ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ್ದ ಸರ್ಕಾರಿ ಕಟ್ಟಡವೀಗ ಅನೈತಿಕ ಚಟುವಟಿಕೆಗಳ ತಾಣ: ಹೇಳೋರು ಇಲ್ಲ ಕೇಳೋರು ಇಲ್ಲ!
ಬಾಗಲಕೋಟೆಯ ನವನಗರದಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಸರ್ಕಾರಿ ನರ್ಸರಿ ಶಾಲೆ ಕಟ್ಟಡ ಬಳಕೆಯಾಗದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿರುವ ಬಗ್ಗೆ ಕಿಡಿ ಕಾರಿದ್ದಾರೆ. ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ ಮೆಡಿಕಲ್ ಕಾಲೇಜಿಗೆ ಕಟ್ಟಡವನ್ನು ಇತ್ತೀಚೆಗೆ ಹಸ್ತಾಂತರ ಮಾಡಿದ್ದೇವೆ ಎನ್ನುವ ಮೂಲಕ ನುಣುಚಿಕೊಳ್ಳುತ್ತಿದ್ದಾರೆ.

ಬಾಗಲಕೋಟೆ, ಜೂನ್ 04: ಇಲ್ಲಿನ ನವನಗರ ಯುನಿಟ್ ಎರಡರ ಸೆಕ್ಟರ್ ನಂಬರ್ 10ರಲ್ಲಿ ಕೋಟ್ಯಾಂತರ ರೂಪಾಯಿ ಹಣ ವೆಚ್ಚ ಮಾಡಿ ನಿರ್ಮಿಸಲಾಗಿರುವ ಸರಕಾರಿ ನರ್ಸರಿ ಶಾಲೆಯ ಕಟ್ಟಡ ಭೂತ ಬಂಗಲೆಯಂತಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಆವರಣದ ಗೇಟ್ಗೆ ಕನಿಷ್ಠ ಬೀಗವೂ ಇಲ್ಲದ ಕಾರಣ ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ ಎಂಬಂತಾಗಿದೆ. ಕಿಟಕಿಗಳ ಗಾಜುಗಳು ಚೂರಾಗಿದ್ದರೆ, ಕೊಠಡಿಗಳ ಬಾಗಿಲು ಮುರಿದಿವೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇದನ್ನು ನಿರ್ವಹಣೆ ಮಾಡಬೇಕಾದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಕಣ್ಮುಚ್ಚಿ ಕುಳಿತಿರುವ ಬಗ್ಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಕಟ್ಟಡದ ಬಹುತೇಕ ಭಾಗಗಳು ಧ್ವಂಸ
ಆಲಮಟ್ಟಿ ಜಲಾಶಯದಿಂದಾಗಿ ಬಾಗಲಕೋಟೆ ನಗರದ ಬಹುತೇಕ ಪ್ರದೇಶಗಳು ಮುಳುಗಿದ ಬಳಿಕ ಅಲ್ಲಿನ ಸಂತ್ರಸ್ತರಿಗೆ ಸೂರು, ಶಾಲೆ ಸರಕಾರಿ ಕಚೇರಿ ಎಲ್ಲವನ್ನೂ ನವನಗರ ಎಂಬ ಹೊಸ ಸ್ಥಳ ನಿರ್ಮಾಣ ಮಾಡಿ ಸ್ಥಳಾಂತರ ಮಾಡಲಾಗಿದೆ. ಆದರೆ ಯುನಿಟ್ ಎರಡರಲ್ಲಿನ ಕೆಲ ಸರಕಾರಿ ಕಟ್ಟಡಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿಗಿದ್ದು, ಅದಕ್ಕೆ ಜ್ವಲಂತ ಸಾಕ್ಷಿ ಎಂಬಂತಿದೆ ಈ ನರ್ಸರಿ ಶಾಲೆಯ ಕಟ್ಟಡ. ದುರಂತ ಅಂದರೆ ಮಕ್ಕಳ ಶಿಕ್ಷಣಕ್ಕಾಗಿ ನಿರ್ಮಿಸಿದ ಈ ಕಟ್ಟಡದಲ್ಲಿ ಒಂದೇ ಒಂದು ದಿನ ಶಾಲೆ ನಡೆದಿಲ್ಲ. ಬಳಕೆಗೂ ಮುನ್ನವೇ ಕಟ್ಟಡದ ಬಹುತೇಕ ಭಾಗಗಳು ಧ್ವಂಸಗೊಂಡಿದ್ದು, ಕಟ್ಟಡದ ಉದ್ದೇಶವೇ ಇದನ್ನು ನಿರ್ಮಿಸಿದವರಿಗೆ ಮರೆತಂದಿದೆ.
ಇದನ್ನೂ ಓದಿ: ಮಹಾಲಿಂಗಪುರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; 13.34 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ವಶ!
ಅಧಿಕಾರಿಗಳು ಹೇಳೋದೇನು?
ಇಷ್ಟೆಲ್ಲ ಆದರೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮಾತ್ರ ಕನಿಷ್ಠ ಇತ್ತ ತಿರುಗಿಯೂ ನೋಡ್ತಿಲ್ಲ. ಹೀಗಾಗಿ ಸಾರ್ವಜನಿಕರ ತೆರಿಗೆ ಹಣ ಇಲ್ಲಿ ಮಣ್ಣು ಪಾಲಾಗಿದೆ. ಇನ್ನು ಈ ಬಗ್ಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳನ್ನು ಕೇಳಿದರೆ, ನಾವು ಆವರಣಕ್ಕೆ ಬೀಗ ಹಾಕಿದ್ದೆವು. ಗೇಟ್ ಸರಿಪಡಿಸಿದ್ದೆವು. ಜೊತೆಗೆ ಸಿಸಿ ಕ್ಯಾಮರಾಗಳನ್ನು ಕೂಡ ಅಳವಡಿಸಿದ್ದೆವು. ಆದರೆ ಕಿಡಿಕೇಡಿಗಳು ಎಲ್ಲವನ್ನೂ ಜಖಂ ಮಾಡಿದ್ದಾರೆ ಎನ್ನುತ್ತಿದ್ದಾರೆ. ಅಲ್ಲದೆ ಸದ್ಯ ಈ ಕಟ್ಟಡವನ್ನು ಬಾಗಲಕೋಟೆ ಮೆಡಿಕಲ್ ಕಾಲೇಜಿಗೆ ಹಸ್ತಾಂತರ ಮಾಡಿದ್ದೇವೆ. ಮೆಡಿಕಲ್ ಕಾಲೇಜಿನಿಂದ ಇದು ಹುಡುಗರ ಹಾಸ್ಟೆಲ್ ಆಗಿ ಬದಲಾಗಲಿದೆ. ಈಗ ಅವರೇ ಇದರ ದುರಸ್ತಿ ಮಾಡಲಿದ್ದಾರೆ ಎಂದು ಹೇಳಿ ನುಣುಚಿಕೊಂಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




