ಕರ್ನಾಟಕದಲ್ಲಿ ಜಾತಿಗಣತಿ ಸಮೀಕ್ಷೆ: ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ವಿಸ್ತರಣೆ, ಎಲ್ಲಿಯವರೆಗೆ?
ಕರ್ನಾಟಕದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಅವಧಿಯನ್ನು ವಿಸ್ತರಣೆ ಮಾಡಿ ಶಿಕ್ಷಣ ಇಲಾಖೆ (Education Department) ಆದೇಶಿಸಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಗಾದ್ರೆ, ಎಲ್ಲಿಯವರೆಗೆ ಶಾಲೆಗಳಿಗೆ ರಜೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಅಕ್ಟೋಬರ್ 07): ಕರ್ನಾಟಕದಲ್ಲಿ (Karnataka) ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (caste census survey) ನಡೆಯುತ್ತಿದ್ದು, ಇಂದು ಕೊನೆ ದಿನವಾಗಿದೆ. ಆದ್ರೆ, ನಿರೀಕ್ಷೆಯಂತೆ ಸಮೀಕ್ಷೆ ಮುಗಿಯದ ಕಾರಣ ಜಾತಿಗಣತಿ ಅವಧಿಯನ್ನು ವಿಸ್ತರಿಸಲಾಗಿದೆ. ಶಿಕ್ಷಕರನ್ನು ಸಮೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇದರಿಂದ ಅಕ್ಟೋಬರ್ 18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ (School Holiday) ನೀಡಲು ನಿರ್ಧರಿಸಲಾಗಿದೆ. ಈಗಾಲೇ ದಸರಾ ರಜೆಯಲ್ಲಿ ವಿದ್ಯಾರ್ಥಿಗಳಿಗೆ ಇದೀಗ ಜಾತಿಗಣತಿಯ ರಜೆ ಸಿಕ್ಕಂತಾಗಿದೆ.
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇಂದು ಕೊನೆ ದಿನವಾಗಿದ್ದರಿಂದ ಸಿಎಂ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದು, ಶಿಕ್ಷಕರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಸಮೀಕ್ಷೆ ಪೂರ್ಣಗೊಳಿಸಲು ತೀರ್ಮಾನ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ ಅಕ್ಟೋಬರ್ 18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ನೀಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ಖಾಸಗಿ ಶಾಲೆಗಳಿಗೆ ಈ ರಜೆ ಅನ್ವಯವಾಗುವುದಿಲ್ಲ.
ಇದನ್ನೂ ಓದಿ: ಶಾಲೆಗಳಿಗೆ 10 ದಿನ ರಜೆ ಘೋಷಣೆ: ಶಿಕ್ಷಣ ಇಲಾಖೆಯ ಅಧಿಕೃತ ಆದೇಶದಲ್ಲೇನಿದೆ?
ಸಭೆ ಬಳಿಕ ಸಿದ್ದರಾಮಯ್ಯ ಹೇಳಿದ್ದಿಷ್ಟು
ಇನ್ನು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅ.18ರವರೆಗೆ ಎಲ್ಲಾ ಶಾಲೆಗಳಿಗೆ (ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ) ರಜೆ ವಿಸ್ತರಣೆ ಮಾಡಲಾಗುವುದು. ರಜೆ ವಿಸ್ತರಣೆ ಮಾಡಬೇಕೆಂದು ಶಿಕ್ಷಕರ ಸಂಘ ಮನವಿ ಮಾಡಿತ್ತು. ಮನವಿ ಆಧರಿಸಿ ಅ.18ರವರೆಗೆ ಶಾಲೆಗಳಿಗೆ ರಜೆ ನೀಡಲಾಗುವುದು. ಸಮೀಕ್ಷೆಯಲ್ಲಿ 1.20 ಲಕ್ಷ ಶಿಕ್ಷಕರು ಭಾಗಿಯಾಗಿದ್ದಾರೆ. ಪೂರ್ಣ ಕೆಲಸ ಆಗಬೇಕು ಅಂದ್ರೆ ರಜೆ ವಿಸ್ತರಿಸುವಂತೆ ಕೇಳಿದ್ದಾರೆ. ಹಾಗಾಗಿ ನಾಳೆಯಿಂದ ಅಕ್ಟೋಬರ್ 18ರವರೆಗೆ ಶಾಲೆಗಳಿಗೆ ರಜೆ ನೀಡಲು ತೀರ್ಮಾನಿಸಲಾಗಿದೆ. ಪಿಯುಸಿ ಉಪನ್ಯಾಸಕರು ಸಮೀಕ್ಷೆಯಲ್ಲಿ ಭಾಗಿಯಾಗುವಂತಿಲ್ಲ. ಇನ್ನು ಬೆಂಗಳೂರಿನಲ್ಲಿ 6,700 ಶಿಕ್ಷಕರು ಸಮೀಕ್ಷೆ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ನಮ್ಮ ನಿರೀಕ್ಷೆಗ ತಕ್ಕಂತೆ ಸಮೀಕ್ಷೆ ಆಗಿಲ್ಲ
ಸೆಪ್ಟೆಂಬರ್ 22ರಿಂದ ಸಮೀಕ್ಷೆ ಆರಂಭ ಮಾಡಿದ್ದೇವು. ಎಲ್ಲರ ಸರ್ವೆಯನ್ನು ಹಮ್ಮಿಕೊಂಡಿದ್ದೇವೆ ಇಂದಿಗೆ ಮುಗಿಸಬೇಕು ಎಂಬ ತೀರ್ಮಾನ ಮಾಡಿದ್ದೇವು. ಕೆಲವು ಜಿಲ್ಲೆಗಳಲ್ಲಿ ಜಾಸ್ತಿ ಸಮೀಕ್ಷೆ ಆಗಿದೆ.ಇನ್ನು ಕೆಲವು ಜಿಲ್ಲೆಗಳಲ್ಲಿ ಸರ್ವೆ ಕೆಲಸ ಪೂರ್ಣ ಆಗಿಲ್ಲ. ಕೊಪ್ಲಳದಲ್ಲಿ 97% ಆಗಿದೆ, ದಕ್ಷಿಣ ಕನ್ನಡ,ಉಡುಪಿಲ್ಲಿ 62% , 63% ಆಗಿದೆ. ನಮ್ಮ ನಿರೀಕ್ಷೆಗ ತಕ್ಕಂತೆ ಸಮೀಕ್ಷೆ ಆಗಿಲ್ಲ. 1.20 ಲಕ್ಷ ಶಿಕ್ಷಕರು ಸಮೀಕ್ಷೆಯಲ್ಲಿ ಭಾಗಿಯಗಿದ್ದಾರೆ. ಉಳಿದಿರುವ ಸಮೀಕ್ಷೆ ಏನು ಮಾಡಬೇಕು ಎಂಬ ಚರ್ಚೆ ಯಾಗಿದೆ ಎಂದರು.
ಇದನ್ನೂ ನೋಡಿ: ದಸರಾ ರಜೆ 10 ದಿನ ವಿಸ್ತರಣೆ: ಅ.18ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಸಿಎಂ
ದೀಪಾವಳಿಗೂ ಮುನ್ನ ಬೆಂಗಳೂರಿನಲ್ಲಿ ಸಮೀಕ್ಷೆ ಅಂತ್ಯ
ಬೆಂಗಳೂರಿನಲ್ಲಿ ದೀಪಾವಳಿಗೂ ಮುನ್ನ ಸರ್ವೆ ಕಾರ್ಯ ಮುಗಿಯಲಿದೆ. ಬೆಂಗಳೂರಿನಲ್ಲಿ ನಿತ್ಯ ಕನಿಷ್ಠ 10 ಮನೆ ಸರ್ವೆ ಮಾಡಬೇಕೆಂದು ಸೂಚನೆ ನೀಡಲಾಗಿದೆ. 12 ದಿನಗಳಲ್ಲಿ ಸರ್ವೆ ಮುಗಿಸಬೇಕು ಎಂಬ ಸೂಚನೆ ಕೊಡಲಾಗಿದೆ. ಶಿಕ್ಷಕರು ಸಮೀಕ್ಷೆ ಕಾರ್ಯ ಮುಗಿಸುವ ಭರವಸೆಯನ್ನು ಕೊಟ್ಟಿದ್ದಾರೆ. ಸಮೀಕ್ಷೆ ಮಾಡಲು ಹಿಂದೇಟು ಹಾಕಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇನ್ನು ಸಮೀಕ್ಷೆ ಮಾಡುವವರಿಗೆ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ತಿಳಿಸಿದರು.
ಮೃತ ಶಿಕ್ಷಕರ ಕುಟುಂಬಕ್ಕೆ 20 ಲಕ್ಷ ರೂ.ಪರಿಹಾರ
ಇನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ವೇಳೆ ಕೆಲವು ಕಡೆಗಳಲ್ಲಿ ದುರಂತ ನಡೆದಿದ್ದು, ಸಮೀಕ್ಷೆ ಕಾರ್ಯದಲ್ಲಿದ್ದ ಮೂವರು ಶಿಕ್ಷಕರು ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ಇದೀಗ ಪರಿಹಾರ ನೀಡುವಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಮೃತಪಟ್ಟಿರುವ ಮೂವರು ಶಿಕ್ಷಕರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
Published On - 2:57 pm, Tue, 7 October 25




