
ಬೆಂಗಳೂರು, (ಫೆಬ್ರವರಿ 08): ಅಗತ್ಯ ವಸ್ತುಗಳ ಬೆಲೆ ಏರಿಕೆ ದಿನ ದಿಂದ ದಿನಕ್ಕೆ ಹೆಚ್ಚಾಗಿ ಹೈರಾಣಾಗಿರುವ ಕರ್ನಾಟಕದ (Karnataka) ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ವಿದ್ಯುತ್ ದರ ಏರಿಕೆಯಾಗುವ (Power Price Hike) ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದ ವಿದ್ಯುತ್ ಪೂರೈಕೆ ಮಾಡುವ ಬಹುತೇಕ ಕಂಪನಿಗಳು ನಷ್ಟದ ಹಳಿಯಲ್ಲಿದ್ದು, ಆದಾಯ ಸರಿದೂಗಿಸಲು ವಿದ್ಯುತ್ ದರ ಏರಿಕೆ ಮಾಡುವಂತೆ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಯೂನಿಟ್ಗೆ 1 ರೂಪಾಯಿಯಂತೆ ವಿದ್ಯುತ್ ದರ ಏರಿಕೆ ಮಾಡಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿದ್ದು, ಸಾರ್ವಜನಿಕ ವಿಚಾರಣೆಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಹೆಚ್ಚಳವು ಪ್ರತಿ ಯೂನಿಟ್ಗೆ 8 ರಿಂದ 10 ಪೈಸೆಗಳಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವ ಸಾಧ್ಯತೆ ಇದ್ದು, ಕೈಗಾರಿಕೆ, ವಾಣಿಜ್ಯ ಮತ್ತು ಗೃಹ ಬಳಕೆದಾರರ ಮೇಲೆ ಪರಿಣಾಮ ಬೀರಬಹುದು. ಕರ್ನಾಟಕದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು 4,900 ಕೋಟಿಗೂ ಹೆಚ್ಚು ಆದಾಯದ ಕೊರತೆಯನ್ನು ಸರಿದೂಗಿಸಲು 2026ರ ಏಪ್ರಿಲ್ನಿಂದ ವಿದ್ಯುತ್ ದರವನ್ನು ಮತ್ತೆ ಪರಿಷ್ಕರಿಸುವ (ಹೆಚ್ಚಿಸುವ) ಸಾಧ್ಯತೆ ದಟ್ಟವಾಗಿದೆ.
ಎಸ್ಕಾಂಗಳ ಆದಾಯದ ಕೊರತೆಯನ್ನು ಸರಿದೂಗಿಸಲು ಪರ್ಯಾಯ ವ್ಯವಸ್ಥೆಗೆ ಮನವಿ ಮಾಡಲಾಗಿದೆ. 2025 ರ ಮಾರ್ಚ್ನಲ್ಲಿ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪ್ರತಿ ಯೂನಿಟ್ಗೆ 36 ಪೈಸೆಯಷ್ಟು ವಿದ್ಯುತ್ ದರವನ್ನು ಹೆಚ್ಚಿಸಿತ್ತು. ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ದರವನ್ನು ಹೆಚ್ಚಿಸುವ ಮೂಲಕ ತಮ 4,620 ಕೋಟಿ ರೂಪಾಯಿಗಳ ಆದಾಯದ ಅಂತರವನ್ನು ಸರಿದೂಗಿಸಲು ವಿದ್ಯುತ್ ಸರಬರಾಜು ನಿಗಮ ನಿಯಮಿತ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವನ್ನು ಕೋರಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷದ ಮಾರ್ಚ್ನಲ್ಲಿ ದರ ಪರಿಷ್ಕರಣೆ ಮಾಡಿದಾಗ ಕೆಇಆರ್ಸಿ ಅಂದಾಜು ಮಾಡಿದ್ದ ಲೆಕ್ಕಾಚಾರದಲ್ಲಿ ವೆಚ್ಚ ಹೆಚ್ಚಾಗಿದ್ದರೆ, ಆದಾಯದಲ್ಲಿ ಖೋತಾ ಆಗಿದೆ. ಇದರ ನಡುವೆ ಸಮತೋಲನ ಕಾಪಾಡಲು ದರ ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂದು ಎಸ್ಕಾಂಗಳು ಕೆಇಆರ್ಸಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿವೆ.
ಒಟ್ಟಾರೆ ಪ್ರಸ್ತುತ ಹಾಗೂ ಮುಂದಿನ ಎರಡೂ ಆರ್ಥಿಕ ವರ್ಷಗಳಿಗೆ ವಿದ್ಯುತ್ ದರ ನಿಗದಿ ಮಾಡಲಾಗಿದ್ದರೂ, ಈ ಹಿಂದಿನ ವರ್ಷದ ನಷ್ಟ ಸರಿದೂಗಿಸಲು ಹೆಚ್ಚುವರಿ ವಿದ್ಯುತ್ ದರ ಏರಿಕೆಯೇ KERCಗೆ ಇರುವ ಮಾರ್ಗ ಎನ್ನಲಾಗುತ್ತಿದೆ.
ರಾಜ್ಯದ ಅಗತ್ಯ ವಸ್ತು ಹಾಗೂ ಸೇವೆಗಳ ಬೆಲೆ ಏರಿಕೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಹೈರಾಣಾಗುತ್ತಿದ್ದಾರೆ. ಈ ಮಧ್ಯೆ ವಿದ್ಯುತ್ ಏರಿಕೆಗೂ ತರೆಮರೆಯ ತಯಾರಿ ನಡೆದಿದೆ. ಆದಾಯ ಕೊರತೆ ಹಿನ್ನೆಲೆ ವಿದ್ಯುತ್ ಸರಬರಾಜು ಕಂಪನಿಗಳಿಂದ ಪರ್ಯಾಯ ವ್ಯವಸ್ಥೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC)ಗೆ ಪ್ರಸ್ತಾವನೆ ಸಲ್ಲಿಸಿವೆ. ಬೆಸ್ಕಾಂ ಸೇರಿ ರಾಜ್ಯದ ಹಲವು ಎಸ್ಕಾಂಗಳಿಂದ KERCಗೆ ವಾರ್ಷಿಕ ವರದಿ ಸಲ್ಲಿಕೆಯಾಗಿದ್ದು, ಫೆಬ್ರವರಿ 16 ರಿಂದ ರಾಜ್ಯದ ನಾನಾ ಭಾಗಗಳಲ್ಲಿ KERC ಸಾರ್ವಜನಿಕರ ಆಕ್ಷೇಪಣೆ ಆಲಿಸಲಿದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
Published On - 7:52 pm, Sun, 8 February 26