
ಹೆಸರಾಂತ ಕನ್ನಡ ಮತ್ತು ಸಂಸ್ಕೃತ ವಿದ್ವಾನ್ ಡಾ.ಎಮ್.ಎಸ್.ಬಸವರಾಜಯ್ಯ (97) ಮೈಸೂರಿನಲ್ಲಿ ಬುಧವಾರ ಸಂಜೆ ನಿಧನರಾಗಿದ್ದಾರೆ. ಮೈಸೂರಿನ ಗುರುರಾಜ ಬಡಾವಣೆಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾರಸ್ವತ ಲೋಕದಲ್ಲಿ ‘ಬಸವರಾಜಮರಿ’ ಎಂದೇ ಖ್ಯಾತರಾಗಿದ್ದ ಶ್ರೀ ಯುತರು ಕನ್ನಡ ಮತ್ತು ಸಂಸ್ಕೃತದಲ್ಲಿ ಒಟ್ಟು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಮಹಾಕವಿ ಷಡಕ್ಷರದೇವನ ‘ಕವಿ ಕರ್ಣ ರಸಾಯನ’ ಮಹಾ ಕಾವ್ಯವನ್ನು ಸಂಪಾದನೆ ಮಾಡಿದ್ದರು. ವೀರಮಹೇಶ್ವರಾಚಾರ ಸಂಗ್ರಹ, ಸರ್ಪಭೂಷಣ ಶಿವಯೋಗಿಗಳ ‘ಭುಜಂಗಮಾಲಾ ಸಂಕೀರ್ತನಂ’ ಸ್ತೋತ್ರ ಕೃತಿಯನ್ನು ಕನ್ನಡ ಭಾವಾನುವಾದ ಸಹಿತ ಸಂಪಾದಿಸಿ ಪ್ರಕಟಿಸಿದ್ದರು. ಡಾ.ಬಸವರಾಜಯ್ಯನವರು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮಲಗೊಂಡನಹಳ್ಳಿಯವರು. ಇವರ ತಂದೆ ಶರಣ ದಿವಂಗತ ಸಿದ್ಧಬಸವಯ್ಯ, ತಾಯಿ ಶರಣೆ ದಿವಂಗತ ಚನ್ನವ್ವ. ನಾಲ್ವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ. ದಿವಂಗತರ ಪತ್ನಿ ಶ್ರೀಮತಿ ಗೌರಮ್ಮನವರು 2014 ರಲ್ಲಿ ತೀರಿಕೊಂಡಿದ್ದರು.
ವಿದ್ವಾನ್ ದಿವಂಗತ ಎಂ.ಎಸ್.ಬಸವರಾಜಯ್ಯನವರ ಅಂತ್ಯಕ್ರಿಯೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಪುರಲೆಹಳ್ಳಿಯಲ್ಲಿ ಇಂದು ಸಂಜೆ ನಡೆಯಲಿದೆ. ಡಾ.ಬಸವರಾಜಯ್ಯನವರ ನಿಧನಕ್ಕೆ ಸುತ್ತೂರುಶ್ರೀಗಳು, ನೊಣವಿನಕೆರೆ ಮಠದ ಕರಿವೃಷಭೇಂದ್ರ ಸ್ವಾಮೀಜಿ, ವಿವಿಧ ಮಠಾಧೀಶರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.