ಮಹಿಳೆಯರು, ರೈತರು, ವಿದ್ಯಾರ್ಥಿಗಳಿಗೆ ಸರ್ಕಾರ ಬಂಪರ್: ಸಂಪುಟ ಸಭೆಯಲ್ಲಿ ರಾಜ್ಯದ ಜನರಿಗೆ ಭರಪೂರ ಕೊಡುಗೆ!

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಬಡವರಿಗೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ. ಉಚಿತ ನಿವೇಶನ, ಸ್ಮಾರ್ಟ್‌ಕಾರ್ಡ್, ವಿದ್ಯಾರ್ಥಿ ಚುನಾವಣೆ ಸೇರಿದಂತೆ ಹಲವು ನಿರ್ಣಯ ಕೈಗೊಳ್ಳಲಾಗಿದೆ. ವಿವರ ಇಲ್ಲಿದೆ.

ಮಹಿಳೆಯರು, ರೈತರು, ವಿದ್ಯಾರ್ಥಿಗಳಿಗೆ ಸರ್ಕಾರ ಬಂಪರ್: ಸಂಪುಟ ಸಭೆಯಲ್ಲಿ ರಾಜ್ಯದ ಜನರಿಗೆ ಭರಪೂರ ಕೊಡುಗೆ!
ಸಿಎಂ ಡಿಕೆ ಶಿವಕುಮಾರ್
Image Credit source: tv9
Edited By:

Updated on: Sep 10, 2026 | 6:44 AM

ಮುಖ್ಯಾಂಶಗಳು

  • ರಾಜ್ಯಾದ್ಯಂತ ಬಡವರಿಗೆ 15 ಲಕ್ಷ ಉಚಿತ ಸೈಟ್
  • ಕಾರ್ಮಿಕರಿಗೆ 10 ಸಾವಿರ ಮನೆ ಕಟ್ಟಿಕೊಡಲು ಪ್ಲ್ಯಾನ್
  • ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ

ಬೆಂಗಳೂರು, ಸೆಪ್ಟೆಂಬರ್ 10: ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಸೆಪ್ಟೆಂಬರ್ 10ಕ್ಕೆ 100 ದಿನಗಳನ್ನ ಪೂರೈಸಿದೆ. ಸೆಂಚುರಿ ಸಂಭ್ರಮದಲ್ಲಿರುವ ರಾಜ್ಯ ಸರ್ಕಾರ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಮಹಿಳೆಯರು, ರೈತರು, ವಿದ್ಯಾರ್ಥಿಗಳಿಗೆ ಸರ್ಕಾರ ಬಂಪರ್​ ಕೊಡುಗೆಗಳನ್ನು ಘೋಷಿಸಿದೆ

‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆ

ಬರದ ಘಾತದಿಂದ ಕಂಗೆಟ್ಟಿರುವ ರೈತರಿಗೆ ಸರ್ಕಾರ ಶುಭ ಸುದ್ದಿ ಕೊಟ್ಟಿದೆ. ಜಮೀನು ಉಳುಮೆಗೆ ಈಗ ಎತ್ತುಗಳನ್ನು ಬಳಸುವುದು ಕಡಿಮೆಯಾಗಿದೆ. ಕೆಲಸಕ್ಕೆ ಜನ ಸಿಗುತ್ತಿಲ್ಲ. ಹೀಗಾಗಿ ಬಡ ರೈತರಿಗೆ ಅನುಕೂಲ ಆಗಬೇಕೆಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ ಜಾರಿಗೆ ಸಚಿವ ಸಂಪುಟ ಅಸ್ತು ಎಂದಿದೆ. ರೈತರಿಂದ ಟ್ರ್ಯಾಕ್ಟರ್​ಗಳನ್ನು ಸರ್ಕಾರವೇ ಬಾಡಿಗೆಗೆ ಪಡೆದು ಬಡ ರೈತರ ಜಮೀನು ಉಳುಮೆ ಮಾಡಿಸಲು ನಿರ್ಧರಿಸಲಾಗಿದೆ. 3 ಎಕರೆಗಿಂತ ಕಡಿಮೆ ಜಮೀನಿರುವ ಅನ್ನದಾತರಿಗೆ ಅನುಕೂಲ ಆಗಲಿದೆ.

ರಾಜ್ಯಾದ್ಯಂತ ಬಡವರಿಗೆ 15 ಲಕ್ಷ ಉಚಿತ ಸೈಟ್

ರಾಜ್ಯಾದ್ಯಂತ ಬಡವರಿಗೆ 15 ಲಕ್ಷ ಉಚಿತ ನಿವೇಶನ ಹಂಚಿಕೆ ಗುರಿ ಹೊಂದಲಾಗಿದೆ. ಪ್ರತಿ ಜಿಲ್ಲೆಯಲ್ಲಿ 50 ಸಾವಿರ ಉಚಿತ ನಿವೇಶನ ಹಂಚೋದಕ್ಕೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ 5 ಲಕ್ಷ ಸೈಟುಗಳನ್ನು 30 ಜಿಲ್ಲೆಗೆ ಹಂಚಲಿದ್ದಾರೆ. ಎಲ್ಲಾ ಡಿಸಿಗಳಿಗೆ ಸ್ಥಳ ಗುರುತಿಸಲು ಸೂಚಿಸಲಾಗಿದೆ. ಎಸ್​ಸಿ ಎಸ್​​ಟಿ ಓಬಿಸಿ ವರ್ಗಕ್ಕೆ ಮೊದಲ ಪ್ರಾತಿನಿಧ್ಯ ನೀಡಲಾಗುತ್ತದೆ.

ಮಹಿಳೆಯರ ಫ್ರೀ ಬಸ್ ಸಂಚಾರಕ್ಕೆ ಸ್ಮಾರ್ಟ್ ಕಾರ್ಡ್

ಸರ್ಕಾರದ ಶಕ್ತಿಯೋಜನೆಯಲ್ಲಿ ನಿತ್ಯ ಲಕ್ಷಾಂತರ ಮಹಿಳೆಯರು ಬಸ್​ನಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಈಗ, ಹೊಸ ಸ್ಮಾರ್ಟ್ ಕಾರ್ಡ್ ನೀಡೋದಕ್ಕೆ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್​ಕಾರ್ಡ್ ತೋರಿಸಿ ಮಹಿಳೆಯರು ಪ್ರಯಾಣಿಸಬಹುದಾಗಿದೆ.

ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ

ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮತ್ತೆ ವಿದ್ಯಾರ್ಥಿ ಸಂಘಗಳಚುನಾವಣೆ ನಡೆಸಲು ಸಚಿವ ಸಂಪುಟ ಅಸ್ತು ಎಂದಿದೆ.

ಕಾರ್ಮಿಕರಿಗೆ 10 ಸಾವಿರ ಮನೆ ಕಟ್ಟಿಕೊಡಲು ಪ್ಲ್ಯಾನ್

ಸರ್ಕಾರ ಕಾರ್ಮಿಕರಿಗೂ ಬಂಪರ್ ನೀಡಿದೆ. ಕೈಗಾರಿಕೆಗಳು ತಮ್ಮ ನೌಕರರು ಸಮೀಪದಲ್ಲೇ ವಾಸಿಸಲು ಮನೆಗಳನ್ನು ಕಟ್ಟಿಕೊಡಲು ಶ್ರಮಿಕ ನಿವಾಸ ಯೋಜನೆ ಜಾರಿಗೆ ತೀರ್ಮಾನಿಸಲಾಗಿದೆ. ಉದ್ದಿಮೆಗಳು ತಮ್ಮ ನೌಕರರಿಗೆ ಮನೆ ಕಟ್ಟಿಕೊಡಲು ಕೈಗಾರಿಕೆಗಳಿಗೆ ಬಂಡವಾಳ ಸಹಾಯಧನ ನೀಡಲು ನಿರ್ಧರಿಸಲಾಗಿದೆ.

10 ಜಿಲ್ಲೆಗಳಲ್ಲಿ ಉದ್ಯೋಗ ನಿಧಿ ಯೋಜನೆ

10 ಜಿಲ್ಲೆಗಳಲ್ಲಿ ಉದ್ಯೋಗ ನಿಧಿ ಯೋಜನೆ ಜಾರಿಗೆ ನಿರ್ಣಯ ಕೈಕೊಳ್ಳಲಾಗಿದೆ. ಜಿಲ್ಲೆಗಳಲ್ಲಿ ಹೊಸದಾಗಿ ಉದ್ಯೋಗ ಸೃಷ್ಟಿಸೊ ಕಂಪನಿಗಳ ಮಾಲೀಕರಿಗೆ, ಪ್ರತಿ ಉದ್ಯೋಗಿಯ ಮೇಲೆ ಮಾಸಿಕ 2,500 ಪ್ರೋತ್ಸಾಹ ಧನವನ್ನು
ನೀಡಲಾಗುತ್ತದೆ.

ಇದನ್ನೂ ಓದಿ: ನೇಗಿಲ ಯೋಗಿ, ತೇಗ ಸಿರಿ: ರೈತರಿಗಾಗಿ ಹಲವು ಯೋಜನೆ ಜಾರಿಗೆ ಕ್ಯಾಬಿನೆಟ್ ಗ್ರೀನ್​​ ಸಿಗ್ನಲ್

ರೈತರಿಗೆ ತೇಗದ ಸಸಿ ನೀಡುವ ತೇಗ ಸಿರಿ ಯೋಜನೆ ಜಾರಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಸಿಎಂ ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಇಂದಿಗೆ 100 ದಿನ. ಹೀಗಾಗಿ ಸಂಪುಟ ಸಭೆಯಲ್ಲಿ ರಾಜ್ಯ ಜನರಿಗೆ ಕೊಡುಗೆಗಳ ಮಹಾಪೂರವನ್ನೇ ಹರಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us