ಬಾಕಿ ಉಳಿದಿದ್ದ ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನ ನೇಮಿಸಿದ ಬಿಜೆಪಿ: ಇಲ್ಲಿದೆ ಪಟ್ಟಿ
ಕೆಲ ರಾಜಕೀಯ ಮುಸುಕಿನ ಗುದ್ದಾಟದಿಂದ ಬಾಕಿ ಉಳಿದಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕವಾಗಿದೆ. ಬಾಕಿ ಉಳಿಸಿಕೊಂಡಿದ್ದ 10 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನ ನೇಮಕ ಮಾಡಿ ಕರ್ನಾಟಕ ಬಿಜೆಪಿ ಆದೇಶ ಹೊರಡಿಸಿದೆ. ಅದರಲ್ಲೂ ಮುಖ್ಯವಾಗಿ ಕಗ್ಗಂಟಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಹುದ್ದೆಯನ್ನು ಬೇರೆಯವರಿಗೆ ನೀಡಲಾಗಿದೆ. ನೂತನ ಜಿಲ್ಲಾಧ್ಯಕ್ಷ ಪಟ್ಟಿ ಈ ಕೆಳಗಿನಂತಿದೆ.

ಬೆಂಗಳೂರು, (ಜೂನ್ 11): ಬಾಕಿ ಇರುವ ಜಿಲ್ಲಾ ಘಟಕಗಳಿಗೆ ಬಿಜೆಪಿ ಅಧ್ಯಕ್ಷರನ್ನು (BJP District President) ನೇಮಕ ಮಾಡಲಾಗಿದೆ. 10 ಜಿಲ್ಲಾ ಘಟಕಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಿಸಿ ರಾಜ್ಯ ಬಿಜೆಪಿ(Karnataka BJP) ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಇಂದು (ಜೂನ್ 11) ಆದೇಶ ಹೊರಡಿಸಿದ್ದಾರೆ. ಮೈಸೂರು ಗ್ರಾಮಾಂತರ, ಹಾಸನ, ಕೊಡಗು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿದ್ದು, ಪಕ್ಷದ ಸಂಘಟನೆಯನ್ನು ಸಧೃಡಗೊಳಿಸುತ್ತಾ, ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸುವ ಶಕ್ತಿ, ಪಕ್ಷ ವರ್ಚಸ್ಸು ಹೆಚ್ಚಿಸುವಲ್ಲಿ ಶ್ರಮಿಸುವಿರಿ ಎಂದು ಗಣೇಶ್ ಕಾರ್ಣಿಕ್ ಅವರು ನೂತನ ಜಿಲ್ಲಾಧ್ಯಕ್ಷರುಗಳಿಗೆ ಶುಭ ಹಾರೈಸಿದ್ದಾರೆ.
ಈ ಹಿಂದೆ 23 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಆದ್ರೆ, ಇದೀಗ ದೇಶದಾದ್ಯಂತ ಪಕ್ಷದ ಸಂಘಟನಾ ಪರ್ವ 2024-25 ನಡೆಯುತ್ತಿದ್ದು, ಇದರ ಅಂಗವಾಗಿ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉಳಿದಿರುವ 10 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಲಾಗಿದೆ.
ಇದನ್ನೂ ಓದಿ: 23 ಜಿಲ್ಲೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ: ಯಾವ ಜಿಲ್ಲೆಗೆ ಯಾರು? ಇಲ್ಲಿದೆ ಪಟ್ಟಿ
ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪಟ್ಟಿ
- ಮೈಸೂರು ಗ್ರಾಮಾಂತರ – ಕೆಎನ್ ಸುಬ್ಬಣ್ಣ.
- ಹಾಸನ – ಸಿದ್ದೇಶ್ ನಾಗೇಂದ್ರ.
- ಕೊಡಗು – ರವಿ ಕಾಳಪ್ಪ
- ಉಡುಪಿ – ಕುತ್ಯಾರು ನವೀನ್ ಶೆಟ್ಟಿ
- ದಾವಣಗೆರೆ – ಎನ್ ರಾಜಶೇಖರ
- ಹಾವೇರಿ – ವಿರೂಪಾಕ್ಷಪ್ಪ ಬಳ್ಳಾರಿ
- ಚಿತ್ರದುರ್ಗ – ಕೆ.ಟಿ. ಕುಮಾರಸ್ವಾಮಿ
- ತುಮಕೂರು – ಎಚ್.ಎಸ್. ರವಿಕುಮಾರ್ (ಹೆಬ್ಬಾಕ)
- ಮಧುಗಿರಿ – ಚಿದಾನಂದ ಗೌಡ
- ಚಿಕ್ಕಬಳ್ಳಾಪುರ – ಎಸ್.ವಿ. ರಾಮಚಂದ್ರ ಗೌಡ (ಸೀಕಲ್)
ಜನವರಿಯಲ್ಲಿ 23 ಜಿಲ್ಲೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿತ್ತು. ಆದ್ರೆ, ಕೆಲ ಗೊಂದಲ, ಆಂತರಿಕ ಕಚ್ಚಾಟದಿಂದ 10 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ. ಇದೀಗ ಬಾಕಿ ಇದ್ದ ಜಿಲ್ಲಾಧ್ಯಕ್ಷರನ್ನು ಸಹ ನೇಮಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರನ್ನಾಗಿ ಸಂದೀಪ್ ರೆಡ್ಡಿ ಅವರನ್ನು ಮೊದಲ ಪಟ್ಟಿಯಲ್ಲೇ ನೇಮಿಕ ಮಾಡಲಾಗಿತ್ತು. ಆದ್ರೆ, ಇದಕ್ಕೆ ಸಂಸದ ಡಾ ಕೆ ಸುಧಾಕರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಯಾರನ್ನು ಕೇಳಿ ಮಾಡಿದ್ದೀರಿ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವೇ ಬಹಿರಂಗವಾಗಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಆಯ್ಕೆ ತಡೆಹಿಡಿಯಲಾಗಿತ್ತು. ಈಗ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರನ್ನಾಗಿ ಎಸ್.ವಿ. ರಾಮಚಂದ್ರ ಗೌಡ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.