
ಬೆಂಗಳೂರು, ಮೇ 1: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಗೊಂದಲದಿಂದ ಮುಸ್ಲಿಂ (Muslims) ಸಮುದಾಯ ಕಾಂಗ್ರೆಸ್ (Congress) ವಿರುದ್ಧ ತೀವ್ರ ಅಸಮಾಧಾನ ಹೊಂದಿತ್ತು. ಇದೀಗ ಅಲ್ಪಸಂಖ್ಯಾತರ ಮುನಿಸು ತಣಿಸಲು ಮುಂದಾಗಿರುವ ಸರ್ಕಾರ, 2026-27 ಮತ್ತು 2027-28ನೇ ಸಾಲಿನಲ್ಲಿ ಅವರ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಸಚಿವ ಸಂಪುಟ (Karnataka Cabinet) ಸಭೆಯಲ್ಲಿ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಕಾನೂನು ಸಚಿವ ಹೆಚ್ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
1 ರಿಂದ 12ನೇ ತರಗತಿಯವರೆಗೆ ಓದುತ್ತಿರುವ ಕಾರ್ಮಿಕರ ಮಕ್ಕಳಿಗೆ 115.84 ಕೋಟಿ ರೂ. ವೆಚ್ಚದಲ್ಲಿ 8,600 ಮೌಲ್ಯದ ಲೇಖನ ಸಾಮಗ್ರಿ, ಪುಸ್ತಕಗಳನ್ನೊಳಗೊಂಡ ಶಾಲಾ ಕಿಟ್ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಬಲ ತುಂಬಲು ಉಚಿತ ರೋಗ ಪತ್ತೆಗಾಗಿ 6 ಎಂಆರ್ಐ ಸ್ಕ್ಯಾನಿಂಗ್ ಯಂತ್ರಗಳನ್ನು ಖರೀದಿಸಲು ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ.
ಬಹು ದಿನಗಳಿಂದ ಬಾಕಿ ಇದ್ದ ಬಿಡದಿ ಟೌನ್ಶಿಪ್ ಯೋಜನೆಗೆ ಮರುಜೀವ ನೀಡಲಾಗಿದೆ. ಸುಮಾರು 7,481 ಎಕರೆ ಪ್ರದೇಶದಲ್ಲಿ ಈ ಯೋಜನೆ ನಿರ್ಮಾಣವಾಗಲಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದಲೇ ಈ ಬೃಹತ್ ಉಪನಗರ ತಲೆ ಎತ್ತಲಿದೆ. ಈ ಹಿಂದೆ ರೈತರ ವಿರೋಧದಿಂದ ವಿಳಂಬವಾಗಿದ್ದ ಯೋಜನೆಗೆ ಈಗ ಹೊಸ ರೂಪ ನೀಡಲಾಗಿದ್ದು, ಭೂಮಿ ಕಳೆದುಕೊಳ್ಳುವ ರೈತರಿಗೆ ಪ್ರತಿ ಎಕರೆಗೆ 9600 ಚದರ ಅಡಿ ಅಭಿವೃದ್ಧಿಪಡಿಸಿದ ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ.
ಸಚಿವ ಸಂಪುಟ ಸಭೆಯ ವಿವರವಾದ ಮಾಹಿತಿಗೆ ಓದಿ: ಒಳಮೀಸಲಾತಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ: ಪರಿಷ್ಕೃತ ರೋಸ್ಟರ್ ಜಾರಿಗೆ ಸಂಪುಟ ಅಸ್ತು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ