ಹೊಳೆ ಹರಿವ ದಿಕ್ಕನ್ನೇ ಬದಲಾಯಿಸಿದ ಹೂಳು: ಪಿನಾಕಿನಿ ತೀರದ ನಿವಾಸಿಗಳಿಗೆ ತಪ್ಪದ ಗೋಳು!
ಉಡುಪಿಯ ಪಿನಾಕಿನಿ ಹೊಳೆಯಲ್ಲಿ ಹೂಳು ತುಂಬಿ ಹರಿವಿನ ದಿಕ್ಕು ಬದಲಾಗಿದ್ದರಿಂದ ತೀರ ಪ್ರದೇಶದಲ್ಲಿ ತೀವ್ರ ಭೂ ಕೊರೆತ ಉಂಟಾಗಿದೆ. ಕೃಷಿ ಭೂಮಿ, ಮನೆಗಳು ಅಪಾಯದಲ್ಲಿದ್ದು, ಮಳೆಗಾಲದ ಮುನ್ನ ರಕ್ಷಣಾ ಕ್ರಮ ಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ. ಉಬ್ಬರದ ವೇಳೆಯಲ್ಲಿ ಸಮುದ್ರದ ಉಪ್ಪು ನೀರು ಪಿನಾಕಿನಿ ಹೊಳೆಗೆ ನುಗ್ಗಿ ಸುತ್ತಮುತ್ತಲಿನ ಬಾವಿ ನೀರನ್ನೂ ಉಪ್ಪಾಗಿಸುತ್ತಿದೆ. ಇನ್ನು ಗ್ರಾಮ ಪಂಚಾಯತ್ನಿಂದ ಸಮರ್ಪಕವಾಗಿ ನೀರಿನ ಸೌಲಭ್ಯವೂ ಸಿಗುತ್ತಿಲ್ಲ ಎನ್ನುವುದು ನಿವಾಸಿಗಳ ಆರೋಪವಾಗಿದೆ.

ಉಡುಪಿ, ಜೂನ್ 04 : ಜಿಲ್ಲೆಯ ಕೋಟೆ ಮತ್ತು ಮಟ್ಟು ಭಾಗದ ಜನರಿಗೆ ಜೀವನಾಡಿಯಾಗಿದ್ದ ಪಿನಾಕಿನಿ ಹೊಳೆಯೇ ಈಗ ಇಲ್ಲಿನ ನಿವಾಸಿಗಳಿಗೆ ಜೀವಭಯ ಹುಟ್ಟಿಸಿದೆ. ಹೊಳೆಯ ಮಧ್ಯದಲ್ಲಿ ಹೂಳು ತುಂಬಿ ಹರಿವಿನ ದಿಕ್ಕೇ ಬದಲಾಗಿರುವ ಪರಿಣಾಮ ತೀರ ಪ್ರದೇಶಗಳಲ್ಲಿ ಭೂ ಕೊರೆತ ಉಂಟಾಗುತ್ತಿದ್ದು ಕೃಷಿ ಜಮೀನು ಹೊಳೆ ಪಾಲಾಗುತ್ತಿವೆ. ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈಗಲೇ ಹೀಗಾದರೆ ಮಳೆಗಾಲ ಎದುರಿಸೋದು ಹೇಗೆಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ಹೆಚ್ಚಿದ ಭೂ ಕೊರೆತ
ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರೆಂಕುದ್ರು ಮತ್ತು ಮಟ್ಟು ಕಟ್ಟದ ನಿವಾಸಿಗಳ ಪ್ರಕಾರ, ಹೊಳೆಯ ಮಧ್ಯಭಾಗದಲ್ಲಿ ವರ್ಷಗಳಿಂದ ಹೂಳು ತುಂಬಿರುವುದೇ ಇಂದಿನ ಸಮಸ್ಯೆಗೆ ಪ್ರಮುಖ ಕಾರಣ. ಹೂಳಿನ ಪರಿಣಾಮ ಹೊಳೆಯ ಹರಿವಿನ ದಿಕ್ಕು ಬದಲಾಗಿದ್ದು, ನೀರು ನೇರವಾಗಿ ಭೂ ಪ್ರದೇಶದತ್ತ ನುಗ್ಗಿ ತೀರ ಪ್ರದೇಶದ ಭೂ ಕೊರೆತಕ್ಕೆ ಕಾರಣವಾಗುತ್ತಿದೆ. ಮೊದಲು ಅಡಿ ಲೆಕ್ಕದಲ್ಲಿ ಆಗುತ್ತಿದ್ದ ಭೂ ಕೊರೆತ ಇದೀಗ ಮೀಟರ್ಗಟ್ಟಲೆ ದೂರಕ್ಕೆ ಹೆಚ್ಚಿದೆ ಎನ್ನುವುದು ಸ್ಥಳೀಯರ ಅಳಲು. ಈಗಾಗಲೇ ಸುಮಾರು 10ರಿಂದ 15 ಮೀಟರ್ಗೂ ಅಧಿಕ ಭೂ ಪ್ರದೇಶ ಹೊಳೆ ಪಾಲಾಗಿದೆ. ನೂರಾರು ಫಲಭರಿತ ತೆಂಗಿನ ಮರಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಉಳಿದ ಜಮೀನಿನಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಈ ಬಾರಿಯ ಮಳೆಗಾಲ ಮತ್ತಷ್ಟು ಭಯ ಹುಟ್ಟಿಸಿದೆ.
ಇದನ್ನೂ ಓದಿ: ಮೃತರನ್ನೂ ಬಿಡದ ಕಳ್ಳರು; ಮಹಿಳೆ ಮೈಮೇಲಿದ್ದ 18 ಗ್ರಾಂ ಚಿನ್ನಾಭರಣಗಳು ಕಳವು
ಇದೊಂದೇ ಸಮಸ್ಯೆಯಲ್ಲ, ಉಬ್ಬರದ ವೇಳೆಯಲ್ಲಿ ಸಮುದ್ರದ ಉಪ್ಪು ನೀರು ಪಿನಾಕಿನಿ ಹೊಳೆಗೆ ನುಗ್ಗಿ ಸುತ್ತಮುತ್ತಲಿನ ಬಾವಿ ನೀರನ್ನೂ ಉಪ್ಪಾಗಿಸುತ್ತಿದೆ. ಇನ್ನು ಗ್ರಾಮ ಪಂಚಾಯತ್ನಿಂದ ಸಮರ್ಪಕವಾಗಿ ನಲ್ಲಿ ನೀರಿನ ಸೌಲಭ್ಯವೂ ಸಿಗುತ್ತಿಲ್ಲ ಎನ್ನುವುದು ನಿವಾಸಿಗಳ ಆರೋಪ. ಪ್ರವಾಹದ ಸಂದರ್ಭ ವಿಷಜಂತುಗಳು ಮನೆಗಳಿಗೆ ನುಗ್ಗುತ್ತಿರುವುದು ಕೂಡ ಮತ್ತೊಂದು ಸಂಕಷ್ಟವಾಗಿ ಪರಿಣಮಿಸಿದೆ. ಹೀಗಾಗಿ ಪಿನಾಕಿನಿ ಹೊಳೆಯ ಮಧ್ಯದಲ್ಲಿ ತುಂಬಿರುವ ಹೂಳು ತೆರವುಗೊಳಿಸಿ, ತೀರ ಪ್ರದೇಶದ ಭೂಮಿ ರಕ್ಷಣೆಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಭೂ ಪ್ರದೇಶ ಹೊಳೆ ಪಾಲಾಗುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




