ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ, ಕೋಟ್ಯಂತರ ರೂ. ಅನುದಾನ: ಸಿದ್ದರಾಮಯ್ಯ ಭರ್ಜರಿ ಕೊಡುಗೆ
ಕಲಬುರಗಿ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಕೆಕೆಆರ್ಡಿಬಿಗೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿದರು. ಈ ವೇಳೆ ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕಲಬುರಗಿ, ಸೆಪ್ಟೆಂಬರ್ 17: ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಇಂದು ಕಲ್ಯಾಣ ಕರ್ನಾಟಕ ಉತ್ಸವ (Kalyana Karnataka Utsava) ಆಚರಿಸಲಾಗುತ್ತಿದೆ. ಇದಕ್ಕಾಗಿಯೇ ಸಿಎಂ ಸಿದ್ದರಾಮಯ್ಯ (Siddaramaiah) ಕಲಬುರಗಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಈ ಶುಭ ಸಂದರ್ಭದಲ್ಲಿ ಈ ಭಾಗದ ಅಭಿವೃದ್ದಿಗೋಸ್ಕರ ಕೆಕೆಆರ್ಡಿಬಿಗೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿದ್ದಾರೆ. ಜೊತೆಗೆ ಕೋಟ್ಯಂತರ ರೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೆಕೆಆರ್ಡಿಬಿಗೆ ಪ್ರತ್ಯೇಕ ಸಚಿವಾಲಯ
ಕಲಬುರಗಿ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಭಾಗಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಮಂಗಳವಾರ ನಡೆದ ಸಚಿವ ಸಂಪುಟದಲ್ಲಿ ಕೆಕೆಆರ್ಡಿಬಿಗೆ ಪ್ರತ್ಯೇಕ ಸಚಿವಾಲಯಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಉತ್ಸವ: ಕಲಬುರಗಿಗೆ ಸಿಎಂ ಭೇಟಿ, ಸರ್ದಾರ್ ಪಟೇಲರ ಪುತ್ಥಳಿಗೆ ಮಾಲಾರ್ಪಣೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ 350 ಕೆಪಿಎಸ್ ಶಾಲೆ ನಿರ್ಮಾಣವಾಗುತ್ತಿದೆ. 7 ಜಿಲ್ಲೆಗಳಲ್ಲಿ 204 ಕೋಟಿ ರೂ ವೆಚ್ಚದಲ್ಲಿ ವಸತಿ ನಿಲಯಗಳು, ಜಿಲ್ಲೆಯಲ್ಲಿ 2,515 ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ಈ ಭಾಗದ ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷೆ ತಯಾರಿಕೆಗೆ ವಿಶೇಷ ತರಬೇತಿ ಕೇಂದ್ರ ನಿರ್ಮಾಣ ಮಾಡಲಾಗಿದೆ ಎಂದರು.
ಕಲಬುರಗಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿಮ್ಹಾನ್ಸ್ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕಾಗಿ 220 ಕೋಟಿ ರೂ. ಅಲ್ಲದೇ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದೇವೆ. ಇಂದು 9 ಕೋಟಿ ರೂ. ವೆಚ್ಚದಲ್ಲಿ ಕೆಕೆಆರ್ಡಿಬಿ ಹಾಟ್೯ ಲೈನ್ಗೆ ಚಾಲನೆ ನೀಡುತ್ತಿದ್ದೇವೆ. ಆ ಮೂಲಕ ಕಲಬುರಗಿಯನ್ನ ಪ್ರಾದೇಶಿಕ ಹೆಲ್ತ್ ಹಬ್ ನಿರ್ಮಾಣ ಮಾಡುವ ಗುರಿಯತ್ತ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದರು.
ಕಲಬುರಗಿ ರೊಟ್ಟಿಯನ್ನು ಜಾಗತಿಕ ಬ್ರ್ಯಾಂಡ್ ಮಾಡಿದ್ದೇವೆ. ಕೊಪ್ಪಳದಲ್ಲಿ ತೋಟಗಾರಿಕೆ ಟೆಕ್ಪಾರ್ಕ್ ನಿರ್ಮಾಣ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಿಗೆ ಮಾಡುವ ಉದ್ದೇಶದಿಂದ ಹಸಿರು ಪಥ ಯೋಜನೆಗೆ 100 ಕೋಟಿ ರೂ. ನೀಡಿದ್ದೇವೆ. 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ರಸ್ತೆ ನಿರ್ಮಾಣಕ್ಕಾಗಿ ಕಲ್ಯಾಣ ಪಥ ಯೋಜನೆ ಆರಂಭಿಸಿದ್ದೇವೆ.
ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನಕ್ಕೆ ಪರಿಹಾರ ನಿಗದಿ: 1 ಎಕರೆಗೆ ಎಷ್ಟು ಲಕ್ಷ ಗೊತ್ತಾ?
ಏಳು ಜಿಲ್ಲೆಗಳ ಹೊಸ ತಾಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣ ಮಾಡುತ್ತಿದ್ದೇವೆ. ಕಲಬುರಗಿಯನ್ನ ಕ್ರೀಡಾ ನಗರಿಯನ್ನಾಗಿ ಮಾಡುವುದಕ್ಕಾಗಿ 18 ಕೋಟಿ ರೂ ನೀಡಲಾಗಿದೆ. ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿಟ್ಟಿದ್ದು, ಈಗಾಗಲೇ 10 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡದಲ್ಲೇ ಶುಭಾಶಯ ತಿಳಿಸಿದ ಅಮಿತ್ ಶಾ
ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕನ್ನಡದಲ್ಲೇ ಶುಭಾಶಯ ತಿಳಿಸಿದ್ದಾರೆ. ಹೈದರಾಬಾದ್-ಕರ್ನಾಟಕದ ನಮ್ಮ ಸಹೋದರ ಸಹೋದರಿಯರಿಗೆ ಹೈದರಾಬಾದ್ ವಿಮೋಚನಾ ದಿನದ ಶುಭಾಶಯಗಳು ಎಂದಿದ್ದಾರೆ.
ಅಮಿತ್ ಶಾ ಟ್ವೀಟ್
ಹೈದರಾಬಾದ್-ಕರ್ನಾಟಕದ ನಮ್ಮ ಸಹೋದರ ಸಹೋದರಿಯರಿಗೆ ಹೈದರಾಬಾದ್ ವಿಮೋಚನಾ ದಿನದ ಶುಭಾಶಯಗಳು.
ನಿಜಾಮರು ಮತ್ತು ರಜಾಕರ ದುಷ್ಟ ಆಡಳಿತವನ್ನು ಕಿತ್ತೊಗೆದು ಅಖಂಡ ಭಾರತವನ್ನು ನಿರ್ಮಿಸುವ ನಿಮ್ಮ ಅಚಲ ಏಕತೆ ಮತ್ತು ಬದ್ಧತೆಗೆ ಈ ದಿನವು ಅಳಿಸಲಾಗದ ಉದಾಹರಣೆಯಾಗಿದೆ.
ಭಾರತದ ಹೃದಯದಲ್ಲಿ ಸದಾ ಜೀವಂತವಾಗಿರುವ ಮತ್ತು ಸ್ಪೂರ್ತಿಯ ಶಾಶ್ವತ ಪ್ರೇರಣೆಯ…
— Amit Shah (@AmitShah) September 17, 2025
ನಿಜಾಮರು ಮತ್ತು ರಜಾಕರ ದುಷ್ಟ ಆಡಳಿತವನ್ನು ಕಿತ್ತೊಗೆದು ಅಖಂಡ ಭಾರತವನ್ನು ನಿರ್ಮಿಸುವ ನಿಮ್ಮ ಅಚಲ ಏಕತೆ ಮತ್ತು ಬದ್ಧತೆಗೆ ಈ ದಿನವು ಅಳಿಸಲಾಗದ ಉದಾಹರಣೆಯಾಗಿದೆ. ಭಾರತದ ಹೃದಯದಲ್ಲಿ ಸದಾ ಜೀವಂತವಾಗಿರುವ ಮತ್ತು ಸ್ಪೂರ್ತಿಯ ಶಾಶ್ವತ ಪ್ರೇರಣೆಯ ಮೂಲವಾಗಿರುವ ಚಳವಳಿಯ ಹುತಾತ್ಮರಿಗೆ ನನ್ನ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:02 am, Wed, 17 September 25