ಯಡಿಯೂರಪ್ಪ ಮನೆಗೆ ಕಲ್ಲು ತೂರಾಟ ಕಾಂಗ್ರೆಸ್ ಪ್ರಚೋದನೆ; ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮೇಲೆ ನಡೆದ ಕಲ್ಲು ತೂರಾಟವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಪ್ರಚೋದನೆ ನೀಡಿ ಮಾಡಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಖ್ಯಾಂಶಗಳು
- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು.
- ಸುಳ್ಳು ಹೇಳಿ ಪ್ರಚೋದಿಸಿ, ರಾತ್ರಿ ಸಭೆ ಕರೆದು ವ್ಯವಸ್ಥಿತವಾಗಿ ಕಾಂಗ್ರೆಸ್ ಸಂಚು ಹೂಡಿತ್ತು; ಬೊಮ್ಮಾಯಿ
- ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂಬುದು ನಿಜ ಎಂದ ಬೊಮ್ಮಾಯಿ
ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ಮನೆ ಮೇಲೆ ನಡೆದ ಕಲ್ಲು ತೂರಾಟವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಪ್ರಚೋದನೆ ನೀಡಿ ಮಾಡಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು. ಅವರು ಇಂದು ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿ ಕುತಂತ್ರ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅಲ್ಲಿ ಕ್ಯಾಮರಾದಲ್ಲಿ ಸೆರೆಸಿಕ್ಕವರು ಕಾಂಗ್ರೆಸ್ ನಾಯಕರು. ಅವರು ಹಿಂದಿನ ದಿನ ಜನಾಂಗದವರನ್ನು ತಪ್ಪು ದಾರಿಗೆ ಎಳೆದು, ಎಸ್ಸಿ ಪಟ್ಟಿಯಿಂದ ಜನಾಂಗವನ್ನು ತೆಗೆಯುತ್ತಾರೆ ಎಂದು ಸುಳ್ಳು ಹೇಳಿ ಪ್ರಚೋದಿಸಿ, ರಾತ್ರಿ ಸಭೆ ಕರೆದು ವ್ಯವಸ್ಥಿತವಾಗಿ ಕಾಂಗ್ರೆಸ್ ಮಾಡಿರುವುದು. ಸಾಕ್ಷಿ ಸಮೇತವಾಗಿ ನಾನು ಹೇಳುತ್ತಿರುವುದು. ಸುಳ್ಳು ಹೇಳುವುದನ್ನು ಡಿ.ಕೆ.ಶಿವಕುಮಾರ್ ಬಿಡಬೇಕು ಎಂದರು.
ಕಾಂಗ್ರೆಸ್ ನವರಿಗೆ ಹೊಟ್ಟೆಕಿಚ್ಚು
ಜವಳಿ ಪಾರ್ಕ್ ಬಗ್ಗೆ ಒಂದೂವರೆ ವರ್ಷಗಳಿಂದ ಮಾತನಾಡುತ್ತಿದ್ದೇವೆ. ಜವಳಿ ಪಾರ್ಕ್ ನೂತನ ಜವಳಿ ನೀತಿಯಲ್ಲಿ ಬಂದಿದ್ದು, ಪ್ರಧಾನಿಗಳು ಜವಳಿ ಮೂಲಕ ಹೆಚ್ಚಿನ ಉದ್ಯೋಗ ಮತ್ತು ರಫ್ತು ಆಗಬೇಕೆಂಬ ಹಿನ್ನೆಲೆಯಲ್ಲಿ ಆಗಿದೆ. ಕಲಬುರಗಿಗೆ ಬಂದಿರುವುದಕ್ಕೆ ಅಭಿನಂದನೆ ಸಲ್ಲಿಸಬೇಕು. ಕಾಂಗ್ರೆಸ್ ನವರಿಗೆ ಹೊಟ್ಟೆಕಿಚ್ಚು. ಅವರು ಮಾಡಲು ಸಾಧ್ಯವಾಗದೆ ಇದ್ದುದನ್ನು ನಾವು ಮಾಡಿದ್ದೇವೆ ಎಂದು. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಶಿವಮೊಗ್ಗ: ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟಕ್ಕೆ ಪೊಲೀಸರ ನಿರ್ಲಕ್ಷ್ಯ ಕಾರಣ
ಚೆಲುವ ನಾರಾಯಣಸ್ವಾಮಿ ಮಾತು ನಂಬಲಾಗುವುದಿಲ್ಲ
ಎಸ್.ಟಿ. ಸೋಮಶೇಖರ್ ಹಾಗೂ ಬಿ.ಎ. ಬಸವರಾಜ ಅವರು ಚುನಾವಣೆ ಘೋಷಣೆ ಯಾದ ನಂತರ ವಲಸೆ ಬರಲಿದ್ದಾರೆ ಎಂದು ಚೆಲುವ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅವರೇ ಒಬ್ಬ ವಲಸಿಗರು, ಅವರ ಮಾತು ನಂಬಲು ಆಗುತ್ತದೆಯೇ ಎಂದರು.
ಜೆಡಿಎಸ್ ಜತೆ ಹೊಂದಾಣಿಕೆ ಇಲ್ಲ
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅವರು ಹೇಳಿರುವುದು ಸರಿಯಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೊಂದಾಣಿಕೆಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:32 pm, Tue, 28 March 23




