ಕರ್ನಾಟಕದ ನೀರಾವರಿ ಸಮಸ್ಯೆ: ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧಾರ- ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: Aug 23, 2023 | 3:02 PM

ಜಲ ವಿವಾದ, ಭಾಷೆ ಗಡಿ ಬಗ್ಗೆ ರಾಜ್ಯದ ನಿಲುವು ತೆಗೆದುಕೊಳ್ಳುವಾಗ ಯಾವುದೇ ರಾಜಕೀಯ ಮಾಡಿಲ್ಲ. ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿಲುವುಗಳಿಗೆ ಬೆಂಬಲವಿದೆ ಎಂದು ಸರ್ವ ಪಕ್ಷದ ನಾಯಕರು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕದ ನೀರಾವರಿ ಸಮಸ್ಯೆ: ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧಾರ- ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Follow us on

ಬೆಂಗಳೂರು: ರಾಜ್ಯದ ಮೇಕೆದಾಟು (Mekedatu), ಅಪ್ಪರ್​ ಕೃಷ್ಣ, ಮಹದಾಯಿ (Mahadayi) ಮತ್ತು ಕಾವೇರಿ ನದಿ ವಿವಾದ ಬಗ್ಗೆ ಸರ್ವ ಪಕ್ಷಗಳ ನಿಯೋಗ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Naredra Modi) ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊತ್ತೇವೆ. ಇದಕ್ಕೆ ಸರ್ವ ಪಕ್ಷಗಳು ಸಮ್ಮತಿ ಸೂಚಿಸಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿದರು. ಬೆಂಗಳೂರಿನಲ್ಲಿ ಇಂದು (ಆ.23) ಸರ್ವಪಕ್ಷಗಳ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೇಂದ್ರ ಪರಿಸರ ಸಚಿವರನ್ನು ಕೂಡ ನಿಯೋಗ ಭೇಟಿ ಮಾಡುತ್ತೇವೆ. ಮೇಕೆದಾಟು ಯೋಜನೆಗೆ ಅರಣ್ಯ ಪ್ರದೇಶದ ಕ್ಲಿಯರೆನ್ಸ್ ಕೊಡಬೇಕೆಂದು ಮನವಿ ಮಾಡುತ್ತೇವೆ ಎಂದರು.

ಜಲ ವಿವಾದ, ಭಾಷೆ ಗಡಿ ಬಗ್ಗೆ ರಾಜ್ಯದ ನಿಲುವು ತೆಗೆದುಕೊಳ್ಳುವಾಗ ಯಾವುದೇ ರಾಜಕೀಯ ಮಾಡಿಲ್ಲ. ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿಲುವುಗಳಿಗೆ ಬೆಂಬಲವಿದೆ ಎಂದು ಸರ್ವ ಪಕ್ಷದ ನಾಯಕರು ಹೇಳಿದ್ದಾರೆ ಎಂದು ತಿಳಿಸಿದರು.

ಕೆಆರ್​ಎಸ್​ ಡ್ಯಾಂನಿಂದ ತಮಿಳುನಾಡಿಗೆ ಆಗಸ್ಟ್ ಕೊನೆಯವರೆಗೆ 86.38 ಟಿಎಂಸಿ ನೀರು ಬಿಡಬೇಕಾಗಿತ್ತು. ಜೂನ್​ನಲ್ಲಿ ಮಳೆಯ ಕೊರತೆ ಆಗಿತ್ತು, ಜುಲೈನಲ್ಲಿ ಮಳೆ ಬಂದಿದೆ. ಆಗಸ್ಟ್​ ತಿಂಗಳಿನಲ್ಲಿ ಮಳೆ ಕೊರತೆ ಆಗಿದೆ. ಕಬಿನಿ ಜಲಾಶಯಕ್ಕೆ ನೀರು ಬರುವುದೂ ಕೂಡ ಕಡಿಮೆಯಾಯ್ತು. ಸುಪ್ರೀಂಕೋರ್ಟ್​​ ತೀರ್ಪಿನ ಪ್ರಕಾರ ಜೂನ್​ನಲ್ಲಿ ಎರಡು ಟಿಎಂಸಿ ನೀರು, ಜುಲೈನಲ್ಲಿ 8.74 ಟಿಎಂಸಿ, ಆಗಸ್ಟ್​ನಲ್ಲಿ 26 ಟಿಎಂಸಿ ನೀರು ಬಿಟ್ಟಿದ್ದೇವೆ.

ಕಾವೇರಿ ಜಲ ವಿವಾದದ ಬಗ್ಗೆ ಸುಪ್ರೀಂಕೋರ್ಟ್​​ನಲ್ಲಿ ಕರ್ನಾಟಕದ ಪರವಾಗಿ ಸಮರ್ಥವಾಗಿ ವಾದ ಮಂಡಿಸಲು ಸಲಹೆ ನೀಡಿದ್ದೇವೆ. ತಮಿಳುನಾಡು ಅರ್ಜಿ ವಜಾ ಆಗುವಂತೆ ವಾದಮಾಡಿ ಎಂದಿದ್ದೇವೆ. ಬೆಳೆಗಳ ರಕ್ಷಣೆ ಮಾಡಬೇಕು, ಕುಡಿಯುವ ನೀರನ್ನೂ ಕೊಡಬೇಕು. ರೈತರ ರಕ್ಷಣೆ ರಾಜ್ಯ ಸರ್ಕಾರದ ಹೊಣೆ ಎಂದರು.

ಇದನ್ನೂ ಓದಿ: ಕಾವೇರಿ ಕಿಚ್ಚು.. ಅನ್ನದಾತರ ಸಿಟ್ಟು: ಸರ್ವಪಕ್ಷ ಸಭೆ ಬಳಿಕ ವಿರೋಧ ಪಕ್ಷಗಳ ನಾಯಕರು ಹೇಳಿದ್ದೇನು?

ಬಿಳಿಗುಂಡ್ಲಿನಿಂದ ಸಾಮಾನ್ಯ ವರ್ಷಗಳಲ್ಲಿ 127 ಟಿಎಂಸಿ ನೀರು ಬಿಡಬೇಕಾಗಿತ್ತು. ಟ್ರಿಬ್ಯೂನಲ್ ಪ್ರಕಾರ 192 ಟಿಎಂಸಿ ಬಿಡಬೇಕು ಎಂದಿತ್ತು. ಇವತ್ತಿನ ತನಕ ಸಂಕಷ್ಟದ ಸ್ಥಿತಿಯಲ್ಲಿ ನೀರು ಬಿಡಲಾಗುವುದಿಲ್ಲ. ಹೀಗಾಗಿ ಕಡಿಮೆ ನೀರನ್ನೇ ಬಿಟ್ಟಿದ್ದೇವೆ. ರೈತರ ಬೆಳೆಗಳನ್ನು ರಕ್ಷಣೆ ಮಾಡಬೇಕು, ಕುಡಿಯುವ ನೀರನ್ನೂ ಕೊಡಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಕಾವೇರಿ ನಿಮಗದ ಮುಂದೆ ವಾದ ಮಂಡಿಸಿದ್ದೇವೆ. 11ನೇ ತಾರಿಕು ತಾರೀಕು ಕಾವೇರಿ ನಿಗಮ 15 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಅಂತ ಹೇಳಿದ್ದರು. ಅಷ್ಟು ನೀರು ನಮ್ಮಲ್ಲಿಲ್ಲ ಎಂದಾಗ ರೆಗ್ಯುಲೇಟರಿ ಕಮಿಟಿ 10 ಸಾವಿರ ಕ್ಯುಸೆಕ್ಸ್ ನೀರು ಬಿಡಲು ಹೇಳಿದ್ದರು ಎಂದು ತಿಳಿಸಿದ್ದಾರೆ.

ಇದರ ಮಧ್ಯೆ ಸುಪ್ರಿಂ ಕೋರ್ಟ್​​ನಲ್ಲಿ ತಮಿಳುನಾಡು ಅರ್ಜಿ ಸಲ್ಲಿಸಿದೆ. ಮೆಟ್ಟೂರ್ ಡ್ಯಾಂನಲ್ಲಿ 60 ಟಿಎಂಸಿ ನೀರು ಇತ್ತು. ಕುರವೈ ಬೆಳೆಗೆ 35 ಟಿಎಂಸಿ ನೀರು ತಮಿಳುನಾಡಿಗೆ ಬೇಕು. ಆದರೆ ಅವರು ಬಳಸಿಕೊಂಡಿರೋದು 65 ಟಿಎಂಸಿಗಿಂತ ಹೆಚ್ಚು. ನಿಯಮಕ್ಕಿಂತ ಹೆಚ್ಚು ಕುರುವೈ ಬೆಳೆ ಬೆಳೆಯುತ್ತಿದ್ದಾರೆ. ಮೆಟ್ಟೂರ್ ಡ್ಯಾಂನಲ್ಲಿ ನೀರು ಇದ್ದರೂ ಕೂಡ ಅವರು ನೀರಿಲ್ಲ ಅಂತ ವಾದ ಮಂಡಿಸುತ್ತಿದ್ದಾರೆ ಎಂದು ಗರಂ ಆದರು.

ಸುಪ್ರಿಂಕೋರ್ಟ್​ ಹಾಗೂ ಟ್ರಿಬ್ಯುನಲ್​​ನಲ್ಲಿ ಸಂಕಷ್ಟ ಸೂತ್ರ ತಯಾರಾಗಿಲ್ಲ. ಮೊದಲು ಸಂಕಷ್ಟ ಸೂತ್ರ ಆಗಬೇಕು, ಮೇಕೆದಾಟು ಜಲಾಶಯ ನಾವು ಕಟ್ಟಬೇಕು. ಆಗ ಇಂಥ ಸಂಕಷ್ಟ ಸ್ಥಿತಿ ಬಂದಾಗ ತಮಿಳುನಾಡಿಗೆ ನಾವೂ ನೀರು ಕೊಡಬಹುದು. ಯಾವುದೇ ಚರ್ಚೆ ಇಲ್ಲದೆ ಪುರಾವೆ ಇಲ್ಲದೆಯೇ ತಮಿಳುನಾಡು ವಿರೋಧ ಮಾಡುತ್ತಿದೆ ಎಂದರು.

ಮಹದಾಯಿ ಯೋಜನೆ ಬಗ್ಗೆ ಭರವಸೆ ನೀಡಿದ ಸಿಎಂ

ಇಂದಿನ ಸರ್ವಪಕ್ಷ ಸಭೆಯಕಲ್ಲಿ ರೈತರೂ ಮತ್ತು ಮಹದಾಯಿ ಹೋರಾಟಗಾರರು ಭಾಗಿಯಾಗಿದ್ದರು. ಸಭೆ ಬಳಿಕ ಮಹದಾಯಿ ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಹೋರಾಟಗಾರರಿಗೆ  ಡಿಪಿಆರ್ ಕ್ಲಿಯರೆನ್ಸ್​ಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುತ್ತೇವೆ. ಆದಷ್ಟು ಬೇಗ ಮಹದಾಯಿ ಯೋಜನೆಯನ್ನು ಪ್ರಾರಂಭ ಮಾಡುತ್ತೇವೆ ಎಂದು ಹೋರಾಟಗಾರರಿಗೆ ಭರವಸೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:30 pm, Wed, 23 August 23