ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ನಿವೃತ್ತಿ ವಯಸ್ಸು ಏರಿಕೆ

ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ವೈದ್ಯರ ನಿವೃತ್ತಿ ವಯಸ್ಸನ್ನು 60 ರಿಂದ 65ಕ್ಕೆ ಹೆಚ್ಚಿಸಲಾಗಿದೆ. ಸರಗೂರು-ಹೊಸಪುರ ಸೇತುವೆ ಮತ್ತು ಸತ್ತೇಗಾಲ ಕುಡಿಯುವ ನೀರಿನ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಹಿಂದುಳಿದ ವರ್ಗಗಳ ಸಮೀಕ್ಷೆ ಕುರಿತು ಚರ್ಚೆ ನಡೆದಿದೆ. ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ ಮತ್ತು ಸಾಧನಾ ಸಮಾವೇಶ ಮುಂದೂಡಲಾಗಿದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ನಿವೃತ್ತಿ ವಯಸ್ಸು ಏರಿಕೆ
ಹೆಚ್​ಕೆ ಪಾಟೀಲ್​
Edited By:

Updated on: May 09, 2025 | 9:09 PM

ಬೆಂಗಳೂರು, ಮೇ 09: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 65 ವರ್ಷಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ (Cabinet Meeting) ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ (HK Patil) ಹೇಳಿದರು. ಶುಕ್ರವಾರ (ಮೇ.09) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, 1,500 ಕೋಟಿ ವೆಚ್ಚದ ಸರಗೂರಿನಿಂದ ಹೊಸಪುರಕ್ಕೆ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅಂದಾಜು 90 ಕೋಟಿ ರೂ. ವೆಚ್ಚದ ಸತ್ತೇಗಾಲ ಕುಡಿವ ನೀರಿನ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರಿಂದ ರಾಮನಗರ, ಮಾಗಡಿ, ಕುಣಿಗಲ್ ತಾಲೂಕುಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸುವ ಬಗ್ಗೆ ಚರ್ಚೆಯಾಗಿದೆ. ಸಮೀಕ್ಷೆ ನಡೆಸುವಂತೆ ಸಚಿವರು ಅಭಿಪ್ರಾಯ ನೀಡಿದ್ದಾರೆ. ಮುಂದಿನ ವಾರ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ
ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಅಂಗವಿಕಲರ ಜನಗಣತಿಗೆ ನಿರ್ಧಾರ
ಜಮೀರ್ ಅಹ್ಮದ್ ಯುದ್ಧಕ್ಕೆ ಹೋಗುವ ಮಾತನ್ನು ಹೇಳಿ ನಕ್ಕ ನಿಖಿಲ್
ಡಿಸ್ನಿ ಲ್ಯಾಂಡ್, ಕಾವೇರಿ ಆರತಿ ಯೋಜನೆಗಳನ್ನು ವಿರೋಧಿಸಿದ ರೈತ ಮಹಿಳೆಯರು

ಇದನ್ನೂ ನೋಡಿ: ಆಪರೇಷನ್ ಸಿಂಧೂರ್: ಭಾರತೀಯ ಸೇನೆಯನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ

ಪಹಲ್ಗಾಮ್​ನಲ್ಲಿ ಉಗ್ರರ ದಾಳಿ ನಂತರ ಭಾರತ-ಪಾಕಿಸ್ತಾನ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಶನಿವಾರ (ಮೇ.10) ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು, ಎಸ್​ಪಿಗಳು, ಪೊಲೀಸ್ ಆಯುಕ್ತರ ಜೊತೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು. ಮೇ 20ರಂದು ಆಯೋಜಿಸಿದ್ದ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ