
ನವದೆಹಲಿ, (ಜುಲೈ 28): ಕರ್ನಾಟಕ ಸಂಪುಟ ವಿಸ್ತರಣೆಯ (Karnataka Cabinet Expansion) ಜಟಾಪಟಿ ಕೊನೇ ಹಂತಕ್ಕೆ ಬಂದು ನಿಂತಿದೆ. ಯಾವಾಗ ಸಂಪುಟ ವಿಸ್ತರಣೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದಿದೆ. ಯಾಕಂದ್ರೆ, ದೆಹಲಿಯ (New Delhi) ಕಾಂಗ್ರೆಸ್ ಹೈಕಮಾಂಡ್, 2ನೇ ಹಂತದ ಚರ್ಚೆ ನಡೆದಿದ್ದು, ಅಂತಿಮ ಮಾತುಕತೆಯೊಂದೇ ಬಾಕಿ ಇದೆ. ಹೌದು.. ಎಲ್ಲವೂ ಅಂದುಕೊಂಡಂತೆ ಇಂದು (ಜುಲೈ 28) ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಮೊದಲು ವೇಣುಗೋಪಾಲ್ ಅವರು ರಾಜ್ಯ ನಾಯಕರ ಜತೆ ಪ್ರತ್ಯೇಕ ಸಭೆ ಮಾಡಿದ್ದಾರೆ. ಆದರೆ, ಅಂತಿಮವಾಗಿ ನಾಳೆ (ಜುಲೈ 29) ರಾಹುಲ್ ಗಾಂಧಿ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಯಲಿದ್ದು, ಈ ವೇಳೆ ಸಂಪುಟ ಸೇರುವ ನಾಯಕರ 2ನೇ ಪಟ್ಟಿಗೆ ಅಂತಿಮ ಮುದ್ರೆ ಬೀಳಲಿದೆ.
ಹೌದು….. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಇಂದು (ಜುಲೈ 28) ದೆಹಲಿಯ ತಮ್ಮ ನಿವಾಸದಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರ ಜತೆ ಸಭೆ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹಾಗೂ ಸಿಎಂ ಡಿಕೆ ಶಿವಕುಮಾರ್ ಜೊತೆ ಪ್ರತ್ಯೇಕ ಸಭೆ ನಡೆಸಿದ್ದು, ಈ ವೇಳೆ ಅವರ ಪಟ್ಟಿಯನ್ನು ಸ್ವೀಕರಿಸಿ ಮಾತುಕತೆ ನಡೆಸಿದ್ದಾರೆ. ಕೊನೆಗೆ ಎಲ್ಲಾ ನಾಯಕರು ಒಟ್ಟಿಗೆ ಸೇರಿ ಮತ್ತೊಂದು ಸುತ್ತಿನ ಚರ್ಚೆ ಮಾಡಿದ್ದಾರೆ. ಆದ್ರೆ, ಅಂತಿಮ ಮಾತುಕತೆ ನಾಳೆ (ಜುಲೈ29) ರಾಹುಲ್ ಗಾಂಧಿ ಜೊತೆಗಿನ ಸಭೆ ಬಳಿಕ ಪಟ್ಟಿಗೆ ಅಂತಿಮ ಮುದ್ರೆ ಬೀಳಲಿದೆ.
ವೇಣುಗೋಪಾಲ್ ನಿವಾಸದಲ್ಲಿ ರಾಜ್ಯ ನಾಯಕರ ಸಭೆಯಲ್ಲಿ ಸಚಿವ ಸ್ಥಾನದ ಮಾನದಂಡಗಳ ಬಗ್ಗೆ ಮಾತುಕತೆ ನಡೆದಿದೆ. ಕೆಲ ಸಮಾಜಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹೊಸ ಮುಖಗಳಿಲ್ಲ. ಹೀಗಾಗಿ ಅಂತಹ ಸಮುದಾಯಗಳಿಗೆ ಪ್ರಾಧಾನ್ಯತೆ ನೀಡುವ ಬಗ್ಗೆ ಚರ್ಚೆ ಆಗಿದೆ. ಹಿರಿತನದ ಮೂಲಕವೇ ಪ್ರಾಧಾನ್ಯತೆ ನೀಡಬೇಕೆಂಬ ಬಗ್ಗೆಯೂ ಮಾತುಕತೆಗಳಾಗಿದ್ದು, ಜೊತೆ ಸಭೆಯಲ್ಲಿ ಜಿಲ್ಲಾವಾರು ಹೆಸರುಗಳು ಕೂಡ ಪ್ರಸ್ತಾಪವಾಗಿದೆ. ಈ ಎಲ್ಲಾ ಮಾನದಂಡಗಳ ಬಗ್ಗೆ ಚರ್ಚೆ ಆಗಿದ್ದು, ಇದೇ ಅಂಶಗಳೊಂದಿಗೆ ರಾಹುಲ್ ಗಾಂಧಿ ಸಹ ಅಂತಿಮ ಸಭೆ ಮಾಡಿ ನೂತನ ಸಚಿವ ಪಟ್ಟಿ ಸಿದ್ಧಪಡಿಸಲಿದ್ದಾರೆ.
ಸಚಿವ ಸಂಪುಟ ಸಂಬಂಧ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಕಳೆದು ಎರಡು ದಿನಗಳಿಂದ ದೆಹಲಿಯಲ್ಲೇ ಠಿಕಾಣಿ ಹೂಡಿದ್ದು, ಇಂದು ಸೆಮಿಫೈನಲ್ ಪಂದ್ಯದಂತೆ ಕೆಸಿ ವೇಣುಗೋಪಾಲ್ ಜೊತೆ ಸಭೆ ಆಗಿದೆ. ಈಗ ಇನ್ನೇನಿದ್ದರೂ ಫೈನಲ್ ಬಾಕಿ ಇದ್ದು, ಫೈನಲ್ ಮಾತುಕತೆ ನಾಳೆ (ಜುಲೈ 29) ರಾಹುಲ್ ಗಾಂಧಿಯೊಂದಿಗೆ ನಡೆಯಲಿದೆ. ಆದರೆ, ಬುಧವಾರ ಸಂಸತ್ನಲ್ಲಿ ನೀಟ್ ವಿಚಾರವಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಹೀಗಾಗಿ ಬೆಳಗ್ಗೆಯಿಂದ ಮಧ್ಯಾಹ್ನವರೆಗೂ ರಾಹುಲ್ ಸಂಸತ್ನಲ್ಲಿ ಬ್ಯುಸಿಯಾಗಿದ್ದು, ನಾಳೆ (ಜುಲೈ 29) ಸಂಜೆ 4 ಗಂಟೆ ಮೇಲೆ ದೆಹಲಿಯ 10 ಜನಪತ್ನ ರಾಹುಲ್ ನಿವಾಸದಲ್ಲಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಸಿದ್ದರಾಮಯ್ಯ ಜೊತೆ ರಾಹುಲ್ ಮಾತುಕತೆ ಮಾಡಿ ನೂತನ ಸಚಿವ ಪಟ್ಟಿಗೆ ಅಂತಿಮ ಮುದ್ರೆ ಒತ್ತಲಿದ್ದಾರೆ. ಇದರಿಂದ ಯಾರೆಲ್ಲಾ ಡಿಕೆಶಿ ಕ್ಯಾಬಿನೆಟ್ ಸೇರುತ್ತಾರೆ ಎನ್ನುವುದು ಮಂಗಳವಾರ ಸಂಜೆ ಮೇಲೆ ಗೊತ್ತಾಗಲಿದೆ.
ರಾಜ್ಯ ಸಂಪುಟ ವಿಸ್ತರಣೆ ಕಸರತ್ತು ದೆಹಲಿಯಲ್ಲಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ರಾಹುಲ್ ಗಾಂಧಿ ಮುದ್ದೆ ಬೀಳುವುದೊಂದೇ ಬಾಕಿ ಇದ್ದು, ನಾಳೆ ರಾಹುಲ್ ಗಾಂಧಿ ಜೊತೆ ಅಂತಿಮ ಸಭೆ ಸಹ ಫಿಕ್ಸ್ ಆಗಿದೆ. ಹೀಗಾಗಿ ಇತ್ತ ನೂತನ ಸಚಿವ ಪ್ರಮಾಣವಚನಕ್ಕೆ ಸಿದ್ಧತೆಗಳು ಆರಂಭವಾಗಿವೆ. ಜುಲೈ 30ರಂದು ಸಂಜೆ 5 ಗಂಟೆಗೆ ನೂತನ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.. ಯಾಕಂದ್ರೆ, ಮುಖ್ಯಮಂತ್ರಿ ಕಚೇರಿಯಿಂದ ಲೋಕಭವನಕ್ಕೆ ಮೌಖಿಕ ಮಾಹಿತಿ ಹೋಗಿದೆ. ಹೀಗಾಗಿ ರ ಲೋಕಭವನದಲ್ಲಿ ಸಿದ್ಧತೆಗಳು ನಡೆದಿವೆ.
ಕೊನೆಯ ಎರಡು ವರ್ಷವಾದರೂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಬೇಕೆಂದು ಸಾಕಷ್ಟು ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ. ತಮಗೂ ಸಚಿವ ಸ್ಥಾನಬೇಕೆಂದು ಹಲವು ಶಾಸಕ ಈಗಾಗಲೇ ಕಳೆದೊಂದು ವಾರದಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದ್ರೆ, ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎನ್ನುವುದೇ ತೀವ್ರ ಕುತೂಹಲ ಮೂಡಿಸಿದ್ದು, ಬುಧವಾರ ರಾತ್ರಿ ವೇಳೆಗೆ ಯಾರಿಗೆ ಮಂತ್ರಿಪಟ್ಟು ಯಾರಿಗಿಲ್ಲ ಎನ್ನುವುದು ಒಂದು ಹಂತದ ಮಟ್ಟಿಗೆ ಗೊತ್ತಾಗಲಿದೆ. ಇದರಿಂದ ಆ ಪಟ್ಟಿಯಲ್ಲಿ ತಮ್ಮದು ಹೆಸರು ಇರುತ್ತೋ ಇಲ್ವಾ ಎನ್ನುವ ಟೆನ್ಷನ್ನಲ್ಲಿ ಶಾಸಕರಿದ್ದಾರೆ.
Published On - 10:35 pm, Tue, 28 July 26