೆ.

ನಗರದ ಶಹಬಜಾರ್ ಪ್ರದೇಶದಲ್ಲಿ ಎರಡು ದಿನದ ಹಿಂದೆಯಷ್ಟೇ ಮಣ್ಣು ಮತ್ತು ಕಲ್ಲಿನಿಂದ ನಿರ್ಮಾಣ ಮಾಡಿದ್ದ ದೊಡ್ಡ ಗೋಡೆ ಕುಸಿದು ಬಿದ್ದಿತ್ತು. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದೇ ಇದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿತ್ತು.

ಅಪಫಜಲಪುರ ತಾಲೂಕಿನ ಸಿದನೂರು, ಚಿತ್ತಾಪುರ, ಚಿಂಚೋಳಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಸಾಕಷ್ಟು ಮನೆಗಳ ಗೋಡೆಗಳು ನಿರಂತರ ಮಳೆಯಿಂದ ಕುಸಿದು ಬಿದ್ದಿವೆ. ಜಿಲ್ಲೆಯಲ್ಲಿ ಹೆಚ್ಚಾಗಿ ಮಣ್ಣು ಮತ್ತು ಕಲ್ಲಿನಿಂದ ನಿರ್ಮಾಣ ಮಾಡಿರುವ ಬಹಳಷ್ಟು ಮನೆಗಳಿವೆ. ಅವುಗಳಿಗೆ ಅನೇಕರು ಸಿಮೆಂಟ್ ಕೂಡಾ ಹೊಡೆದಿಲ್ಲಾ. ಭಾರೀ ಮಳೆಯಾದರೆ ಮಣ್ಣು ಕರಗುವುದರಿಂದ ಗೋಡೆಗಳು ಕುಸಿದು ಬೀಳುತ್ತವೆ.

ಇದನ್ನೂ ಓದಿ: ಕಲಬುರಗಿ‌ ಜಿಲ್ಲೆಯಾದ್ಯಂತ ಮುಂದಿನ ಒಂದು ವಾರ ಮಳೆ: ನದಿ ದಂಡೆಗೆ ಹೋಗಿ ಸೆಲ್ಪಿ ಹುಚ್ಚಾಟ ನಡೆಸದಂತೆ ಡಿಸಿ ಸೂಚನೆ

ಒಂದು ವಾರದಲ್ಲಿ ನೂರಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದು ಬಿದ್ದಿರುವ ಮಾಹಿತಿಯಿದ್ದು, ಈ ಬಗ್ಗೆ ಸಮಗ್ರ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹ ಮಾಡುತ್ತಿದ್ದಾರೆ. ಮಣ್ಣಿನ ಮನೆ ಇರುವವರು ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಆತಂಕ ಆರಂಭವಾಗಿದ್ದು, ತಮ್ಮ ಮನೆಯಲ್ಲೇ ತಾವು ಇರಲು ಜನರು ಭಯ ಪಡುತ್ತಿದ್ದಾರೆ. ಯಾವಾಗ ಮಳೆ ಕಡಿಮೆಯಾಗುತ್ತದೆ ಅಂತ ಕಾಯುವ ಸ್ಥಿತಿ ಎದುರಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.