ಕರ್ನಾಟಕದಲ್ಲಿ ಮತ್ತೊಮ್ಮೆ ಜಾಹೀರಾತು ಸಮರ: ದಸರಾ ಶುಭಾಶಯ ನೆಪದಲ್ಲಿ ಬಿಜೆಪಿ, ಜೆಡಿಎಸ್​ಗೆ ಕಾಂಗ್ರೆಸ್​ ತಿರುಗೇಟು!

|

Updated on: Oct 11, 2024 | 12:38 PM

ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಪತ್ರಿಕಾ ಜಾಹೀರಾತು ಸಮರ ಓದುಗರ, ಸಾರ್ವಜನಿಕರ ಗಮನ ಸೆಳೆದಿತ್ತು. ಜತೆಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಕ್ರಿಯಾಶೀಲ ಟೀಕೆಗಳು, ವ್ಯಂಗ್ಯಚಿತ್ರಗಳನ್ನು ಪೋಸ್ಟ್ ಮಾಡಿ ಮತದಾರರನ್ನು ಓಲೈಸಲು ಯತ್ನಿಸಲಾಗಿತ್ತು. ಇದೀಗ ಮತ್ತೆ ದಸರಾ ಶುಭಾಶಯ ಹೇಳುವ ನೆಪದಲ್ಲಿ ಆಡಳಿತಾರೂಢ ಕಾಂಗ್ರೆಸ್ ಜಾಹೀರಾತು ಸಮರ ಸಾರಿದೆ.

ಕರ್ನಾಟಕದಲ್ಲಿ ಮತ್ತೊಮ್ಮೆ ಜಾಹೀರಾತು ಸಮರ: ದಸರಾ ಶುಭಾಶಯ ನೆಪದಲ್ಲಿ ಬಿಜೆಪಿ, ಜೆಡಿಎಸ್​ಗೆ ಕಾಂಗ್ರೆಸ್​ ತಿರುಗೇಟು!
ಕಾಂಗ್ರೆಸ್ ಸರ್ಕಾರ ಪತ್ರಿಕೆಗಳಿಗೆ ನೀಡಿರುವ ಜಾಹೀರಾತು
Follow us on

ಬೆಂಗಳೂರು, ಅಕ್ಟೋಬರ್ 11: ‘ದುಷ್ಟ ಶಕ್ತಿ ಎದುರು ಸತ್ಯದ ಜಯ. ಸರ್ಕಾರವನ್ನ ಅಸ್ಥಿರಗೊಳಿಸಲು ವಾಮಮಾರ್ಗ, ಮೋಸದಿಂದ ಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ತಾಯಿ ಚಾಮುಂಡೇಶ್ವರಿ ನಿಗ್ರಹಿಸಲಿ.’ ಇದು ಕರ್ನಾಟಕ ಕಾಂಗ್ರೆಸ್​ ಸರ್ಕಾರದ ಜಾಹೀರಾತು! ಇಂದು ಬೆಳ್ಳಂಬೆಳಗ್ಗೆಯೇ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲೇ ಮೊಳಗಿದ ಜಾಹೀರಾತಿದು. ದಸರಾ ಶುಭಾಶಯ ಕೋರುವ ಜಾಹೀರಾತು ನೆಪದಲ್ಲೇ ವಿರೋಧ ಪಕ್ಷಕ್ಕೆ ಕಾಂಗ್ರೆಸ್​ ಕೌಂಟರ್ ಕೊಟ್ಟಿದೆ.

ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ, ಇದು ಸರ್ಕಾರದ ಅಸ್ಥಿರಗೊಳಿಸಲು ಬಿಜೆಪಿಯಿಂದ ಷಡ್ಯಂತ್ರ ಅಂತಾ ಆರೋಪಿಸುತ್ತಲೇ ಬಂದಿದ್ದಾರೆ. ಇದೀಗ ದಸರಾಗೆ ಶುಭಾಶಯ ಕೋರುವ ಸರ್ಕಾರದ ಜಾಹೀರಾತಿನ ಮೂಲಕ ಬಿಜೆಪಿ ಹಾಗೂ ಜೆಡಿಎಸ್​​ಗೆ ಕಾಂಗ್ರೆಸ್​ ತಿರುಗೇಟು ಕೊಟ್ಟಿದೆ. ವಾಮಮಾರ್ಗದಿಂದ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುವುದಿಲ್ಲ ಎಂದು ದೋಸ್ತಿ ನಾಯಕರಿಗೆ ಜಾಹೀರಾತು ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಂದು ತಿರುಗೇಟು ನೀಡಿದೆ.

ಇದಿಷ್ಟೇ ಅಲ್ಲ, ನವರಾತ್ರಿಯಲ್ಲಿ ಸಂಹರಿಸಬೇಕಾದ ವಿನಾಶಕಾರಿ ಶಕ್ತಿಗಳನ್ನೂ ಜಾಹೀರಾತಿನಲ್ಲಿ ಉಲ್ಲೇಖ ಮಾಡಲಾಗಿದೆ.

ಕಾಂಗ್ರೆಸ್ ಉಲ್ಲೇಖಿಸಿದ ವಿನಾಶಕಾರಿ ಶಕ್ತಿಗಳು ಯಾವುವು!?

  • ಪ್ರತಿಪದ: ಕೋಮುಗಲಭೆ-ಶಾಂತಿ ಸೌಹಾರ್ದತೆಯಿಂದ ನಿಗ್ರಹ.
  • ದ್ವಿತೀಯ: ಸಾಮಾಜಿಕ ಪಿಡುಗು-ವೈಜ್ಞಾನಿಕ ಅರಿವಿನಿಂದ ನಿವಾರಣೆ.
  • ತೃತೀಯ: ಶಾಂತಿಭಂಗ-ಸಾಮರಸ್ಯ ಕದಡುವವರ ನಿರ್ಮೂಲನೆ.
  • ಚತುರ್ಥಿ: ದುಷ್ಕೃತ್ಯ-ಕಠಿಣ ಶಿಕ್ಷೆ.
  • ಪಂಚಮಿ: ವಿಧ್ವಂಸಕತೆ-ಧೈರ್ಯ & ಶೌರ್ಯದಿಂದ ದಮನ.
  • ಷಷ್ಠಿ: ಅಶಾಂತಿ-ಕಾನೂನು ಸುವ್ಯವಸ್ಥೆಯಿಂದ ನಿವಾರಣೆ.
  • ಸಪ್ತಮಿ: ಪ್ರಚೋದನೆ-ಪ್ರೇರೇಪಿಸುವವರ ನಿರ್ಮೂಲನೆ.
  • ಅಷ್ಟಮಿ: ಸುಳ್ಳು ವದಂತಿ-ಮೂಲದಿಂದಲೇ ನಾಶ.
  • ನವಮಿ: ಅಪಪ್ರಚಾರ ಮಾಡುವವರ ಮೇಲೆ ಕ್ರಮ.

ಇವಿಷ್ಟು ವಿಚಾರಗಳನ್ನು ಕಾಂಗ್ರೆಸ್ ಪಕ್ಷ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಉಲ್ಲೇಖಿಸಿದೆ.

ಕಾಂಗ್ರೆಸ್​ ಜಾಹೀರಾತಿಗೆ ಜೆಡಿಎಸ್, ಬಿಜೆಪಿ ನಾಯಕರ ಕೌಂಟರ್

ಕಾಂಗ್ರೆಸ್​ ಜಾಹೀರಾತಿನ ಬಗ್ಗೆ ಆಕ್ರೋಶ ಹೊರಹಾಕಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ರಾಜ್ಯವನ್ನು ಮೋಸದಿಂದ ಸ್ಥಿರಗೊಳಿಸಲು ಸರ್ಕಾರ ಹೊರಟಿದೆ. ಸ್ಥಿರಗೊಳಿಸುವುದು, ಅಸ್ಥಿರಗೊಳಿಸುವುದು ನಮ್ಮ ಕೈಯಲ್ಲಿ ಇಲ್ಲ, ಚಾಮುಂಡಿ ತಾಯಿ ಕೈಯಲ್ಲಿ ಇದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪರೋಕ್ಷವಾಗಿ ಪ್ರತ್ಯೇಕ ಭಾರತದ ಮಾತು ಆಡಿದ ಕಾಂಗ್ರೆಸ್​ ಮಾಜಿ ಸಂಸದ ಡಿಕೆ ಸುರೇಶ್​​

ದುಷ್ಟಶಕ್ತಿಗಳು ಯಾರು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಹಣವನ್ನು ಇಂಥಾ ಜಾಹೀರಾತಿಗೆ ಖರ್ಚು ಮಾಡಿ ಲೂಟಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಪ್ರಚಾರದ ಅಖಾಡದಲ್ಲಿ ಚೊಂಬು, ಚಿಪ್ಪು, ಟಾಯ್ಲೆಟ್ಟು: ಟೀಕೆಗಳಲ್ಲೂ ಕ್ರಿಯಾಶೀಲತೆ ಉಂಟು!

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ