ನೇಗಿಲ ಯೋಗಿ, ತೇಗ ಸಿರಿ: ರೈತರಿಗಾಗಿ ಹಲವು ಯೋಜನೆ ಜಾರಿಗೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್
ಸಣ್ಣ ರೈತರಿಗೆ ಉಚಿತ ಉಳುಮೆ ಸೌಲಭ್ಯ ಒದಗಿಸುವ ‘ಮುಖ್ಯಮಂತ್ರಿ ನೇಗಿಲಯೋಗಿ’ ಹಾಗೂ ತೇಗದ ಗಿಡ ನೀಡುವ ‘ತೇಗ ಸಿರಿ’ ಯೋಜನೆ ಸೇರಿದಂತೆ ಹಲವು ಕೃಷಿ ಉತ್ತೇಜನ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 09: ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಯೋಜನೆಗಳ ಜಾರಿಗೆ ತೀರ್ಮಾನಿಸಲಾಗಿದೆ. ರಸ್ತೆ ಪಕ್ಕದ ಜಮೀನಿನ ರೈತರಿಗೆ ತೇಗದ ಸಸಿ ನೀಡುವ ‘ತೇಗ ಸಿರಿ ಯೋಜನೆ’ ಜಾರಿಗೆ ಸಂಪುಟ ಅನುಮೋದನೆ ನೀಡಿದ್ದು, ರೈತರಿಗೆ ಸರ್ಕಾರದಿಂದಲೇ ತೇಗದ ಸಸಿ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಟೀಕ್ ಗಿಡಗಳನ್ನು ರೈತರು ಪಾಲನೆ ಪೋಷಣೆ ಮಾಡುವ ಜೊತೆಗೆ 15 ವರ್ಷದವರೆಗೂ ಅವನ್ನು ಕಡಿಯುವಂತಿಲ್ಲ. ಮರ ಮಾರಾಟ ಬಳಿಕ 70% ಲಾಭ ರೈತನಿಗೆ ಸಿಗಲಿದೆ. ಮರವನ್ನು ಸರ್ಕಾರ ಅಥವಾ ಖಾಸಗಿಯವರಿಗೂ ರೈತರು ಮಾರಬಹುದಾಗಿದ್ದು, ಈ ಯೋಜನೆಗೆ 493 ಕೋಟಿ ರೂ. ಖರ್ಚು ಮಾಡಲು ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆಗೆ ತೀರ್ಮಾನ
ರೈತರಿಂದ ಟ್ರ್ಯಾಕ್ಟರ್ಗಳನ್ನ ಸರ್ಕಾರವೇ ಬಾಡಿಗೆ ಪಡೆದು ಬಡ ರೈತರ ಜಮೀನು ಉಳುಮೆ ಮಾಡಲು ಬಳಸಲು ನಿರ್ಧರಿಸಲಾಗಿದೆ. ಜಿಲ್ಲೆಗೆ ಒಂದರಂತೆ 31 ತಾಲೂಕಲ್ಲಿ ಪ್ರಾಯೋಗಿಕವಾಗಿ ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ ಚಾಲನೆಗೆ 152 ಕೋಟಿ ಅನುದಾನ ನೀಡಲಾಗಿದ್ದು, ಶಾಸಕ ಪುಟ್ಟಸ್ವಾಮಿಗೌಡ ಅವರು ಸಣ್ಣ ಪ್ರಮಾಣದಲ್ಲಿ ಕೈಗೊಂಡಿದ್ದ ಮಾದರಿಯಲ್ಲೇ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಈಗ ಎತ್ತುಗಳು ಇಲ್ಲ, ಉಳುಮೆ ಮಾಡಲು ಜನ ಸಿಗುತ್ತಿಲ್ಲ. ಹೀಗಾಗಿ ಬಡ ರೈತರಿಗೆ ಅನುಕೂಲ ಆಗಬೇಕೆಂಬ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದ್ದು, 3 ಎಕರೆಗಿಂತ ಕಡಿಮೆ ಜಮೀನಿರುವ ರೈತರಿಗೆ ಇದರ ಪ್ರಯೋಜನ ಸಿಗಲಿದೆ. ಮೂರು ಎಕರೆ ಮೇಲ್ಪಟ್ಟ ರೈತರಿಗೆ ಯೋಜನೆ ಅನ್ವಯಿಸಲ್ಲ.
ಇದನ್ನೂ ಓದಿ: ಸಚಿವ ಸಂಪುಟ ಸಭೆ: ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗೆ ಕ್ಯಾಬಿನೆಟ್ ಅಸ್ತು
20,000 ಕೋಟಿ ಬಂಡವಾಳ ಹೂಡಿಕೆ ಆಕರ್ಷಣೆಯ ಗುರಿ
ನೂತನ ಜವಳಿ ನೀತಿಗೂ ಸರ್ಕಾರ ಮುಂದಾಗಿದ್ದು, ಮುಂದಿನ 5 ವರ್ಷಗಳಲ್ಲಿ 20,000 ಕೋಟಿ ಬಂಡವಾಳ ಹೂಡಿಕೆ ಆಕರ್ಷಣೆಯ ಗುರಿ ಹೊಂದಲಾಗಿದೆ. ಗಾರ್ಮೆಂಟ್ ಇಂಡಸ್ಟ್ರಿಗಳು ಹೆಚ್ಚಾಗಿ ಬೆಂಗಳೂರಿನಲ್ಲೇ ಇರುವ ಕಾರಣ, ಅವು ಬೇರೆ ಬೇರೆ ಜಿಲ್ಲೆ ಮತ್ತು ತಾಲೂಕುಗಳಲ್ಲಿಯೂ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶವನ್ನು ಹೊಂದಲಾಗಿದೆ. ಕ್ರೆಡಿಟ್ ಲಿಂಕ್, ಕ್ಯಾಪಿಟಲ್ ಸಬ್ಸಿಡಿ, ಶೇ.5 ಕ್ರೆಡಿಟ್ ಲಿಂಕ್ ಬಂಡವಾಳ ಪಡೆಯಲು ಸಹಾಯದ ಜೊತೆಗೆ ಯೂನಿಟ್ಗೆ ಎರಡು ರೂಪಾಯಿ ಪವರ್ ಸಬ್ಸಿಡಿಯೂ ಸಿಗಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:05 pm, Wed, 9 September 26




