ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಹೈಕಮಾಂಡ್ ಲಿಸ್ಟ್​ಗಾಗಿ ಕಾಯುತ್ತಿರುವ ಸಿಎಂ ಡಿಕೆಶಿ, ಇಂದು ಅಧಿಕೃತ ಕಾರ್ಯಕ್ರಮಗಳೇ ಇಲ್ಲ!

ಕರ್ನಾಟಕದಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹೈಕಮಾಂಡ್‌ನ ಅಂತಿಮ ಪಟ್ಟಿಗಾಗಿ ಕಾಯಲಾಗುತ್ತಿದೆ. ಇಂದು ಪಟ್ಟಿ ಬಂದರೆ ಸಂಜೆ 4 ಗಂಟೆ ವೇಳೆಗೆ ಪ್ರಮಾಣವಚನ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ಸಿಎಂ ಡಿಕೆ ಶಿವಕುಮಾರ್ ಇಂದು ಯಾವುದೇ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳದೆ ಇಡೀ ದಿನವನ್ನು ಕಾಯ್ದಿರಿಸಿದ್ದಾರೆ.

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಹೈಕಮಾಂಡ್ ಲಿಸ್ಟ್​ಗಾಗಿ ಕಾಯುತ್ತಿರುವ ಸಿಎಂ ಡಿಕೆಶಿ, ಇಂದು ಅಧಿಕೃತ ಕಾರ್ಯಕ್ರಮಗಳೇ ಇಲ್ಲ!
ಡಿಕೆ ಶಿವಕುಮಾರ್
Image Credit source: tv9
Edited By:

Updated on: Aug 03, 2026 | 7:45 AM

ಮುಖ್ಯಾಂಶಗಳು

  • ಹೈಕಮಾಂಡ್ ಪಟ್ಟಿಗಾಗಿ ಸಚಿವಾಕಾಂಕ್ಷಿಗಳ ಕಾತರ
  • ಇಂದು ಪಟ್ಟಿ ಬಂದರೆ ಪ್ರಮಾಣವಚನ ಸಾಧ್ಯತೆ
  • ಇಲ್ಲವಾದಲ್ಲಿ ಇನ್ನೂ 2 ದಿನ ಮುಂದಕ್ಕೆ?

ಬೆಂಗಳೂರು, ಆಗಸ್ಟ್ 3: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ (Karnataka Cabinet Expansion) ವಿಚಾರದಲ್ಲಿ ಕುತೂಹಲ ಮುಂದುವರಿದಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು (ಆಗಸ್ಟ್ 3) ಯಾವುದೇ ಅಧಿಕೃತ ಕಾರ್ಯಕ್ರಮವನ್ನು ನಿಗದಿಪಡಿಸಿಕೊಳ್ಳದೇ ಇಡೀ ದಿನವನ್ನು ಕಾಯ್ದಿರಿಸಿರುವುದು ಗಮನ ಸೆಳೆದಿದೆ. ಕಾಂಗ್ರೆಸ್ ಹೈಕಮಾಂಡ್‌ನಿಂದ ನೂತನ ಸಚಿವರ ಅಂತಿಮ ಪಟ್ಟಿ ಯಾವುದೇ ಕ್ಷಣದಲ್ಲಾದರೂ ರವಾನೆಯಾಗುವ ನಿರೀಕ್ಷೆಯಿದ್ದು, ಪಟ್ಟಿ ಬಂದರೆ ಇಂದು ಸಂಜೆಯೇ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಅಂತಿಮ ಪಟ್ಟಿ ಕೈಸೇರುವ ನಿರೀಕ್ಷೆ ಇತ್ತು. ಆದರೆ, ಈವರೆಗೆ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಕುತೂಹಲ ಮತ್ತು ಆತಂಕ ಮುಂದುವರಿದಿದೆ.

ರಾಜಭವನಕ್ಕೆ ಲಿಖಿತ ಮಾಹಿತಿ ಇಲ್ಲ

ಸಚಿವರ ಪ್ರಮಾಣವಚನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಚೇರಿಯಿಂದ ರಾಜಭವನಕ್ಕೆ ಮೌಖಿಕ ಮಾಹಿತಿ ನೀಡಲಾಗಿದೆ. ಆದರೆ, ಇದುವರೆಗೆ ಲಿಖಿತವಾಗಿ ಯಾವುದೇ ಅಧಿಕೃತ ಸೂಚನೆ ಅಥವಾ ದಿನಾಂಕ ರವಾನೆಯಾಗಿಲ್ಲ ಎನ್ನಲಾಗಿದೆ. ಹೀಗಾಗಿ ಪ್ರಮಾಣವಚನ ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆಯೂ ಇನ್ನೂ ಸ್ಪಷ್ಟತೆ ಮೂಡಿಲ್ಲ. ಕಾಂಗ್ರೆಸ್ ಹೈಕಮಾಂಡ್‌ನ ನಾಯಕರು ರಾಜ್ಯಕ್ಕೆ ಆಗಮಿಸಿ ಪಟ್ಟಿಯನ್ನು ನೀಡುತ್ತಾರೆಯೇ ಅಥವಾ ದೆಹಲಿಯಿಂದಲೇ ಅಂತಿಮ ಪಟ್ಟಿ ಕಳುಹಿಸಲಾಗುತ್ತದೆಯೇ ಎಂಬುದೂ ಕುತೂಹಲಕ್ಕೆ ಕಾರಣವಾಗಿದೆ.

ಕೆಲವು ಹೆಸರುಗಳ ಬಗ್ಗೆ ಇನ್ನೂ ಒಮ್ಮತದ ಕೊರತೆ

Karnataka Cabinet Expansion: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಹಾವು ಏಣಿ ಆಟ ಮುಂದುವರಿದ ಗೊಂದಲ
ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ಹಂಚಿಕೆ ಮಾಡುವಾಗ ಸಮುದಾಯ, ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮಾನತೆಗೆ ಆದ್ಯತೆ ನೀಡಲಾಗುತ್ತಿದೆ ಎನ್ನಲಾಗಿದೆ. ಕೆಲ ಸಂಭಾವ್ಯ ಹೆಸರುಗಳ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಇನ್ನೂ ಅಂತಿಮ ಒಮ್ಮತ ಮೂಡಿಲ್ಲ ಎನ್ನಲಾಗಿದ್ದು, ಕೊನೆಯ ಕ್ಷಣದಲ್ಲಿ ಅಚ್ಚರಿಯ ಹೆಸರುಗಳು ಪಟ್ಟಿಗೆ ಸೇರುವ ಸಾಧ್ಯತೆಯೂ ಇದೆ.

ಸಚಿವ ಸಂಪುಟ ವಿಸ್ತರಣೆ ಇನ್ನೂ 2 ದಿನ ವಿಳಂಬ?

ಇಂದು ಅಂತಿಮ ಪಟ್ಟಿ ಪ್ರಕಟವಾಗದಿದ್ದರೆ ಸಚಿವ ಸಂಪುಟ ವಿಸ್ತರಣೆ ಮತ್ತೆರಡು ದಿನ ವಿಳಂಬವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

10 ಸಂಭಾವ್ಯ ಸಚಿವರ ಹೆಸರು ಚರ್ಚೆಯಲ್ಲಿ

ಹೈಕಮಾಂಡ್‌ ಅಂತಿಮಗೊಳಿಸಿದೆ ಎನ್ನಲಾಗುತ್ತಿರುವ ಸಂಭಾವ್ಯ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಖಾನ್, ಎಸ್.ಎಸ್. ಮಲ್ಲಿಕಾರ್ಜುನ್, ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ, ರುದ್ರಪ್ಪ ಲಮಾಣಿ, ಎ.ಎಸ್. ಪೊನ್ನಣ್ಣ, ಟಿ. ರಘುಮೂರ್ತಿ, ಅನ್ನಪೂರ್ಣ ತುಕಾರಾಂ, ಕೆ.ಎಸ್. ಬಸವಂತಪ್ಪ ಹಾಗೂ ಶರತ್ ಬಚ್ಚೇಗೌಡ ಅವರ ಹೆಸರುಗಳು ಕೇಳಿಬರುತ್ತಿವೆ. ಇವರಲ್ಲಿ ಕೆಲವರು ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದವರಾಗಿದ್ದು, ಮತ್ತೆ ಸಂಪುಟಕ್ಕೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಶ್ರೀರಾಮುಲು ಟಾಂಗ್

ಸಚಿವ ಸಂಪುಟ ವಿಸ್ತರಣೆ ಇಂದು ನಡೆಯಲಿದೆ ಎಂಬ ವಿಶ್ವಾಸವನ್ನು ಸಚಿವ ಪ್ರಿಯಾಂಕ್ ಖರ್ಗೆ ವ್ಯಕ್ತಪಡಿಸಿದ್ದರೆ, ಬಿಜೆಪಿ ನಾಯಕ ಶ್ರೀರಾಮುಲು ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಇನ್ನೂ ‘ಸೂಟ್‌ಕೇಸ್’ ತಲುಪಿಲ್ಲ ಎಂದು ಶ್ರೀರಾಮುಲು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು

ಒಟ್ಟಿನಲ್ಲಿ, ಹೈಕಮಾಂಡ್‌ನ ಅಂತಿಮ ಪಟ್ಟಿಯತ್ತ ರಾಜ್ಯ ರಾಜಕಾರಣದ ಚಿತ್ತ ನೆಟ್ಟಿದ್ದು, ಪಟ್ಟಿ ರವಾನೆಯಾದ ಬಳಿಕವಷ್ಟೇ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಅಧಿಕೃತವಾಗಿ ಸ್ಪಷ್ಟವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us